ಅನಾರೋಗ್ಯದ ನೆಪವೊಡ್ಡಿ ಇ.ಡಿ. ಮುಂದೆ ಹಾಜರಾಗದ ವಾದ್ರಾ

Update: 2019-02-19 17:30 GMT

ಹೊಸದಿಲ್ಲಿ, ಫೆ. 19: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಮುಂದೆ ಸೋಮವಾರ ಹಾಜರಾಗಬೇಕಿದ್ದ ರಾಬರ್ಟ್ ವಾದ್ರಾ ಅನಾರೋಗ್ಯದ ನೆಪವೊಡ್ಡಿ ಗೈರು ಹಾಜರಾಗಿದ್ದಾರೆ.

 ತನ್ನ ಕಕ್ಷಿದಾರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಹಾಗೂ ವಿದೇಶದಲ್ಲಿ ಸೊತ್ತು ಖರೀದಿಸಲು ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದ ತನಿಖೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ವಾದ್ರಾ ವಕೀಲರು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ತಿಳಿಸಿದ್ದಾರೆ.

  ಇಂದು ಹಾಜರಾಗುವಂತೆ ವಾದ್ರಾ ಅವರಿಗೆ ಜಾರಿ ನಿರ್ದೇಶ ನಾಲಯ ಸಮನ್ಸ್ ನೀಡಿತ್ತು. ಆದರೆ, ನಿನ್ನೆ ರಾತ್ರಿ ಸೇವಿಸಿದ ಆಹಾರದಿಂದ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಆದುದರಿಂದ ಅವರಿಗೆ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ವಾದ್ರಾ ಪರ ವಕೀಲ ಕೆಟಿಎಸ್ ತುಳಸಿ ಹೇಳಿದ್ದಾರೆ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಳಿಯನಾಗಿರುವ ವಾದ್ರಾ ಬುಧವಾರ ಅಥವಾ ಈ ವಾರಾಂತ್ಯ ಪರಸ್ಪರ ಸ್ವೀಕಾರಾರ್ಹ ದಿನ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News