ಪಕ್ಕದ ಮನೆಯವನ ಮೇಲಿನ ಸಿಟ್ಟಿಗೆ ಸ್ವತಃ ಮನೆಗೆ ಬೆಂಕಿ ಹಚ್ಚಿದ!
ಮಂಗಳೂರು, ಫೆ.11: ನಗರದ ಬಾರೆಬೈಲ್ನಲ್ಲಿರುವ ಅಪಾರ್ಟ್ಮೆಂಟ್ವೊಂದರಲ್ಲಿ ರವಿವಾರ ಸಂಜೆ ಸಂಭವಿಸಿದೆ ಎನ್ನಲಾದ ಆಕಸ್ಮಿಕ ಬೆಂಕಿ ಅವಘಡ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತಿದ್ದು, ಪಕ್ಕದ ಮನೆಯವನ ಮೇಲಿನ ಸಿಟ್ಟಿನಿಂದ ಸ್ವತಃ ತನ್ನ ಮನೆಗೆ ವ್ಯಕ್ತಿ ಬೆಂಕಿ ಹಚ್ಚಿದ್ದಾನೆ ಎಂಬ ಅಂಶ ಬೆಳಕಿಗೆ ಬಂದಿದೆ.
ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾರೆಬೈಲಿನಲ್ಲಿರುವ ಅಪಾರ್ಟ್ಮೆಂಟ್ವೊಂದರ ಐದನೇ ಮಹಡಿಯಲ್ಲಿ ರವಿವಾರ ರಾತ್ರಿ 8:30ರ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿತ್ತು ಎನ್ನಲಾಗಿದೆ. ಮಹೇಶ್ ಎಂಬಾತನಿಗೂ ಅದೇ ಅಪಾರ್ಟ್ಮೆಂಟ್ನಲ್ಲಿ ವಾಸವಿರುವ ವ್ಯಕ್ತಿಯೊಬ್ಬರಿಗೂ ವಾಹನದ ಪಾರ್ಕಿಂಗ್ ವಿಚಾರದಲ್ಲಿ ವೈಮನಸ್ಸು ಇತ್ತೆನ್ನಲಾಗಿದೆ. ರವಿವಾರ ಇವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಮಹೇಶ್ ಸ್ವತಃ ಮನೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಎನ್ನಲಾಗಿದೆ.
ಫ್ಲಾಟ್ಗೆ ಬೆಂಕಿ ಹಚ್ಚಿರುವುದರಿಂದ ಕೊಠಡಿ ತುಂಬಾ ವ್ಯಾಪಿಸಿ ಪೀಠೋಪಕರಣಗಳಿಗೂ ಹಾನಿಯಾಗಿತ್ತು ಎಂದು ತಿಳಿದು ಬಂದಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಕದ್ರಿ ಪೊಲೀಸರು ಬೆಂಕಿಯನ್ನು ನಂದಿಸಿದ್ದಾರೆ.
ಆದಾಗ್ಯೂ ಪೊಲೀಸರು ಇದೊಂದು ಆಕಸ್ಮಿಕ ಅವಘಡ ಎಂದು ಪ್ರಕರಣ ದಾಖಲಿಸಿದ್ದಾರೆ.