ಕಾವಳಪಡೂರು: ಮಗುಸ್ನೇಹಿ ಸಮಾಜ ನಿರ್ಮಾಣ ಸಂವಾದ

Update: 2019-02-15 15:27 GMT

ವಿಟ್ಲ, ಫೆ. 15:  ಮಗುಸ್ನೇಹಿ ಸಮಾಜ ನಿರ್ಮಾಣ ಕುರಿತು ಜನಪ್ರತಿನಿಧಿಗಳು ಮತ್ತು ಇಲಾಖಾಧಿಕಾರಿಗಳೊಂದಿಗೆ ಮಕ್ಕಳ ಮುಖಾಮುಖಿ ಸಂವಾದ ಕಾರ್ಯಕ್ರಮವು ಶುಕ್ರವಾರ ಕಾವಳಪಡೂರು ಪಂಚಾಯತಿಯಲ್ಲಿ ನಡೆಯಿತು.

ಪಡಿ ಮಂಗಳೂರು ಮತ್ತು  ಶಿಕ್ಷಣ ಸಂಪನ್ಮೂಲ ಕೇಂದ್ರ ಬಂಟ್ವಾಳ ಆಶ್ರಯದಲ್ಲಿ ತಾಲೂಕು ಪಂಚಾಯತು ಬಂಟ್ವಾಳ, ಸಾರ್ವಜನಿಕ ಶಿಕ್ಷಣ ಇಲಾಖೆ ಬಂಟ್ವಾಳ, ಸ್ಥಳೀಯ ಗ್ರಾಮ ಪಂಚಾಯತುಗಳು ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಲೂಕು ಪಂಚಾಯತು ಅಧ್ಯಕ್ಷ ಕೆ.ಚಂದ್ರಹಾಸ ಕರ್ಕೆರ ಉದ್ಘಾಟಿಸಿದರು. ಮಕ್ಕಳ ಭಾವನೆಗಳನ್ನು ಅರ್ಥಮಾಡಿಕೊಂಡು ಅವರ ಸಮಗ್ರ ಬೆಳವಣಿಗೆಗೆ ಪೂರಕವಾದ ಎಲ್ಲಾ ರೀತಿಯ ಸವಲತ್ತುಗಳನ್ನು ಒದಗಿಸಿಕೊಡುವಲ್ಲಿ ಸಮಾಜದಲ್ಲಿ ಸಂಘಟಿತ ಪ್ರಯತ್ನ ನಡೆಯಬೇಕಾಗಿದೆ. ಮಕ್ಕಳ ಭಾಗವಹಿಸುವಿಕೆಗೆ ಅವಕಾಶ ನೀಡುತ್ತಾ, ಅವರ ಕನಸುಗಳನ್ನು ನನಸಾಗಿಸಲು ನಾವೆಲ್ಲ ಪ್ರಯತ್ನಪಟ್ಟರೆ ಮಗುಸ್ನೇಹಿ ಸಮಾಜ ನಿರ್ಮಾಣವಾಗುತ್ತದೆ, ಇಂತಹ ಪ್ರಯತ್ನಗಳು ಎಲ್ಲೆಡೆ ನಡೆಯುವಲ್ಲಿ ನಾವು ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದು ಅವರು ಹೇಳಿದರು. 

ಕಾವಳಪಡೂರು ಗ್ರಾಮ ಪಂಚಾಯತು ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಮಕ್ಕಳಿಗೆ ಅವರದ್ದೇ ಆದ ಹಕ್ಕುಗಳಿದೆ. ಅದನ್ನು ದೊರಕಿಸಿಕೊಡುವಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕು.ಅದರೊಂದಿಗೆ ಮಕ್ಕಳು ಪಾಲಿಸಬೇಕಾದ ಕರ್ತವ್ಯಗಳ ಬಗ್ಗೆಯೂ ಅವರಿಗೆ ಅರಿವು ಮೂಡಿಸಬೇಕು ಎಂದರು. 

