ಯೋಧನ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ನಕ್ಕು ಕೈಬೀಸಿದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್!

Update: 2019-02-17 07:49 GMT

ಲಕ್ನೋ, ಫೆ.17: ಉನ್ನಾವೊ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು ಸಿಆರ್‍ಪಿಎಫ್ ಯೋಧ ಅಜಿತ್ ಕುಮಾರ್ ಅವರ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಅದೇ ವಾಹನದಲ್ಲಿಟ್ಟುಕೊಂಡು ನಗುತ್ತಾ ಜನಸಮೂಹದತ್ತ ಕೈಬೀಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಶನಿವಾರ ಮುಂಜಾನೆ ಹುತಾತ್ಮ ಯೋಧನ ಪಾರ್ಥಿವ ಶರೀರವನ್ನು ಉನ್ನಾವೊಗೆ ತರಲಾಗಿತ್ತು. ಈ ವೇಳೆ ಯೋಧನಿಗೆ ಅಂತಿಮ ನಮನ ಸಲ್ಲಿಸುವ ಸಲುವಾಗಿ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನರತ್ತ ಸಾಕ್ಷಿ ಮಹಾಜನ್ ನಗುತ್ತಾ ಕೈಬೀಸಿದ್ದರು.

ಸಂಸದರ ಈ ನಡವಳಿಕೆಯನ್ನು ಕಾಂಗ್ರೆಸ್ ವಕ್ತಾರರಾದ ಪ್ರಿಯಾಂಕಾ ಚತುರ್ವೇದಿ ಟ್ವಿಟರ್ ‍ನಲ್ಲಿ ಕಟುವಾಗಿ ಟೀಕಿಸಿದ್ದಾರೆ. ಅಂತಿಮ ಯಾತ್ರೆ ವೇಳೆ ಸಂಸದರ ಈ ನಡವಳಿಕೆಯನ್ನು ಟೀಕಿಸಿ ಹಲವು ಮಂದಿ, ಸಾಕ್ಷಿ ಮಹಾರಾಜ್ ನಗುತ್ತಾ ಕೈಬೀಸುತ್ತಿರುವ ಚಿತ್ರ ಹಾಗೂ ವಿಡಿಯೊಗಳನ್ನು ಶೇರ್ ಮಾಡಿದ್ದಾರೆ. ಪುಲ್ವಾಮಾ ಹುತಾತ್ಮರ ಪಾರ್ಥಿವ ಶರೀರದ ಅಂತಿಮ ಯಾತ್ರೆ ನಡೆಯುತ್ತಿದ್ದ ಟ್ರಕ್‍ ನಲ್ಲೇ ನಿಂತ ಬಿಜೆಪಿ ಸಂಸದ ಸಾಕ್ಷಿ ಮಹಾಜನ್ ನಗುತ್ತಿರುವುದು ನಾಚಿಕೆಗೇಡು ಎಂದು ಟ್ವಿಟರ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.

ಬಿಜೆಪಿ ಸಂಸದ ಇದನ್ನು ಸಂಭ್ರಮಿಸುವಂತಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News