ಫೆ.15: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಗರ್ಭಗುಡಿಗೆ ಶಿಖರ ಪ್ರತಿಷ್ಠೆ
ಮಂಗಳೂರು .ಫೆ.14: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಫೆ.15 ರಂದ ಗರ್ಭಗುಡಿಗೆ ಶಿಖರ ಪ್ರತಿಷ್ಠೆ ಹಾಗೂ ಫೆ.17ರವರೆಗೆ ನೂತನ ಧ್ವಜ ಸ್ತಂಭ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಲಶ ಉತ್ಸವ ನಡೆಯಲಿದೆ ಎಂದು ಕ್ಷೇತ್ರದ ನವೀಕರಣದ ರೂವಾರಿ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಶಿವಗಿರಿ ಮಠದ ಬ್ರಹ್ಮಶ್ರೀ ವಿಷುದಾನಂದ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಹಾಗೂ ಶಿವಗಿರಿ ಮಠದ ಶ್ರೀ ಸುಗದಾನಂದ ತಂತ್ರಿ ಮತ್ತು ಶ್ರೀ ಕ್ಷೇತ್ರದ ಲಕ್ಷ್ಮಣ ಶಾಂತಿಯವರ ಪೌರೋಹಿತ್ಯದಲ್ಲಿ ಧ್ವಜ ಸ್ತಂಭದ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಲಶದ ವಿಧಿ ವಿಧಾನಗಳು ನಡೆಯಲಿದೆ. ಫೆ.10ರಿಂದ ಆರಂಭಗೊಂಡು ಧಾರ್ಮಿಕ ಕಾರ್ಯಕ್ರಮಗಳು ನಡೆದಿದೆ. ನಿರೀಕ್ಷೆಗೂ ಮೀರಿ ವಿವಿಧ ಕಡೆಗಳಿಂದ ಕ್ಷೇತ್ರಕ್ಕೆ ಹೊರೆ ಕಾಣಿಕೆ ಬಂದಿದೆ. ಫೆ.15ರಂದು ಬೆ 8.15 ಗಂಟೆಗೆ ಗರ್ಭಗುಡಿ ಶಿಖರ ಪ್ರತಿಷ್ಠೆ , ಚಂಡಿಕಾ ಹೋಮ, ಮಹಾ ಪೂಜೆ ನಡೆಯಲಿದೆ. ಫೆ.16ರಂದು ಮಹಾಗಣಪತಿ ಹೋಮ, ತ್ರಿಕಾಲ ಗುರುಪೂಜೆ, ಮಹಾಪೂಜೆ ನಡೆಯಲಿದೆ. ಫೆ.17ರಂದು ಬೆ.5ಕ್ಕೆ ಮಹಾಗಣಪತಿ ಹೋಮ, ಗುರುಪೂಜೆ, ರಾಜ ಗೋಪು ರ ಶಿಖರ ಪ್ರತಿಷ್ಠೆ, ಕಲಶಾಭಿಷೇಕ, ಅಧಿವಾಸಂ, ವೀರ ಕಾಂಡ ಪೀಠ ಪೂಜೆ, ಕಲಶಾಭಿಷೇಕ, ಧ್ವಜಾರೋಹಣ, ಮಧ್ಯಾಹ್ನ 12.15 ಗಂಟೆಗೆ ಬ್ರಹ್ಮ ಕಲಶಾ ಭಿಷೇಕ, ವಿಶೇಷ ಪೂಜೆ,ನೈವೇದ್ಯ ಪೂಜೆ, ಪ್ರಸನ್ನ ಪೂಜೆ, ಮಹಾ ಮಂಗಳಾರತಿ, ಮಹಾ ಅನ್ನ ಸಂತರ್ಪಣೆ ನಡೆಯಲಿದೆ.
ಇದೇ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಲಾದ ಧ್ವಜ ಸ್ತಂಭ ಪ್ರತಿಷ್ಠಾಪನೆ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯ ಕ್ರಮಗಳು ಕುದ್ರೋಳಿಯಲ್ಲಿ ಸಂಜೆ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೋತ್ಸವ ಹಾಗೂ ಶಿವರಾತ್ರಿ ಮಹೋತ್ಸವ ಫೆ.27ರಿಂದ ಮಾರ್ಚ್ 6ರವರೆಗೆ ನಡೆಯಲಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಫೆ.10ರಿಂದ ಫೆ.17ರವರೆಗೆ ನೂತನ ಧ್ವಜ ಸ್ತಂಭ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಲಶ ಉತ್ಸವ ಹಾಗೂ ಫೆ.27ರಿಂದ ಮಾರ್ಚ್ 6 ರವರೆಗೆ ನಡೆಯಲಿರುವ ಜಾತ್ರಾಮಹೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಕೇತ್ರಾಡಳಿತ ಮಂಡಳಿಯ ಕೋಶಾಧಿಕಾರಿ ಪದ್ಮ ರಾಜ್ ಆರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಪದಾಧಿಕಾರಿಗಳಾದ ಬಿ.ಮಾದವ ಸುವರ್ಣ,ಕ್ಷೇತ್ರ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಊರ್ಮಿಳಾ ರಮೇಶ್,ದೇವಸ್ಥಾನ ಅಭಿವೃದ್ಧಿ ಸಮಿತಿಯ ಸದಸ್ಯರಾದ ಡಾ.ಬಿ.ಜಿ ಸುವರ್ಣ, ದೇವೇಂದ್ರ ಪುಜಾರಿ, ಡಾ.ಅನಸೂಯ ಮೊದಲಾದವರು ಉಪಸ್ಥಿತರಿದ್ದರು.