ಫಲ್ಗುಣಿ ನದಿಯಲ್ಲಿ ಅಕ್ರಮ ಮರಳುಗಾರಿಕೆ: ದೋಣಿ ಸಹಿತ ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ

Update: 2019-02-11 14:31 GMT

ಮಂಗಳೂರು, ಫೆ.11: ತಾಲೂಕಿನ ಅಡ್ಡೂರು ಗ್ರಾಮದ ಫಲ್ಗುಣಿ ನದಿಯಿಂದ ಕಬ್ಬಿಣದ ದೋಣಿ ಮೂಲಕ ಮರಳನ್ನು ಅಕ್ರಮವಾಗಿ ತೆಗೆಯುತ್ತಿದ್ದ ಜಾಗಕ್ಕೆ ಬಜ್ಪೆ ಪೊಲೀಸರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆಗಳು ಜಂಟಿ ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮವಾಗಿ ಮರಳನ್ನು ತೆಗೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಜಂಟಿ ಕಾರ್ಯಾಚರಣೆ ನಡೆಸಿ, ಮರಳು ಹಾಗೂ ಈ ಮರಳುಗಾರಿಕೆಗೆ ತೊಡಗಿಸಿದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಮರಳು ತುಂಬಿದ ಕಬ್ಬಿಣದ ದೋಣಿ, ಕುರುವ ಕಬ್ಬಿಣದ ದೋಣಿ, ಡ್ರೇಜ್ಜಿಂಗ್ ಯಂತ್ರವನ್ನು ಅಳವಡಿಸಲು ತಂದಿರುವ ಕೆಂಪು ಬಣ್ಣದ ಕಬ್ಬಿಣದ ದೋಣಿ ಸೇರಿದಂತೆ ಅಂದಾಜು ಒಟ್ಟು 5 ಲಕ್ಷ ರೂ. ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ ಗೌಡ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಜ್ಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಎಸ್.ಪರಶಿವಮೂರ್ತಿ, ಪೊಲೀಸ್ ಉಪನಿರೀಕ್ಷಕ ಶಂಕರ ನಾಯರಿ, ಎಎಸ್ಸೈ ಪೂವಪ್ಪ, ಠಾಣಾ ಸಿಬ್ಬಂದಿ ರಾಜೇಶ್, ಅಭಿಷೇಕ್ ಪೂಜಾರಿ, ಲಕ್ಷ್ಮಣ್ ಕಾಂಬಳೆ, ಹರಿಪ್ರಸಾದ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಪದ್ಮಶ್ರೀ ,ಕಂದಾಯ ಇಲಾಖೆಯ ನಿರೀಕ್ಷಕ ಆಸಿಫ್ ಮತ್ತು ಗ್ರಾಮ ಕರಣಿಕರಾದ ಪ್ರಮೀಳಾ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News