ಕುಂಭಮೇಳ: ಬಿಹಾರ ರಾಜ್ಯಪಾಲರು ತಂಗಿದ್ದ ಶಿಬಿರದಲ್ಲಿ ಅಗ್ನಿ ಅವಘಡ

Update: 2019-02-13 13:34 GMT

ಲಕ್ನೊ, ಫೆ.13: ಪ್ರಯಾಗ್‌ರಾಜ್‌ನ ಕುಂಭಮೇಳ ನಗರದಲ್ಲಿ ಮಂಗಳವಾರ ಬಿಹಾರದ ರಾಜ್ಯಪಾಲ ಲಾಲ್ಜಿ ಟಂಡನ್ ತಂಗಿದ್ದ ಶಿಬಿರದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ರಾಜ್ಯಪಾಲರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ಮಂಗಳವಾರ ಸಂಗಮಸ್ಥಳದಲ್ಲಿರುವ ಕುಂಭಮೇಳ ನಗರದ ಸೆಕ್ಟರ್ 20 ಟ್ರಿಬೇನಿ ಶಿಬಿರದಲ್ಲಿ ಲಾಲ್ಜಿ ಟಂಡನ್ ಉಳಿದುಕೊಂಡಿದ್ದರು. ಮಧ್ಯರಾತ್ರಿ ಕಳೆದು 2:30ರ ವೇಳೆಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಅನಾಹುತದಿಂದ ಸ್ಥಳದಲ್ಲಿ ಆತಂಕದ ವಾತಾವರಣ ಉಂಟಾಗಿದ್ದು ಇತರ ಶಿಬಿರಗಳಲ್ಲಿದ್ದವರು ಹೊರಗೆ ಧಾವಿಸಿದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಮೂರು ವಾಹನಗಳು ಬೆಂಕಿ ಇತರ ಶಿಬಿರಗಳಿಗೆ ಹರಡದಂತೆ ಕ್ರಮ ಕೈಗೊಂಡು ಬೆಂಕಿಯನ್ನು ನಂದಿಸಿದರು.

ಈ ಸಂದರ್ಭ ಬಿಹಾರ ಸರಕಾರದ ಭದ್ರತಾ ಅಧಿಕಾರಿಗಳು ತಕ್ಷಣ ರಾಜ್ಯಪಾಲರನ್ನು ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಆದರೆ ರಾಜ್ಯಪಾಲರ ಕನ್ನಡಕ, ಕೈಗಡಿಯಾರ ಹಾಗೂ ಶಿಬಿರದಲ್ಲಿದ್ದ ಪೀಠೋಪಕರಣಗಳು ಬೆಂಕಿಗೆ ಆಹುತಿಯಾಗಿವೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News