ಮೂಡುಬಿದಿರೆ: ರಸ್ತೆ ಅಪಘಾತದ ಗಾಯಾಳು ಪೊಲೀಸ್ ಪೇದೆ ಸಾವು
Update: 2019-02-12 18:03 GMT
ಮೂಡುಬಿದಿರೆ, ಫೆ. 12: ವಾರದ ಹಿಂದೆ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪೊಲೀಸ್ ಕಾನ್ಸ್ಟೇಬಲ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಜಗದೀಶ್ ಮೃತರು ಎಂದು ಗುರುತಿಸಲಾಗಿದೆ.
ಇವರು ಮೂಡುಬಿದಿರೆ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಚಿತ್ರದುರ್ಗದ ಈಚಲ ನಾಗೇನ ಹಳ್ಳಿ ಮೂಲದ ಜಗದೀಶ್ ತನ್ನ ಬೈಕ್ನಲ್ಲಿ ಹೋಗುತ್ತಿದ್ದ ಸಂದರ್ಭ, ಟಿಪ್ಪರ್ ಲಾರಿಯೊಂದು ಇಲ್ಲಿನ ವಿಶಾಲನಗರದಲ್ಲಿ ಮುಖಾಮುಖಿ ಢಿಕ್ಕಿ ಹೊಡೆದಿದ್ದು, ತಲೆಗೆ ಗಂಭೀರ ಗಾಯಗೊಂಡ ಜಗದೀಶ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಇದೇ ತಿಂಗಳಲ್ಲಿ ಇವರ ವಿವಾಹ ನಡೆಯುವುದರಲ್ಲಿತ್ತು. ಪೇದೆಯ ಸಾವಿಗೆ ಪೊಲೀಸ್ ಹಿರಿಯ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.