ಭಾರತದ ಪ್ರಮುಖ ಕೈಗಾರಿಕೆಗಳ ಮೇಲೆ ಪಶ್ಚಿಮ ಏಷ್ಯಾ ಸಂಘರ್ಷ ಯಾವ ರೀತಿ ಪರಿಣಾಮ ಬೀರುತ್ತಿದೆ?
ಸಾಂದರ್ಭಿಕ ಚಿತ್ರ | Photo Credit : freepik
ಪಶ್ಚಿಮ ಏಷ್ಯಾದಲ್ಲಿನ ಯುದ್ಧವು ಜಾಗತಿಕ ತೈಲ ಮತ್ತು ಅನಿಲ ಮಾರುಕಟ್ಟೆಗಳ ಮೇಲೆ ಮಾತ್ರವಲ್ಲ, ಭಾರತದ ಹಲವಾರು ಪ್ರಮುಖ ಕೈಗಾರಿಕೆಗಳ ಮೇಲೂ ಪ್ರಭಾವ ಬೀರುತ್ತಿದೆ.
ಉಕ್ಕು, ರಸಗೊಬ್ಬರ, ಸಿಮೆಂಟ್ ಮತ್ತು ವಿದ್ಯುತ್ ಪ್ರಸರಣದಂತಹ ಕ್ಷೇತ್ರಗಳು ಪಶ್ಚಿಮ ಏಷ್ಯಾದಿಂದ ಅಗತ್ಯ ಕಚ್ಚಾ ವಸ್ತುಗಳ ಆಮದಿನ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿವೆ. ಭಾರತವು ಸುಣ್ಣದ ಕಲ್ಲು, ಗಂಧಕ, ಜಿಪ್ಸಮ್, ಕಬ್ಬಿಣ (DRI) ಮತ್ತು ತಾಮ್ರದ ತಂತಿಗಳಂತಹ ಪ್ರಮುಖ ಕೈಗಾರಿಕಾ ವಸ್ತುಗಳ ಪೂರೈಕೆಯ ಅರ್ಧಕ್ಕಿಂತ ಹೆಚ್ಚುವನ್ನು ಈ ಪ್ರದೇಶದಿಂದಲೇ ಪಡೆಯುತ್ತದೆ.
ಪಶ್ಚಿಮ ಏಷ್ಯಾ ಪ್ರದೇಶವು ವಿಶಾಲವಾಗಿ ಆರು ಗಲ್ಫ್ ಸಹಕಾರ ಮಂಡಳಿ (GCC) ದೇಶಗಳಾದ ಬಹರೇನ್, ಕುವೈತ್, ಒಮಾನ್, ಖತರ್, ಸೌದಿ ಅರೇಬಿಯಾ ಮತ್ತು ಯುಎಇ ಜೊತೆಗೆ ಇರಾನ್, ಇರಾಕ್, ಇಸ್ರೇಲ್, ಜೋರ್ಡಾನ್, ಲೆಬನಾನ್, ಸಿರಿಯಾ ಮತ್ತು ಯೆಮೆನ್ನಂತಹ ಇತರ ಪ್ರಾದೇಶಿಕ ಆರ್ಥಿಕತೆಗಳನ್ನೂ ಒಳಗೊಂಡಿದೆ.
ಈ ಪ್ರದೇಶದಲ್ಲಿ ಸಂಘರ್ಷ ಮುಂದುವರೆದಿದ್ದು, ಕೊಲ್ಲಿಯಾದ್ಯಂತ ಹಲವಾರು ಇಂಧನ ಮತ್ತು ಲಾಜಿಸ್ಟಿಕ್ಸ್ ಸೌಲಭ್ಯಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ನಡೆಯುತ್ತಿವೆ. ಇದರಿಂದ ಪೂರೈಕೆ ಅಡಚಣೆಗಳ ಭಯ ತೀವ್ರಗೊಂಡಿದೆ. ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ಮತ್ತು ವ್ಯಾಪಾರ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಸಾಧ್ಯತೆ ಜಾಗತಿಕ ಇಂಧನ ಪೂರೈಕೆ ಆಘಾತದ ಕಳವಳವನ್ನು ಹೆಚ್ಚಿಸಿದೆ.
