ಹುತಾತ್ಮ ಯೋಧನ ಕುಟುಂಬಕ್ಕೆ ಕೇರಳ ಸರಕಾರದಿಂದ 25 ಲ.ರೂ. ಪರಿಹಾರ
Update: 2019-02-19 16:12 GMT
ತಿರುವನಂತಪುರ,ಫೆ.19: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಇತ್ತೀಚಿಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿರುವ ಸಿಆರ್ಪಿಎಫ್ ಯೋಧ, ವಯನಾಡ್ ನಿವಾಸಿ ವಿ.ವಿ.ವಸಂತ ಕುಮಾರ್(44) ಅವರ ಕುಟುಂಬಕ್ಕೆ ಕೇರಳ ಸರಕಾರವು ಮಂಗಳವಾರ 25 ಲ.ರೂ.ಗಳ ಪರಿಹಾರವನ್ನು ಪ್ರಕಟಿಸಿದೆ.
ಕುಮಾರ್ ಅವರ ಮಕ್ಕಳಾದ ಅನಾಮಿಕಾ(8) ಮತ್ತು ಅಮನದೀಪ್(5) ಅವರ ಶೈಕ್ಷಣಿಕ ವೆಚ್ಚವನ್ನು ಭರಿಸಲು ಸಹ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ನಿರ್ಧರಿಸಿದೆ.
ಪಶು ವೈದ್ಯಕೀಯ ವಿವಿಯಲ್ಲಿ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕುಮಾರ್ ಪತ್ನಿ ಶೀನಾ ಅವರ ಉದ್ಯೋಗವನ್ನು ಕಾಯಂಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ವಿಜಯನ್ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಕುಮಾರ್ ಕುಟುಂಬಕ್ಕಾಗಿ ನೂತನ ಮನೆಯನ್ನು ನಿರ್ಮಿಸಲಾಗುವುದು ಎಂದ ಅವರು,ಕುಮಾರ್ ಪತ್ನಿಗೆ 15 ಲ.ರೂ. ಮತ್ತು ತಾಯಿಗೆ 10 ಲ.ರೂ. ಪರಿಹಾರ ನೀಡಲಾಗುವುದು ಎಂದರು.