×
Ad

ಧರ್ಮಸ್ಥಳ: ಪಂಚಮಹಾ ವೈಭವ ಕಾರ್ಯಕ್ರಮದ ಚಪ್ಪರ ಕುಸಿತ

Update: 2019-02-14 22:55 IST

ಬೆಳ್ತಂಗಡಿ,ಫೆ14: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕದ ಅಂಗವಾಗಿ ಪಂಚಮಹಾ ವೈಭವ ಕಾರ್ಯಕ್ರಮ ನಡೆಯುತ್ತಿದ್ದ ಚಪ್ಪರ ಗುರುವಾರ ಮಧ್ಯಾಹನ್ನದ ವೇಳೆಗೆ ಕುಸಿದು ಬಿದ್ದ ಘಟನೆ ಸಂಭವಿಸಿದೆ. ಎಲ್ಲರೂ ಊಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ದೊಡ್ಡ ಅಪಾಯ ತಪ್ಪಿದೆ. 

ಬೃಹದಾಕಾರದ ಚಪ್ಪರವನ್ನು ಪಂಚಮಹಾವೈಭವ ಕಾರ್ಯಕ್ರಮಗಳಿಗಾಗಿ ನಿರ್ಮಿಸಲಾಗಿತ್ತು. ಇಂದು ಬೆಳಿಗ್ಗೆ ಚಪ್ಪರದಲ್ಲಿ ಭರತ ಚಕ್ರವರ್ತಿಯ ಅರಮನೆಯ ವೇದಿಕೆಯ ಕಾರ್ಯಕ್ರಮಗಳು ನಡೆದವು. ಮುನಿವರ್ಯರು ಡಾ. ಹೆಗ್ಗಡೆಯವರು ಹಾಗೂ ಕುಟುಂಬಸ್ಥರು, ಹಾಗೂ ಸಾವಿರಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗಿದ್ದರು. ಸೇರಿದ್ದ ಜನರೂ ಊಟಕ್ಕೆ ತೆರಳಿದ್ದರು. ಇದಾಗಿ ಕೆಲವೇ ಸಮಯದಲ್ಲಿ ಸುಮಾರು 2.10 ರ ಸುಮಾರಿಗೆ ಚಪ್ಪರದ ಮಧ್ಯಭಾಗ ಹಾಗೂ ಮುಂಭಾಗ ಮೆಲ್ಲನೆ ಕುಸಿಯಲಾರಂಭಿಸಿದೆ. ನೋಡು ನೋಡುತ್ತಿದ್ದಂತೆಯೇ ಬೃಹದಾಕಾರದ ಚಪ್ಪರದ ಬಹುಭಾಗ ಕೆಳಕ್ಕೆ ಕುಸಿದಿತ್ತು. ಈ ವೇಳೆ ಚಪ್ಪರದ ಅಡಿಯಲ್ಲಿ ಕೇವಲ ಮೂವತ್ತು ನಲವತ್ತು ಜನ ಮಾತ್ರ ಅಲ್ಲಿದ್ದರು. 

ಇದನ್ನು ಗಮನಿಸುತ್ತಿದ್ದ ಅಗ್ನಿ ಶಾಮಕ ದಳದವರು ಹಾಗೂ ಸ್ಥಳೀಯರು ಪೋಲೀಸರ ಸಹಕಾರದೊಂದಿಗೆ ರಕ್ಷಣಾ ಕಾರ್ಯ ನಡೆಸಿದ್ದಾರೆ. ಪೆಂಡಾಲ್ ಅಡಿಗೆ ಸಿಲುಕಿಕೊಂಡವರನ್ನು ಕೂಡಲೇ ಅದರಿಂದ ಹೊರತಂದಿದ್ದಾರೆ. ಅಲ್ಲಿದ್ದವರಲ್ಲಿ ನಾಲ್ಕು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರನ್ನು ಕೂಡಲೇ ಉಜಿರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಪೆಂಡಾಲ್ ಅರ್ಧ ಕುಸಿದಿದ್ದು ಪೂರ್ತಿ ಕುಸಿಯುವ ಭೀತಿಯಿದ್ದಕಾರಣ ಕೂಡಲೇ ಧರ್ಮಸ್ಥಳದ ಕಾರ್ಮಿಕರು, ಅಗ್ನಿಶಾಮಕ ದಳದವರ ಮಾರ್ಗದರ್ಶನದಲ್ಲಿ ಪೆಂಡಾಲ್ ಅನ್ನು ತೆರವುಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. 

ಕೇವಲ ಒಂದು ಗಂಟೆಯ ಮೊದಲು ಸಾವಿರಾರು ಜನರಿದ್ದ ಚಪ್ಪರ ನೋಡು ನೋಡುತ್ತಿದ್ದಂತೆಯೇ ಕುಸಿದು ಬಿದ್ದಿರುವುದನ್ನು ಕಂಡು ಜನರು ಆಶ್ಚರ್ಯಚಕಿತರಾದರು. ಎಲ್ಲರೂ ಊಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ದೊಡ್ಡ ಅಪಾಯ ತಪ್ಪಿದಂತಾಗಿದೆ. 

