ಮೊಬೈಲ್ ಸುಲಿಗೆ ಪ್ರಕರಣ: ಆರೋಪಿ ಸೆರೆ
ಮಂಗಳೂರು, ಫೆ.15: ನಗರದಲ್ಲಿ ನಡೆದ ಮೊಬೈಲ್ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಪಾಂಡೇಶ್ವರ ಪೊಲೀಸರು ಶುಕ್ರವಾರ ಬಂಧಿಸಿ, ಆತನಿಂದ 5 ಮೊಬೈಲ್ ಸೇರಿದಂತೆ 1.8ಲಕ್ಷ ರೂ. ವೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಜಾಲ್ ಪಕ್ಕಲಡ್ಕ ನಿವಾಸಿ ಮುಹಮ್ಮದ್ ಅಫ್ರಿದ್ (21) ಬಂಧಿತ ಆರೋಪಿ.
ಜ.20ರಂದು ರಾತ್ರಿ 8:45ಕ್ಕೆ ವ್ಯಕ್ತಿಯೊಬ್ಬರು ನಗರದ ಗೂಡ್ಸ್ಶೆಡ್ ಬಳಿ ನಡೆದುಕೊಂಡು ಹೋಗುತ್ತಿರುವಾಗ ಮೋಟಾರ್ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಅಂಗಿಯ ಕಿಸೆಗೆ ಕೈ ಹಾಕಿ ವಿವೋ ಕಂಪೆನಿ ಮೊಬೈಲ್ನ್ನು ಬಲಾತ್ಕಾರವಾಗಿ ಎಳೆದು ಪರಾರಿಯಾಗಿದ್ದರು. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಶುಕ್ರವಾರ ಆರೋಪಿ ಆಫ್ರೀದ್ ಎಂಬಾತನು ನಗರದ ಸೆಂಟ್ರಲ್ ಮಾರ್ಕೆಟ್ನಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಪಾಂಡೇಶ್ವರ ಇನ್ಸ್ಪೆಕ್ಟರ್ ಕೆ.ಎಂ. ಶರ್ೀ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ.
ಆರೋಪಿಯಿಂದ ಸುಲಿಗೆ ಮಾಡಿದ ಮೊಬೈಲ್ ಹಾಗೂ ಆರೋಪಿ ಒಂದೂವರೆ ತಿಂಗಳ ಹಿಂದೆ ದಕ್ಷಿಣ ಧಕ್ಕೆಯಲ್ಲಿ ನಡೆದುಕೊಂಡು ಹೋಗುವ ವ್ಯಕ್ತಿಗಳಿಂದ ಸುಲಿಗೆ ಮಾಡಿದ ನಾಲ್ಕು ಮೊಬೈಲ್, ಬೈಕ್ ಸೇರಿದಂತೆ 1.8ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಇನ್ನೋರ್ವ ಆರೋಪಿಗೆ ಶೋಧ: ಈ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗೆ ಶೋಧ ನಡೆಯುತ್ತಿದೆ. ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಉಪ ಪೊಲೀಸ್ ಆಯುಕ್ತರಾದ ಹನುಮಂತರಾಯ, ಉಮಾಪ್ರಶಾಂತ್, ಎಸಿಪಿ ಭಾಸ್ಕರ್ ವಿ. ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಾಂಡೇಶ್ವರ ಇನ್ಸ್ಪೆಕ್ಟರ್ ಕೆ.ಎಂ. ಶರ್ೀ, ಎಸ್ಐಗಳಾದ ರಾಜೇಂದ್ರ, ಮಂಜುಳಾ ಎಲ್ ಹಾಗೂ ಠಾಣಾ ಸಿಬ್ಬಂದಿ ಭಾಗವಹಿಸಿದ್ದರು.