ಭಾರತಕ್ಕೆ ಈ ಪ್ರದೇಶವು ಇಂಧನ ಮತ್ತು ಕೈಗಾರಿಕಾ ವಸ್ತುಗಳ ಪ್ರಮುಖ ಪೂರೈಕೆದಾರವಾಗಿದೆ. ಹೊಸದಿಲ್ಲಿ ಮೂಲದ ವ್ಯಾಪಾರ ಚಿಂತಕರ ಚಾವಡಿ GTRI ವರದಿಯ ಪ್ರಕಾರ, ಭಾರತವು 2025ರಲ್ಲಿ ಈ ಪ್ರದೇಶದಿಂದ 98.7 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ. ಆದ್ದರಿಂದ ಈ ಪ್ರದೇಶದಲ್ಲಿನ ಯಾವುದೇ ಅಶಾಂತಿ ಅಥವಾ ಹಾರ್ಮುಜ್ ಜಲಸಂಧಿಯಂತಹ ಹಡಗು ಮಾರ್ಗಗಳಿಗೆ ಅಡ್ಡಿಯು ತೈಲ ಮತ್ತು ಅನಿಲವನ್ನು ಮೀರಿದಂತೆ ಅನೇಕ ಭಾರತೀಯ ಕೈಗಾರಿಕೆಗಳ ಮೇಲೂ ತ್ವರಿತವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ.
ತೈಲ, ಅನಿಲವನ್ನು ಮೀರಿದ ವಲಯಗಳು
ಜಗತ್ತಿಗೆ ತೈಲ ಮತ್ತು ಅನಿಲದ ಪ್ರಮುಖ ಪೂರೈಕೆದಾರವಾಗಿರುವ ಪಶ್ಚಿಮ ಏಷ್ಯಾದಲ್ಲಿನ ಯಾವುದೇ ಅಶಾಂತಿ ಜಾಗತಿಕ ಇಂಧನ ಮಾರುಕಟ್ಟೆಗಳನ್ನು ತಕ್ಷಣವೇ ದುರ್ಬಲಗೊಳಿಸುತ್ತದೆ. ಭಾರತವೂ ಇದಕ್ಕೆ ಹೊರತಾಗಿಲ್ಲ.
ಯುದ್ಧದ ಪರಿಣಾಮಗಳು ಈಗಾಗಲೇ ಕಾಣಿಸಿಕೊಳ್ಳಲು ಪ್ರಾರಂಭಿಸಿವೆ. ಭಾರತದಲ್ಲಿ ಸುಮಾರು ಒಂದು ತಿಂಗಳಿಗೆ ಸಾಕಾಗುವಷ್ಟು ಕಚ್ಚಾ ತೈಲ ಮಾತ್ರ ಸಂಗ್ರಹವಾಗಿರುವುದರಿಂದ ಭಾರತೀಯ ಸಂಸ್ಕರಣಾಗಾರಗಳು ರಷ್ಯಾದಿಂದ ಹೆಚ್ಚಿನ ರಿಯಾಯಿತಿ ದರದಲ್ಲಿ ತೈಲವನ್ನು ಖರೀದಿಸಲು ಪ್ರಾರಂಭಿಸಿವೆ. ಅದೇ ಸಮಯದಲ್ಲಿ ಖತರ್ನಿಂದ ದ್ರವೀಕೃತ ನೈಸರ್ಗಿಕ ಅನಿಲ (LNG) ಸಾಗಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಖಾನೆಗಳಿಗೆ ಸರಬರಾಜು ಕಡಿತಗೊಳಿಸುವ ಬಗ್ಗೆ ಅನಿಲ ಕಂಪನಿಗಳು ಯೋಚಿಸುತ್ತಿವೆ.
