ಪ್ರಚೋದನಕಾರಿ ಫ್ಲೆಕ್ಸ್: ಎಸ್ಡಿಪಿಐಯಿಂದ ಉಳ್ಳಾಲ ಪೊಲೀಸ್ ಠಾಣೆಗೆ ದೂರು
ಮಂಗಳೂರು, ಫೆ. 18: ಉಳ್ಳಾಲದ ಜನನಿಬಿಡ ಪ್ರದೇಶದಲ್ಲಿ ಇತ್ತೀಚೆಗೆ ಪುಲ್ವಾಮದಲ್ಲಿ ಉಗ್ರರು ಯೋಧರ ಮೇಲೆ ದಾಳಿ ನಡೆಸಿ ಹತೈಗೈದ ಕೃತ್ಯಕ್ಕೆ ಸಂಬಂಧಿಸಿ ‘ವಿಶ್ವಹಿಂದೂ ಪರಿಷತ್ ಬಜರಂಗ ದಳ’ ಎಂಬ ಹೆಸರಿನಲ್ಲಿ ಉಳ್ಳಾಲ ಬೈಲ್ನ ಶ್ರೀ ವೈದ್ಯನಾಥ ಛತ್ರಪತಿ ಶಾಖೆಯ ವತಿಯಿಂದ ಪ್ರಚೋದನಕಾರಿ ಫ್ಲೆಕ್ಸ್ ಅಳವಡಿಸಿ ಅದರಲ್ಲಿ ಕೋಮು ದ್ವೇಷವನ್ನು ಹರಡಿಸಿ ಗಲಭೆಯನ್ನು ಸೃಷ್ಟಿಸುವ ಹುನ್ನಾರ ನಡೆಸಿದ್ದಾರೆ ಎಂದು ಎಸ್ಡಿಪಿಐ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದೆ.
‘ದೇಶದ ಯೋಧರ ಸಾವಲ್ಲೂ ಅಲ್ಪಸಂಖ್ಯಾತರ ನಗು, ಮುಸ್ಲಿಮರ ಮೇಲೆ ಐಸಿಸ್ ನಂಟು ಎಂಬ ರೀತಿಯಲ್ಲಿ ಹಲವಾರು ಪ್ರಚೋದನಕಾರಿ ವಿಚಾರವನ್ನು ಬ್ಯಾನರ್ ನಲ್ಲಿ ಅಳವಡಿಸಿದ್ದು, ಇದು ಹಿಂದೂ ಮುಸಲ್ಮಾನರ ನಡುವೆ ಬಿರುಕು ಉಂಟು ಮಾಡುವ ಪ್ರಯತ್ನವಾಗಿದೆ. ಆದುದರಿಂದ ಪೊಲೀಸ್ ಇಲಾಖೆ ಕೂಡಲೇ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಜರಗಿಸಲು ಒತ್ತಾಯಿಸಿ ಎಸ್ಡಿಪಿಐ ಉಳ್ಳಾಲ ಕಾರ್ಯಕರ್ತರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.