ಧರ್ಮದ ಹಾದಿಯಲ್ಲಿ ನಡೆದಾಗ ಸುಸಂಸ್ಕೃತ ಸಮಾಜ ನಿರ್ಮಾಣ: ಹೊಸ್ಮಾರು ಬಲ್ಯೊಟ್ಟು ಶ್ರೀ

Update: 2019-02-10 17:13 GMT

ಕಾರ್ಕಳ, ಫೆ. 10: ಧರ್ಮದ ಹಾದಿಯಲ್ಲಿ ನಡೆದು, ಸತ್ಯ, ಸದ್ವಿಚಾರ, ಸತ್‍ ಚಿಂತನೆಯಿಂದ ಬಾಳಿದರೆ ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಲು ಸಾಧ್ಯ. ಪ್ರತಿಯೊಬ್ಬರು ಈ ನಿಟ್ಟಿನಲ್ಲಿ ಪ್ರಯತ್ನಿಸಿದಾಗ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ ಎಂದು ಹೊಸ್ಮಾರು ಶ್ರೀ ಕ್ಷೇತ್ರ ಬಲ್ಯೊಟ್ಟುನ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹೇಳಿದ್ದಾರೆ.

ಅವರು ಬಿಲ್ಲವ ಸಮಾಜ ಸೇವಾ ಸಂಘ ಕಾರ್ಕಳ ವತಿಯಿಂದ ಪೆರ್ವಾಜೆ  ಶ್ರೀ ನಾರಾಯಣ ಗುರು ಸಭಾಭವನದಲ್ಲಿ ರವಿವಾರ ನಡೆದ ಕಾರ್ಕಳ ತಾಲೂಕು ಬಿಲ್ಲವ ಸಮ್ಮೇಳನ, ವಿದ್ಯಾರ್ಥಿವೇತನ ವಿತರಣೆ, ವಾಣಿಜ್ಯ ಸಂಕೀರ್ಣ ಮತ್ತು ನೂತನ ಸಭಾಂಗಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. 

ಪ್ರಸ್ತುತ ಸಮಾಜದಲ್ಲಿ ಮುಂದುವರೆದ ಆಧುನಿಕತೆಯನ್ನು ಸದುದ್ದೇಶಕ್ಕೆ ಬಳಸಿಕೊಳ್ಳುವ ಮೂಲಕ ಉನ್ನತ ಶಿಕ್ಷಣ ಪಡೆದು, ಸುಸಂಸ್ಕೃತ ವ್ಯಕ್ತಿಯಾಗಿ ಬದುಕಿದರೆ ಬದುಕು ಅರ್ಥಪೂರ್ಣವಾಗುತ್ತದೆ ಎಂದರು. ನಾರಾಯಣ ಗುರುಗಳು ಧರ್ಮದ ಬಗ್ಗೆ ನೀಡಿರುವ ಬೋಧನೆಯನ್ನು ಪ್ರತಿಯೊಬ್ಬರು ಅನುಸರಿಸಿಕೊಳ್ಳುವಂತೆ ಈ ಸಂದರ್ಭ ತಿಳಿಸಿದರು. 

ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿ, ಸಂಘಟನೆಯಿಂದ ನಮ್ಮ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕು. ರಾಜ್ಯದಲ್ಲಿ ನಾಲ್ಕರಿಂದ ಐದನೇ ಸ್ಥಾನದಲ್ಲಿರುವ ಈ ಬಿಲ್ಲವ ಸಮುದಾಯ ಸಂಘಟಿತರಾಗಿ, ನಿರ್ದಿಷ್ಟ ಉದ್ದೇಶವನ್ನು ಸರಕಾರದ ಮುಂದಿಡುವ ಮೂಲಕ ಸಮುದಾಯದ ಅಭಿವೃದ್ದಿಗೆ ಜತೆಯಾಗಿ ಶ್ರಮಿಸಬೇಕು ಎಂದರು. 

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಸಮಾಜದ ಏಳಿಗೆಗೆ ಸಂಘಟನೆ ಅನಿವಾರ್ಯ. ನಮ್ಮ ಸಮುದಾಯವನ್ನು ಪ್ರವರ್ಗ-2ರಿಂದ ಪ್ರವರ್ಗ-1ಕ್ಕೆ ಸೇರ್ಪಡೆಗೊಳಿಸುವ ಹಾಗೂ ನಾರಯಣಗುರು ನಿಗಮ ಸ್ಥಾಪಿಸಿ ನಮ್ಮ ಸಮುದಾಯದ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡುವ ಬಗ್ಗೆ ಸರಕಾರದಿಂದ ಪ್ರಯತ್ನಿಸುವ ಕೆಲಸ ಮಾಡೋಣ ಎಂದರು. 

