ಜಿಲ್ಲೆಯ ದಮನಿತ ಮಹಿಳೆಯರಿಗೆ ಸಲಹಾ ಸಮಿತಿ/ಕೋಶ ರಚನೆ: ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ
ಉಡುಪಿ, ಫೆ.12: ಜಿಲ್ಲೆಯ ಲೈಂಗಿಕ ಕಾರ್ಯಕರ್ತೆಯರ (ದಮನಿತ ಮಹಿಳೆ ಯರ) ಜೀವನಮಟ್ಟ ಸುಧಾರಿಸಲು ಮತ್ತು ಅವರ ನಿಸ್ಸಾಹಾಯಕತೆಯನ್ನು ಹೋಗಲಾಡಿಸಿ ಜೀವನಮಟ್ಟ ಸುಧಾರಿಸಲು ಹಾಗೂ ಪುರ್ನವಸತಿ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಅನುಷ್ಠಾನಗೊಳಸಲು ಜಿಲ್ಲಾ ಮಟ್ಟದ ಸಲಹಾ ಸಮಿತಿ/ಕೋಶ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಮಂಗಳವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಲೈಂಗಿಕ ಕಾರ್ಯಕರ್ತೆಯರ ಅಧ್ಯಯನ ಸಮಿತಿ ಸಲ್ಲಿಸಿರುವ ಶಿಪಾರಸ್ಸುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾಮಟ್ಟದ ಸಲಹಾ ಸಮಿತಿ/ಕೋಶ ರಚಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಸ್ತುತ ಇರುವ ಲೈಂಗಿಕ ಕಾರ್ಯಕರ್ತೆಯರ ನಿಖರ ಅಂಕಿ ಅಂಶ ಇಲ್ಲದ ಕಾರಣ, ಇವರ ಬಗ್ಗೆ ಅಂಕಿ ಅಂಶ ಸಂಗ್ರಹಣೆಯನ್ನು ಸ್ವಯಂಸೇವಾ ಸಂಸ್ಥೆಯ ಮೂಲಕ ಮಾಡಿಸುವಂತೆ ಮತ್ತು ಸಮಾಜಶಾಸ್ತ್ರ ವಿದ್ಯಾರ್ಥಿಗಳ ಮೂಲಕ ಸಹ ಮಾಹಿತಿ ಸಂಗ್ರಹಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಲೈಂಗಿಕ ಕಾರ್ಯಕರ್ತೆಯರು ತಮ್ಮ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆಗೆ ಖುದ್ದು ಭೇಟಿಯಾಗಿ ನೀಡಬಹುದು ಅಥವಾ ಪತ್ರ ಮೂಲಕ ಸಹ ತಲುಪಿಸಬಹುದು. ದಮನಿತ ಮಹಿಳೆಯರು ನೀಡಿದ ಮಾಹಿತಿ ಗಳನ್ನು ಗೌಪ್ಯವಾಗಿಡಲಾಗುವುದು ಹಾಗೂ ಸರಕಾರದಿಂದ ನೀಡಲಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ದಮನಿತ ಮಹಿಳೆಯ ಜೀವನಮಟ್ಟವನ್ನು ಸಮಗ್ರವಾಗಿ ಸುಧಾರಿಸಲು ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ, ದಮನಿತ ಮಹಿಳೆಯರಿಗೆ ಧೈರ್ಯ ತುಂಬುವ ಕೆಲಸ ಮಾಡಿ. ಅವರನ್ನು ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಈಗಾಗಲೇ ಜಿಲ್ಲೆಯಲ್ಲಿ ಸರಕಾರದ ಸೌಲ್ಯ ಪಡೆದಿರುವ ದಮನಿತ ಮಹಿಳೆ ಯರು, ತಮ್ಮ ಸಮುದಾಯದ ಇತರರಿಗೂ ಸಹ ಮಾಹಿತಿ ನೀಡುವ ಮೂಲಕ ಅವರಅಭಿವೃದ್ಧಿಗೆ ಸಹಾಯಹಸ್ತ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ ಮೂಲಕ 2015 ರಿಂದ ಇದುವರೆಗೆ 32 ಮಂದಿ ದಮನಿತ ಮಹಿಳೆಯರಿಗೆ ಚೇತನಾ ಯೋಜನೆ ಯಡಿ ನೆರವು ನೀಡಲಾಗಿದೆ. ಈ ವರ್ಷ 6 ಮಂದಿಗೆ ಸೌಲಭ್ಯ ಒದಗಿಸುವ ಗುರಿ ಇದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಮಟ್ಟದ ಸಮಿತಿ ಸದಸ್ಯ ಡಾ. ಶ್ರೀಪಾದ ಶೆಟ್ಟಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.