ಆದಾಗ್ಯೂ, ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆಗೆ ಅಡಚಣೆಗಳು ಒಂದು ವಾರಕ್ಕಿಂತ ಹೆಚ್ಚು ಕಾಲ ಮುಂದುವರಿದರೆ ಪರಿಣಾಮವು ಇಂಧನ ವಲಯಕ್ಕೆ ಮಾತ್ರ ಸೀಮಿತವಾಗುವುದಿಲ್ಲ.
ಜಿಟಿಆರ್ಐ ವರದಿಯ ಪ್ರಕಾರ ರಸಗೊಬ್ಬರ ಪೂರೈಕೆ, ಉತ್ಪಾದನಾ ಒಳಹರಿವು, ನಿರ್ಮಾಣ ಸಾಮಗ್ರಿಗಳು ಮತ್ತು ವಜ್ರಗಳಂತಹ ರಫ್ತು ಕೈಗಾರಿಕೆಗಳಲ್ಲಿಯೂ ಇದರ ಪರಿಣಾಮ ಕಾಣಿಸಬಹುದು.
ಸಂಘರ್ಷ ಮುಂದುವರಿದರೆ ಈ ಪ್ರದೇಶದಿಂದ ಖನಿಜ ಆಮದನ್ನು ಅವಲಂಬಿಸಿರುವ ನಿರ್ಮಾಣ ವಲಯದ ಮೇಲೂ ಪರಿಣಾಮ ಬೀರುತ್ತದೆ. GTRI ವರದಿಯ ಪ್ರಕಾರ ಭಾರತವು ಪಶ್ಚಿಮ ಏಷ್ಯಾದಿಂದ 483 ಮಿಲಿಯನ್ ಡಾಲರ್ ಮೌಲ್ಯದ ಸುಣ್ಣದ ಕಲ್ಲನ್ನು ಆಮದು ಮಾಡಿಕೊಂಡಿದೆ, ಇದು ಅದರ ಒಟ್ಟು ಆಮದಿನ 68.5% ರಷ್ಟಾಗಿದೆ. ಅದೇ ವೇಳೆ 129 ಮಿಲಿಯನ್ ಡಾಲರ್ ಮೌಲ್ಯದ ಜಿಪ್ಸಮ್ ಅನ್ನು ಆಮದು ಮಾಡಿಕೊಂಡಿದ್ದು, ಇದು ಆಮದುಗಳಲ್ಲಿ 62.1% ರಷ್ಟಾಗಿದೆ.
ನಿರ್ಮಾಣ ಪರಿಸರ ವ್ಯವಸ್ಥೆಗೆ ಈ ಎರಡೂ ಖನಿಜಗಳು ನಿರ್ಣಾಯಕವಾಗಿವೆ. ಸಿಮೆಂಟ್ ಉತ್ಪಾದನೆಗೆ ಸುಣ್ಣದ ಕಲ್ಲು ಪ್ರಮುಖ ವಸ್ತುವಾಗಿದ್ದು, ಜಿಪ್ಸಮ್ ಅನ್ನು ಸಿಮೆಂಟ್ ಹಾಗೂ ಇತರ ನಿರ್ಮಾಣ ಸಾಮಗ್ರಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಪೂರೈಕೆಯಲ್ಲಿ ಯಾವುದೇ ಅಡಚಣೆ ಉಂಟಾದರೆ ಸಿಮೆಂಟ್ ಬೆಲೆಗಳು ಏರಬಹುದು ಮತ್ತು ಮೂಲಸೌಕರ್ಯ ಯೋಜನೆಗಳು ವಿಳಂಬಗೊಳ್ಳಬಹುದು.