ಸ್ಪಷ್ಟನೆ; ಧರ್ಮಸ್ಥಳದಲ್ಲಿನ ಅಮೃತವರ್ಷಿಣಿ ಸಭಾಭವನದ ಹಿಂದೆ ಇರುವ ಪೌದನಾಪುರದ ಅರಮನೆಯ ಚಪ್ಪರ ಧರಾಶಾಹಿಯಾದ ಹಿನ್ನಲೆಯಲ್ಲಿ ಅಗ್ನಿಶಾಮಕ ದಳ ಹಾಗೂ ಪೋಲಿಸರು ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮದವರೊಂದಿಗೆ ಗುರುವಾರ ಮಾತನಾಡಿದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ತಿಪ್ಪೇಸ್ವಾಮಿ ಜಿ. ಅವರು, ಮಧ್ಯಾಹ್ನದ ವೇಳೆ ಎಲ್ಲರೂ ಊಟಕ್ಕೆ ಹೋದ ಸಂದರ್ಭದಲ್ಲಿ ಸುಮಾರು 30 ರಷ್ಟು ಮಂದಿ ಅಲ್ಲಿದ್ದ ವೇಳೆ ಗಾಳಿಯ ಹೊಡತಕ್ಕೆ ಪೆಂಡಾಲ್ ಕುಸಿದು ಬಿದ್ದಿದೆ. ತಕ್ಷಣವೇ ಪೋಲಿಸರು ಹಾಗು ಅಗ್ನಿಶಾಮಕ ದಳದವರು ಸ್ಥಳೀಯರ ಸಹಕಾರದೊಂದಿಗೆ ಪೆಂಡಾಲ್‍ನೊಳಗೆ ಸಿಲುಕಿಕೊಂಡಿದ್ದವರನ್ನು ಹೊರಗೆ ತಂದು ತಿಳಿಸಿದ್ದಾರೆ ಎಂದು ಹೇಳಿದರು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶೇಖರ ವಿ. ಉಪಸ್ಥಿತರಿದ್ದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದು, ಪಂಚಮಹಾವೈಭವದ ಪೆಂಡಾಲ್ ಕುಸಿದಿದ್ದರಿಂದ ಭಾರೀ ಅನಾಹುತಗಳಾದೆ ನಾಲ್ವರಿಗೆ ಸಣ್ಣಪುಟ್ಟಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.  

ಧರ್ಮಸ್ಥಳದಲ್ಲಿ ಯಾವುದೇ ಅನಾಹುತಗಳಾಗಿಲ್ಲ. ಕಾರ್ಯಕ್ರಮಗಳು ಎಂದಿನಂತೆ ನಡೆಯಲಿದೆ. ಕೆಲವು ವಾಹಿನಿಗಳಲ್ಲಿ ಧರ್ಮಸ್ಥಳದಲ್ಲಿ ಗುರುವಾರ ಅನಿರೀಕ್ಷಿತವಾಗಿ ನಡೆದ ಸಣ್ಣ ಘಟನೆಯನ್ನು ವೈಭವೀಕರಿಸಿ ತಪ್ಪು ಮಾಹಿತಿಯನ್ನು ಹರಡಿದ್ದಾರೆ. ಗಾಳಿಗೆ ಪಂಚಮಹಾವೈಭವ ವೇದಿಕೆಯ ಚಪ್ಪರ ಭಾಗಶಃ ಕುಸಿದು ಬಿದ್ದಿದೆ. ನಾಲ್ಕು ಮಂದಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಉಜಿರೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದು ಚೇತರಿಸುತ್ತಿದ್ದಾರೆ. ಸಭೆ ಮುಗಿದು ಎಲ್ಲರೂ ಊಟಕ್ಕೆ ಹೋದ ಬಳಿಕ ಕೇವಲ 30 ಮಂದಿ ಚಪ್ಪರದಡಿ ಇದ್ದು ಘಟನೆ ನಡೆದಾಗ ತಕ್ಷಣ ಎಲ್ಲರೂ ಹೊರಗೆ ಬಂದಿದ್ದಾರೆ.

ಧರ್ಮಸ್ಥಳ ಶಾಂತಮಯವಾಗಿದ್ದು ಮಸ್ತಕಾಭಿಷೇಕದ ಎಲ್ಲಾ ಕಾರ್ಯಕ್ರಮಗಳು ನಿಗದಿಯಾದಂತೆ ನಡೆಯುತ್ತವೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಪುಸ್ತಕ ಬಿಡುಗಡೆ ಸಮಾರಂಭವು ಗುರುವಾರ ಸಂಜೆ ಸುಗಮವಾಗಿ ನಡೆದಿದೆ. ಶುಕ್ರವಾರದ ಎಲ್ಲಾ ಕಾರ್ಯಕ್ರಮಗಳು ನಿಗದಿಯಾದಂತೆ ನಡೆಯುತ್ತವೆ. ಯಾವುದೇ ಗೊಂದಲವಿಲ್ಲ. ಆದುದರಿಂದ ಯಾರು ಕೂಡಾ ಅನಧಿಕೃತ ಗಾಳಿ ಸುದ್ದಿಗೆ ಕಿವಿಗೊಡಬಾರದಾಗಿ ಧರ್ಮಸ್ಥಳದ ಮಸ್ತಕಾಭಿಷೇಕ ಮಹೋತ್ಸವ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News