ಆಳ್ವಾಸ್‍ನಲ್ಲಿ "ಜೀವನಕೌಶಲ್ಯ" ಕಾರ್ಯಾಗಾರ

Update: 2019-02-12 17:07 GMT

ಮೂಡುಬಿದಿರೆ, ಫೆ. 12: ಉತ್ತಮ ತರಬೇತುದಾರರಿಂದ ಪಡೆದ ವಿಷಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದು ತೆಂಕನಿಡಿಯೂರು ಪ್ರಥಮ ದರ್ಜೆ ಮತ್ತು ಸ್ನಾತಕೋತ್ತರ ಕಾಲೇಜಿನ ಉಪನ್ಯಾಸಕ ಪ್ರೊ. ಉದಯ ಶೆಟ್ಟಿ.ಕೆ ಹೇಳಿದರು.

ಅವರು ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ನಡೆದ "ಜೀವನಕೌಶಲ್ಯ" ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಪ್ರಸ್ತುತ ಕಾಲಘಟ್ಟದಲ್ಲಿ ಯಾರು ಮಾನವೀಯತೆಯನ್ನು ಬೆಳೆಸಿಕೊಳ್ಳುವುದಿಲ್ಲವೋ ಅವರು ಅವಿದ್ಯಾವಂತರು. ಆದ್ದರಿಂದ ಜೀವನದಲ್ಲಿ ಮನುಷ್ಯತ್ತ್ವವನ್ನು ಬೆಳೆಸಿಕೊಳ್ಳುವುದರ ಜೊತೆಗೆ ಸ್ಪರ್ಧೆಗೆ ಸಿದ್ಧರಾಗಿರಬೇಕು ಮತ್ತು ಛಲದಿಂದ ಗುರಿಯನ್ನು ಸಾಧಿಸಬೇಕು. ನಮ್ಮ ಕೌಶಲ್ಯದಿಂದ ಮಾತ್ರ ನಾವು ಬೆಳೆಯಲು ಸಾಧ್ಯವೇ ಹೊರತು ನಮ್ಮ ಹಿನ್ನಲೆಯಿಂದಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ಜೀವನದಲ್ಲಿ ಮನುಷ್ಯತ್ತ್ವವನ್ನು ಬೆಳೆಸಿಕೊಳ್ಳದಿದ್ದರೆ ಪಡೆದ ಶಿಕ್ಷಣ ವ್ಯರ್ಥ. ಕತ್ತಿ ಹರಿತವಾದಷ್ಟು ಅದರ ಪ್ರಾಮುಖ್ಯತೆ ಜಾಸ್ತಿಯಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸ್ವನಿಯಂತ್ರಣವನ್ನು ಹೊಂದಿರಬೇಕು. ನಾವು ಪಡೆದುಕೊಂಡಿರುವುದರಲ್ಲಿ ಕುಟುಂಬಕ್ಕಾಗಲೀ ಅಥವಾ ಸಮಾಜಕ್ಕಾಗಲೀ ಜೀವನದುದ್ದಕ್ಕೂ ಸ್ಮರಿಸು ವಂತಹ ಕೊಡುಗೆಯನ್ನ ನೀಡಬೇಕು ಆಗಲೇ ನಾವು ಕಲಿತ ಶಿಕ್ಷಣಕ್ಕೊಂದು ಪ್ರಾಮುಖ್ಯತೆ ದೊರೆಯುವುದು. ಆದ್ದರಿಂದ ನಮ್ಮ ಜೀವಮಾನದಲ್ಲಿ ಸಾಧನೆ ಮಾಡುವಂತಹ ಛಲವನ್ನು ಹೊಂದಿರಬೇಕು ಎಂದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಡೀನ್ ಪ್ರೊ.ಕೆ.ಉಮೇಶ್ ಶೆಟ್ಟಿ, ವಿಭಾಗ ಮುಖ್ಯಸ್ಥ ರಾಮಕೃಷ್ಣ ಶೆಟ್ಟಿ, ವಿಭಾಗದ ಶೈಕ್ಷಣಿಕ ಸಲಹೆಗಾರ್ತಿಅಪರ್ಣಾ ಕೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ರೀಮಾತಾ ಜಿ ಸ್ವಾಗತಿಸಿ, ರೋಜಾ ವಂದಿಸಿದರು. ಕಾರ್ಯಕ್ರಮವನ್ನು ಅನುಷಾ ಐತಾಳ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News