ಭಾರತವು ಪಶ್ಚಿಮ ಏಷ್ಯಾದಿಂದ 420 ಮಿಲಿಯನ್ ಡಾಲರ್ ಮೌಲ್ಯದ ಸಲ್ಫರ್ ಅನ್ನು ಆಮದು ಮಾಡಿಕೊಂಡಿದೆ, ಇದು ಅದರ ಆಮದುಗಳಲ್ಲಿ 65.8% ರಷ್ಟಾಗಿದೆ. ರಸಗೊಬ್ಬರಗಳು ಹಾಗೂ ಹಲವು ರಾಸಾಯನಿಕ ಕೈಗಾರಿಕೆಗಳಿಗೆ ಅಗತ್ಯವಾದ ಗಂಧಕವನ್ನು ಸಲ್ಫ್ಯೂರಿಕ್ ಆಮ್ಲ ಉತ್ಪಾದನೆಗೆ ಬಳಸಲಾಗುತ್ತದೆ.
ಅದೇ ರೀತಿ ಭಾರತವು ಈ ಪ್ರದೇಶದಿಂದ 190 ಮಿಲಿಯನ್ ಡಾಲರ್ ಮೌಲ್ಯದ ಡೈರೆಕ್ಟ್ ರೆಡ್ಯೂಸ್ಡ್ ಕಬ್ಬಿಣ (DRI) ಅನ್ನು ಆಮದು ಮಾಡಿಕೊಂಡಿದ್ದು, ಇದು ಅದರ ಆಮದುಗಳಲ್ಲಿ 59.1% ಅನ್ನು ಪ್ರತಿನಿಧಿಸುತ್ತದೆ. DRI ಉಕ್ಕು ತಯಾರಿಕೆಯಲ್ಲಿ ಬಳಸುವ ಪ್ರಮುಖ ವಸ್ತುವಾಗಿದೆ.
ಭಾರತವು ಪಶ್ಚಿಮ ಏಷ್ಯಾದಿಂದ 869 ಮಿಲಿಯನ್ ಡಾಲರ್ ಮೌಲ್ಯದ ತಾಮ್ರದ ತಂತಿಯನ್ನೂ ಆಮದು ಮಾಡಿಕೊಂಡಿದೆ, ಇದು ಅದರ ಒಟ್ಟು ಸರಕುಗಳ ಆಮದಿನ 50.7% ರಷ್ಟಾಗಿದೆ. ತಾಮ್ರದ ತಂತಿ ವಿದ್ಯುತ್ ಪ್ರಸರಣ ಜಾಲಗಳು, ವಿದ್ಯುತ್ ಉಪಕರಣಗಳು ಹಾಗೂ ನವೀಕರಿಸಬಹುದಾದ ಇಂಧನ ಮೂಲಸೌಕರ್ಯಗಳಲ್ಲಿ ಪ್ರಮುಖ ಅಂಶವಾಗಿದೆ. ಆದ್ದರಿಂದ ಈ ವಲಯವು ಈ ಪ್ರದೇಶದಿಂದ ಪೂರೈಕೆಯಲ್ಲಿ ಉಂಟಾಗುವ ಯಾವುದೇ ಅಡಚಣೆಗೆ ಗುರಿಯಾಗುವ ಸಾಧ್ಯತೆ ಇದೆ.
ಸಂಘರ್ಷವು ಭಾರತದ ವಜ್ರ ಸಂಸ್ಕರಣಾ ಉದ್ಯಮದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ದೇಶವು ತನ್ನ ಕಚ್ಚಾ ವಜ್ರಗಳಲ್ಲಿ ಶೇಕಡಾ 40 ಕ್ಕಿಂತ ಹೆಚ್ಚು ಪಶ್ಚಿಮ ಏಷ್ಯಾದಿಂದ ಆಮದು ಮಾಡಿಕೊಳ್ಳುತ್ತದೆ. ನಂತರ ಅವುಗಳನ್ನು ಭಾರತದ ವಜ್ರ ಕತ್ತರಿಸುವ ಮತ್ತು ಹೊಳಪು ನೀಡುವ ಕೇಂದ್ರಗಳಲ್ಲಿ ಬಳಸಲಾಗುತ್ತದೆ. ವಿಶೇಷವಾಗಿ ಗುಜರಾತ್ನ ಸೂರತ್ನಲ್ಲಿ ಸಂಸ್ಕರಿಸಿ ಜಾಗತಿಕ ಮಾರುಕಟ್ಟೆಗಳಿಗೆ ಪಾಲಿಶ್ ಮಾಡಿದ ವಜ್ರಗಳಾಗಿ ರಫ್ತು ಮಾಡಲಾಗುತ್ತದೆ.