ತಾಲೂಕು ಪಂಚಾಯತ್ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ ಮಾತನಾಡಿ ಮಗುಸ್ನೇಹಿ ಸಮಾಜ ನಿರ್ಮಾಣಕ್ಕೆ ಬೆಂಬಲ ವ್ಯಕ್ತಪಡಿಸಿದರು. ನಾವೂರು ಗ್ರಾಮ ಪಂಚಾಯತು ಅಧ್ಯಕ್ಷೆ ಗುಲಾಬಿ, ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷೆ ಸವಿತಾ ನಿರ್ಮಲ್, ಎಸ್. ಐ. ಪ್ರಸನ್ನ, ಶಿಕ್ಷಣ ಇಲಾಖೆಯ ಸುಶೀಲ, ಜ್ಯೋತಿ, ಹಿರಿಯ ರಂಗ ನಿರ್ದೇಶಕ ಮಂಜುವಿಟ್ಲ, ರಾಷ್ಟ್ರಪ್ರಶಸ್ತಿ ವಿಜೇತ ಮುಖ್ಯ ಶಿಕ್ಷಕ ಕೆ.ರಮೇಶ್ ನಾಯಕ್ ರಾಯಿ, ಅಂಗನವಾಡಿ ಮೇಲ್ವಿಚಾರಕಿ ಸುಜಾತ, ಪಿಡಿಓ ರಚನ್ ಕುಮಾರ್,  ಕಾರ್ಯದರ್ಶಿ ಗಣೇಶ್ ಶೆಟ್ಟಿಗಾರ್, ಮಕ್ಕಳ ರಕ್ಷಣಾ ಘಟಕದ ಕುಮಾರ್, ಪಡಿ ಸಂಸ್ಥೆಯ ಚಂದ್ರಶೇಖರ್, ಆರೋಗ್ಯ ಇಲಾಖೆಯ ಬವಿತ, ರಮ್ಯಲತ, ಮಧ್ವ ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕ ಶಿಕ್ಷಕಿಯರು, ಪಂಚಾಯತು ಸದಸ್ಯರು, ಎಸ್ ಡಿ ಎಂ ಸಿ ಸದಸ್ಯರು ಉಪಸ್ಥಿತರಿದ್ದರು. ಪಡಿ ಸಂಸ್ಥೆಯ ನಿರ್ದೇಶಕ ರೆನ್ನಿ ಡಿಸೋಜ ಪ್ರಾಸ್ತಾವಿಕ ಮಾತುಗಳನ್ನಾಡಿ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.

ಪಡಿ ಸಂಸ್ಥೆಯ ತರಬೇತುದಾರ ಗೋಪಾಲ ಅಂಚನ್ ಸ್ವಾಗತಿಸಿದರು. ಸಂಯೋಜಕಿ ರಾಜೇಶ್ವರಿ ವಂದಿಸಿದರು. ಕಾವಳಮೂಡೂರು ಶಾಲಾ ಮುಖ್ಯಶಿಕ್ಷಕಿ ಪ್ರೇಮ ಕಾರ್ಯಕ್ರಮ ನಿರೂಪಿಸಿದರು. ಮಧ್ವ ಕ್ಲಸ್ಟರ್ ವ್ಯಾಪ್ತಿಯ ಸರಕಾರಿ ಶಾಲೆಗಳ ಮಕ್ಕಳು ಸಂವಾದದಲ್ಲಿ ಪಾಲ್ಗೊಂಡು ತಮ್ಮ ಸಮಸ್ಯೆ, ಬೇಡಿಕೆಗಳನ್ನು ಮುಂದಿಟ್ಟರು. ಜನಪ್ರತಿನಿಧಿಗಳು ಮತ್ತು ಇಲಾಖಾಧಿಕಾರಿಗಳು ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವುದರೊಂದಿಗೆ ಕೆಲವೊಂದು ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು.

ಸಭಾ ಕಾರ್ಯಕ್ರಮಕ್ಕಿಂತ ಮೊದಲು ಮಧ್ವ ಕ್ಲಸ್ಡರ್ ವ್ಯಾಪ್ತಿಯ ಸರಕಾರಿ ಶಾಲಾ ಮಕ್ಕಳನ್ನೊಳಗೊಂಡ " ಕನಸು ಕಲಾತಂಡ"ದ ಮಕ್ಕಳಿಂದ  ಗೋಪಾಲ ಅಂಚನ್ ರಚಿಸಿ, ನಿರ್ದೇಶಿಸಿದ " ಮಗುಸ್ನೇಹಿ ಸಮಾಜ" ನೃತ್ಯ ನಾಟಕ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News