ಕನ್ನಡದ ಮೊದಲ ಕ್ರೀಡಾ ಚಿತ್ರ ‘ಪಂಚತಂತ್ರ’ ಟೀಸರ್ ಬಿಡುಗಡೆ

Update: 2019-02-19 16:56 GMT

ಮಂಗಳೂರು, ಫೆ.19: ‘ಮುಂಗಾರು ಮಳೆ’ ಸಿನೆಮಾವನ್ನು ಸ್ಯಾಂಡಲ್‌ವುಡ್‌ಗೆ ನೀಡಿ ಇತಿಹಾಸ ನಿರ್ಮಿಸಿದ್ದ ಯೋಗರಾಜ್ ಭಟ್ ‘ಪಂಚತಂತ್ರ’ ಸಿನೆಮಾವನ್ನು ಕನ್ನಡದಲ್ಲಿ ಮೊದಲ ಬಾರಿಗೆ ಕ್ರೀಡಾ ಚಿತ್ರವಾಗಿ ನಿರ್ಮಿಸಿ ಚಿತ್ರರಸಿಕರಿಗೆ ಉಣಬಡಿಸುತ್ತಿದ್ದಾರೆ.

‘ಪಂಚತಂತ್ರ’ ಸಿನೆಮಾ ಇದೇ ಮಾರ್ಚ್‌ನ ಮೂರು ಅಥವಾ ನಾಲ್ಕನೇ ವಾರದಲ್ಲಿ ತೆರೆ ಕಾಣಲಿದೆ. ಈ ಚಿತ್ರದ ಟ್ರೇಲರ್‌ನ್ನು ಮಂಗಳೂರಿನ ಬಿಗ್ ಸಿನೆಮಾಸ್‌ನಲ್ಲಿ ಬಿಡುಗಡೆ ಮಾಡಲಾಯಿತು. ಮೂಲತಃ ಕರಾವಳಿಯವರೇ ಆಗಿರುವ ಯೋಗರಾಜ್ ಭಟ್ ಈ ಚಿತ್ರದ ಮೂಲಕ ಹಲವು ಮಂದಿ ಕರಾವಳಿಯವರನ್ನು ಪರಿಚಯಿಸಿದ್ದಾರೆ. ಈ ಕಾರಣದಿಂದಲೇ ಮಂಗಳೂರಿನಲ್ಲಿ ಸಿನೆಮಾದ ಟ್ರೇಲರ್‌ನ್ನು ಬಿಡುಗಡೆ ಮಾಡಿದ್ದಾರೆ.

‘ಪಂಚತಂತ್ರ’ ಚಿತ್ರ ಯುವ ಪೀಳಿಗೆ ಮತ್ತು ವಯಸ್ಸಾದವರ ನಡುವಿನ ಚಕಮಕಿಗಳ ಸುತ್ತ ಗಿರಿಗಿಟ್ಟಲೇ ತಿರುಗುತ್ತದೆ. ಇಂದಿನ ಆಧುನಿಕ ಯುಗದ ಯುವಪೀಳಿಗೆಯ ಮನಸ್ಸಿನ ಆಸೆ ಮತ್ತು ಭಾವನೆಗಳನ್ನು ಹೇಳುವ ಜೊತೆಗೆ ಪ್ರೀತಿ, ಸಂಬಂಧಗಳು ಮತ್ತು ಚುರುಕು ಮುಟ್ಟಿಸುವ ಹಾಸ್ಯ ಪ್ರಸಂಗಗಳ ಜೊತೆಗೆ ಎರಡು ಗುಂಪುಗಳ ನಡುವಿನ ಭೂ ವಿವಾದ ಈ ಎಲ್ಲ ಅಂಶಗಳು ಚಿತ್ರದಲ್ಲಿ ಅಡಗಿದೆ.

ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ಕಾಣದಂತಹ ಅತಿದೊಡ್ಡ ಕಾರ್ ರೇಸ್ ಈ ಚಿತ್ರದಲ್ಲಿರುವುದರಿಂದ ಈ ಚಿತ್ರ ಕ್ರೀಡಾ ಚಲನಚಿತ್ರವಾಗಿದೆ. ಕನ್ನಡದಲ್ಲಿ ಈ ರೀತಿಯ ಚಿತ್ರ ತಯಾರಾಗಿರುವುದು ಇದೇ ಮೊದಲು. ಚಿತ್ರದಲ್ಲಿ ನಾಯಕನಾಗಿ ವಿಹಾನ್ ( ಕಾರ್ತಿಕ್), ನಾಯಕಿಯಾಗಿ ಸೋನಲ್, ಅಕ್ಷರ, ರಂಗಾಯಣ ರಘು, ಬಾಲರಜವಾಡಿ, ದೀಪಕ್ ಮೊದಲಾದವರು ನಟಿಸಿದ್ದಾರೆ.

ಹರಿಪ್ರಸಾದ್ ಜಯಣ್ಣ, ಹೇಮಂತ್ ಪರಾಡ್ಕರ್ ಸಿನೆಮಾಗೆ ಹಣ ಹೂಡಿದ್ದು, ಮಾಸ್ತಿ ಮತ್ತು ಕಾಂತರಾಜ್ ಬರೆದಿರುವ ಕಥೆಗೆ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸುಜ್ಞಾನ್ ಛಾಯಾಗ್ರಹಣ ಮಾಡಿದರೆ, ಇಮ್ರಾನ್ ಸರ್ದಾರಿಯ ನೃತ್ಯ ನಿರ್ದೇಶನ ಮಾಡಿದ್ದಾರೆ. ಮಧು ತುಂಬಕೆರೆ ಸಂಕಲನ ಮತ್ತು ಜಾಲಿಬಾಸ್ಟನ್ ಮತ್ತು ವಿನೋದ್ ಅವರ ಸಾಹಸ ಚಿತ್ರಕ್ಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News