ಉಕ್ಕಿನ ವಲಯದ ಮೇಲೆ ಒತ್ತಡ
ಕೆಲವು ಕಚ್ಚಾ ವಸ್ತುಗಳಿಗೆ ಪರ್ಯಾಯ ಮೂಲಗಳು ಲಭ್ಯವಿದ್ದರೂ, ಹೆಚ್ಚುತ್ತಿರುವ ಇಂಧನ ವೆಚ್ಚಗಳು ದೊಡ್ಡ ಕಳವಳವನ್ನು ಉಂಟುಮಾಡುತ್ತವೆ ಎಂದು ಕೈಗಾರಿಕಾ ತಜ್ಞರು ಹೇಳುತ್ತಾರೆ.
ಸುಣ್ಣದ ಕಲ್ಲು ಮತ್ತು ಡಿಆರ್ಐನಂತಹ ವಸ್ತುಗಳಿಗೆ ಪರ್ಯಾಯ ಮೂಲಗಳು ಲಭ್ಯವಿದ್ದರೂ, ನಿಜವಾದ ಸವಾಲು ತೈಲ ಮತ್ತು ಅನಿಲ ಬೆಲೆಗಳ ಏರಿಳಿತವಾಗಿದೆ.
“ಸುಣ್ಣದ ಕಲ್ಲನ್ನು ಥೈಲ್ಯಾಂಡ್ ಮತ್ತು ವಿಯೆಟ್ನಾಂನಂತಹ ದೇಶಗಳಿಂದ ಪಡೆಯಬಹುದು. ಅಗತ್ಯವಿದ್ದರೆ ಡಿಆರ್ಐ ಲಿಬಿಯಾ ಅಥವಾ ಮಲೇಷ್ಯಾದಂತಹ ಸ್ಥಳಗಳಿಂದಲೂ ಪಡೆಯಬಹುದು. ಆದರೆ ತೈಲ ಮತ್ತು ಅನಿಲ ಬೆಲೆಗಳ ಚಲನೆಯೇ ನಿಜವಾದ ಸವಾಲು” ಎಂದು ತಜ್ಞರೊಬ್ಬರು ಹೇಳಿದ್ದಾರೆ.
ಭಾರತದಲ್ಲಿನ ಉಕ್ಕಿನ ಉದ್ಯಮವು ತನ್ನ ಡಿಕಾರ್ಬೊನೈಸೇಶನ್ ಪ್ರಯತ್ನಗಳ ಭಾಗವಾಗಿ ಅನಿಲವನ್ನು ಅವಲಂಬಿಸಿದೆ. ಇದರಿಂದ ಅದು ಜಾಗತಿಕ ಅನಿಲ ಮಾರುಕಟ್ಟೆಯ ಏರಿಳಿತಗಳಿಗೆ ಗುರಿಯಾಗುತ್ತದೆ.
