ಸಿಐಡಿ ವಿಭಾಗದ ಮುಖ್ಯಸ್ಥರಾಗಿ ಕೋಲ್ಕತಾ ಪೊಲೀಸ್ ಆಯುಕ್ತರ ವರ್ಗಾವಣೆ
ಕೋಲ್ಕತಾ,ಫೆ.19: ಶಾರದಾ ಮತ್ತು ರೋಸ್ವ್ಯಾಲಿ ಚಿಟ್ಫಂಡ್ ಹಗರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐನಿಂದ ವಿಚಾರಣೆಗೊಳಗಾಗಿದ್ದ ಕೋಲ್ಕತಾದ ಪೋಲಿಸ್ ಆಯುಕ್ತ ರಾಜೀವ ಕುಮಾರ್ ಅವರನ್ನು ಮಂಗಳವಾರ ಸಿಐಡಿ ವಿಭಾಗದ ಎಡಿಜಿ ಮತ್ತು ಐಜಿಪಿಯನ್ನಾಗಿ ವರ್ಗಾವಣೆಗೊಳಿಸಲಾಗಿದೆ. ಕುಮಾರ್ ಮೂರು ವರ್ಷಗಳ ಕಾಲ ಕೋಲ್ಕತಾದ ಪೊಲೀಸ್ ಆಯುಕ್ತರಾಗಿದ್ದರು ಮತ್ತು ಮೇ ತಿಂಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ಅವರು ವರ್ಗಾವಣೆಗೊಳ್ಳಬೇಕಿತ್ತು ಎಂದು ಮೂಲಗಳು ತಿಳಿಸಿದವು.
1991ರ ತಂಡದ ಐಪಿಎಸ್ ಅಧಿಕಾರಿ ಅನುಜ್ ಶರ್ಮಾ ಅವರು ನೂತನ ಕೋಲ್ಕತಾ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಸಿಬಿಐ ಇತ್ತೀಚಿಗಷ್ಟೇ ಶಿಲಾಂಗ್ನಲ್ಲಿ ಕುಮಾರ್ ಅವರನ್ನು ಚಿಟ್ಫಂಡ್ ಹಗರಣಗಳಿಗೆ ಸಂಬಂಧಿಸಿದಂತೆ ಐದು ದಿನಗಳ ಕಾಲ ವಿಚಾರಣೆ ನಡೆಸಿತ್ತು. ಕುಮಾರ್ ಅವರು ಹಗರಣದ ತನಿಖೆಗಾಗಿ ರಚಿಸಲಾಗಿದ್ದ ವಿಶೇಷ ತನಿಖಾ ತಂಡದ ನೇತೃತ್ವ ವಹಿಸಿದ್ದು,ಸಾಕ್ಷಗಳನ್ನು ನಾಶಗೊಳಿಸಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು.