ಮನೆಗೆ ನುಗ್ಗಿ ನಗ-ನಗದು ಕಳವು: ದೂರು

Update: 2019-02-15 17:16 GMT

ಮಂಗಳೂರು, ಫೆ.15: ನಗರದ ಬೆಂಗ್ರೆಯ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ಸಹಿತ ನಗದು ಕಳವು ಮಾಡಿದ ಘಟನೆ ನಡೆದಿದೆ.

ಬೆಂಗ್ರೆ ನಿವಾಸಿ ಗೀತಾಂಜಲಿ ಅವರು ಫೆ.5ರಂದು ಮನೆಗೆ ಬೀಗ ಹಾಕಿ ತಮ್ಮ ಕೆಲಸದ ಸ್ಥಳವಾದ ಉಳ್ಳಾಲಕ್ಕೆ ಹೋಗಿದ್ದರು. ಬಳಿಕ ಅವರ ತಂದೆ ನಿಧನರಾದ ಕಾರಣ ಉಳ್ಳಾಲದಲ್ಲಿಯೇ ಉಳಿಕೊಂಡಿದ್ದು, ಫೆ.14ರಂದು ವಾಪಸಾಗಿದ್ದರು. ಆದರೆ ಮನೆಗೆ ಬಂದು ನೋಡುವಾಗ ಮನೆಯ ಮೇಲ್ಛಾವಣಿಗೆ ಅಳವಡಿಸಿದ ಶೀಟು ಮುರಿದು ಕೆಳಗೆ ಬಿದ್ದಿದ್ದು ಹಂಚುಗಳು ಏರುಪೇರಾಗಿದ್ದವು.

ಕೂಡಲೇ ಒಳಹೋಗಿ ನೋಡಿದಾಗ ಬೆಡ್‌ರೂಮ್‌ನಲ್ಲಿರಿಸಿದ್ದ 2 ಕಪಾಟುಗಳು ಜಖಂಗೊಂಡು ತೆರೆದಂತಿದ್ದು, ಅದರಲ್ಲಿದ್ದ 2 ಚಿನ್ನದ ಉಂಗುರ, 1 ಚಿನ್ನದ ನಾಣ್ಯ, 10,300 ರೂ. ನಗದು, ಬೆಳ್ಳಿಯ ಕಾಲ್ಗೆಜ್ಜೆ, 1 ಟಾರ್ಚ್, 1 ವಾಚ್‌ಗಳನ್ನು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದೆ.

ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News