ಉಕ್ಕಿನ ಉದ್ಯಮವು ಅಗತ್ಯ ವಸ್ತುಗಳು ಮತ್ತು ಇಂಧನವನ್ನು ಪಡೆಯಲು ಈಗಾಗಲೇ ಸವಾಲು ಎದುರಿಸುತ್ತಿದೆ. ಹೆಚ್ಚಿನ ಉಕ್ಕು ಸ್ಥಾವರಗಳು ಕಾರ್ಯನಿರ್ವಹಿಸಲು LPG ಮತ್ತು LNG ನಂತಹ ಇಂಧನಗಳನ್ನು ಅವಲಂಬಿಸಿವೆ. ಆದರೆ ಸ್ಥಿರವಾದ ಪೂರೈಕೆಯನ್ನು ಪಡೆಯುವುದು ನಿಜವಾದ ಸಮಸ್ಯೆಯಾಗಿದೆ ಎಂದು ಎಂಜಿನಿಯರಿಂಗ್ ರಫ್ತು ಉತ್ತೇಜನ ಮಂಡಳಿಯ (EEPC) ಅಧ್ಯಕ್ಷ ಪಂಕಜ್ ಚಡ್ಡಾ ತಿಳಿಸಿದ್ದಾರೆ.
ಆದಾಗ್ಯೂ, ರಸಗೊಬ್ಬರ ವಲಯವು ತಕ್ಷಣವೇ ಪರಿಣಾಮ ಅನುಭವಿಸುವುದಿಲ್ಲ. ಆದರೆ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಅಡಚಣೆಗಳು ಮುಂದುವರಿದರೆ ಪರಿಣಾಮ ಬೀರುವ ಸಾಧ್ಯತೆ ಇದೆ.
ICRA ಲಿಮಿಟೆಡ್ನ ಕಾರ್ಪೊರೇಟ್ ರೇಟಿಂಗ್ಸ್ ವಿಭಾಗದ ಹಿರಿಯ ಉಪಾಧ್ಯಕ್ಷ ಪ್ರಶಾಂತ್ ವಶಿಷ್ಠ ಅವರ ಪ್ರಕಾರ, ಎಲ್ಎನ್ಜಿ ಮತ್ತು ಸಲ್ಫರ್ನಂತಹ ರಸಗೊಬ್ಬರ ಉತ್ಪಾದನೆಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಉಂಟಾಗುವ ಅಡಚಣೆಗಳು ಭಾರತದಲ್ಲಿ ರಸಗೊಬ್ಬರ ಬಳಕೆಯ ಮೇಲೆ ತಕ್ಷಣದ ಪರಿಣಾಮ ಬೀರುವುದಿಲ್ಲ. ಆದರೆ ಎಲ್ಎನ್ಜಿ ಪೂರೈಕೆಯಲ್ಲಿ ಅಡಚಣೆಗಳು ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಮುಂದುವರಿದರೆ ಮುಂಬರುವ ಋತುವಿನಲ್ಲಿ ದೇಶೀಯ ಯೂರಿಯಾ ಉತ್ಪಾದನೆ ಮತ್ತು ಲಭ್ಯತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆ ರಸಗೊಬ್ಬರ ಉದ್ಯಮವು ಸಲ್ಫರ್ಗಾಗಿ ಆಗ್ನೇಯ ಏಷ್ಯಾದಂತಹ ಇತರ ಪೂರೈಕೆದಾರರನ್ನು ಹುಡುಕುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಅನಿಲ ಮತ್ತು ಅಡುಗೆ ಇಂಧನ
ಭಾರತದ ದ್ರವೀಕೃತ ನೈಸರ್ಗಿಕ ಅನಿಲ (LNG) ಆಮದುಗಳಲ್ಲಿ ಪಶ್ಚಿಮ ಏಷ್ಯಾ 68% ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ಇದನ್ನು ರಸಗೊಬ್ಬರ ಸ್ಥಾವರಗಳು, ಅನಿಲ ಆಧಾರಿತ ವಿದ್ಯುತ್ ಕೇಂದ್ರಗಳು ಹಾಗೂ CNG ಮತ್ತು ಪೈಪ್ಡ್ ಅಡುಗೆ ಅನಿಲವನ್ನು ಪೂರೈಸುವ ನಗರ ಅನಿಲ ವಿತರಣಾ ಜಾಲಗಳಲ್ಲಿ ಬಳಸಲಾಗುತ್ತದೆ.