ನೂತನ ಸಭಾಂಗಣ ಉದ್ಘಾಟಿಸಿದ ವಿಧಾನಸಭೆ ಪ್ರತಿಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ನಮ್ಮ ಸಮುದಾಯಕ್ಕೆ ಕೇವಲ ರಾಜಕೀಯದಲ್ಲಿ ಮಾತ್ರವಲ್ಲ, ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಾತಿನಿತ್ಯ ಸಿಗುವಂತಾಗಬೇಕು. ಐಎಎಸ್, ಐಪಿಎಸ್ ಕಲಿಯುವವರಿಗೆ ಪೂರ್ಣ ಬೆಂಬಲ ಕೊಡಬೇಕಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಸರಕಾರಿ ಕಛೇರಿಗಳಲ್ಲೂ ನಮ್ಮ ಸಮುದಾಯದ ಜನತೆ ಉನ್ನತ ಹುದ್ದೆ ಅಲಂಕರಿ ಸುವಂತಾಗಬೇಕು ಎಂದರು. 

ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಡಾ.ಡಿ.ಆರ್.ರಾಜು ಅಧ್ಯಕ್ಷತೆ ವಹಿಸಿದ್ದರು. 

ಮಹಾರಾಷ್ಟ್ರ ಲೋನಾವಾಲ ಪುರಸಭೆ ಉಪಾಧ್ಯಕ್ಷ ಹಾಗೂ ಉದ್ಯಮಿ ಶ್ರೀಧರ ಎಸ್. ಪೂಜಾರಿ ಬೋಜನ ಶಾಲೆ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ರಶ್ಮಿ ಚಾರಿಟೇಬಲ್ ಟ್ರಸ್ಟ್ ಉದ್ಘಾಟಿಸಿದರು.          

ಬೆಂಗಳೂರು ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ವೇದ ಕುಮಾರ್, ರಶ್ಮಿ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಸಾವಿತ್ರಿ ಡಿ.ಆರ್.ರಾಜು, ಯಕ್ಷಗಾನ ಕಲಾವಿದ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೀತಾರಾಮ್ ಕಟೀಲ್, ವಿವಿಧ ಸಮಿತಿ ಹಾಗೂ ಸಂಘದ ಪದಾಧಿಕಾರಿಗಾದ ಪ್ರಭಾಕರ ಬಂಗೇರ, ಚಂದ್ರಹಾಸ ಸುವರ್ಣ, ಪ್ರದೀಪ್ ಕೋಟ್ಯಾನ್, ಸುಭಿತ್ ಕುಮಾರ್ ಎನ್, ಪ್ರವೀಣ್ ಸುವರ್ಣ, ನವೀನ್ ಸುವರ್ಣ, ಸಂದೇಶ್ ಕೋಟ್ಯಾನ್, ನಾಗಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಸಭಾಕಾರ್ಯಕ್ರಮದಲ್ಲಿ ರಶ್ಮಿ ಚಾರಿಟೇಬಲ್ ಟ್ರಸ್ಟ್‍ಗೆ ಚಾಲನೆ, ಸ್ಮರಣ ಸಂಚಿಕೆ ಬಿಡುಗಡೆ, ಗರಡಿಗಳಲ್ಲಿ ಪೂಜೆ ಸಲ್ಲಿಸುತ್ತಿರುವ ಐವರು ಹಿರಿಯರನ್ನು ಸನ್ಮಾನಿಸುವುದು ಹಾಗೂ ಬಿಲ್ಲವ ಸಮುದಾಯದ ಜನಪ್ರತಿನಿಧಿಗಳಿಗೆ ಅಭಿನಂದನೆ ಮುಂತಾದ ಕಾರ್ಯಕ್ರಮಗಳು ನಡೆದವು. 

ಡಿ.ಆರ್. ರಾಜು ಸ್ವಾಗತಿಸಿದರು, ಪರಮಾನಂದ ಸಾಲ್ಯಾನ್ ಸಿಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು, ನಾಗಮ್ಮ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News