ಅಡಚಣೆ ಈಗಾಗಲೇ ಪರಿಣಾಮ ತೋರಿಸಲು ಪ್ರಾರಂಭಿಸಿದೆ. ಹಡಗು ಸಂಚಾರದ ಮೇಲಿನ ನಿರ್ಬಂಧಗಳ ಕಾರಣದಿಂದ ಖತರ್ನ ಪೆಟ್ರೋನೆಟ್ LNG ಸಂಸ್ಥೆ 2026 ಮಾರ್ಚ್ 4ರಿಂದ GAIL ಗೆ ಎಲ್ಎನ್ಜಿ ಸರಬರಾಜನ್ನು ನಿಲ್ಲಿಸಿದೆ.
ಅಡುಗೆ ಇಂಧನದ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ. ಭಾರತದ LPG ಆಮದುಗಳಲ್ಲಿ ಸುಮಾರು 47% ಪಶ್ಚಿಮ ಏಷ್ಯಾದಿಂದ ಬರುತ್ತವೆ. ದೇಶೀಯ ಸಂಗ್ರಹವು ಕೇವಲ ಎರಡು ವಾರಗಳ ಬಳಕೆಗೆ ಮಾತ್ರ ಸಾಕಾಗುವ ಹಿನ್ನೆಲೆ, ದೀರ್ಘಕಾಲದ ಅಡಚಣೆ ಉಂಟಾದರೆ ಲಕ್ಷಾಂತರ ಮನೆಗಳಿಗೆ ಅಡುಗೆ ಅನಿಲ ಲಭ್ಯತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಇದಲ್ಲದೆ ಭಾರತವು ಪಶ್ಚಿಮ ಏಷ್ಯಾದಿಂದ 1.9 ಶತಕೋಟಿ ಡಾಲರ್ ಮೌಲ್ಯದ ಸಂಸ್ಕರಿಸಿದ ಇಂಧನಗಳನ್ನು ಆಮದು ಮಾಡಿಕೊಂಡಿದ್ದು, ಇದು ಆಮದುಗಳಲ್ಲಿ 19.7% ಅನ್ನು ಪ್ರತಿನಿಧಿಸುತ್ತದೆ. ಅದೇ ವೇಳೆ 1.3 ಶತಕೋಟಿ ಡಾಲರ್ ಮೌಲ್ಯದ ಪೆಟ್ರೋಲಿಯಂ ಕೋಕ್ ಅನ್ನು ಆಮದು ಮಾಡಿಕೊಂಡಿದೆ, ಇದು ಆಮದುಗಳಲ್ಲಿ 37.3% ರಷ್ಟಾಗಿದೆ.
ಪೆಟ್ರೋಲಿಯಂ ಕೋಕ್ ಅನ್ನು ಸಿಮೆಂಟ್ ಸ್ಥಾವರಗಳು, ಅಲ್ಯೂಮಿನಿಯಂ ಕರಗಿಸುವ ಘಟಕಗಳು ಹಾಗೂ ವಿದ್ಯುತ್ ಉತ್ಪಾದನೆಯಲ್ಲಿ ಇಂಧನವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಪೂರೈಕೆಯಲ್ಲಿ ಕೊರತೆ ಉಂಟಾದರೆ ಈ ವಲಯಗಳಲ್ಲಿ ಉತ್ಪಾದನಾ ವೆಚ್ಚ ಹೆಚ್ಚುವ ಸಾಧ್ಯತೆ ಇದ್ದು, ನಿರ್ಮಾಣ ಮತ್ತು ಮೂಲಸೌಕರ್ಯ ಯೋಜನೆಗಳು ನಿಧಾನಗೊಳ್ಳಬಹುದು.