ಸೊರಕೆ ವಿರುದ್ಧ ಅಪಪ್ರಚಾರ, ಅಲ್ಪಸಂಖ್ಯಾತರ ದಿಕ್ಕು ತಪ್ಪಿಸುವ ಯತ್ನ: ಗುಲಾಂ ಮುಹಮ್ಮದ್ ಹೆಜಮಾಡಿ

Update: 2019-02-20 12:54 GMT

ಪಡುಬಿದ್ರೆ, ಫೆ. 20: ಮಾಜಿ ಸಚಿವ ವಿನಯಕುಮಾರ್ ಸೊರಕೆಯವರು ಅಲ್ಪಸಂಖ್ಯಾತ ವಿರೋಧಿ ಎಂಬ ಮಂಗಳೂರಿನ ಮಾಜಿ ಮೇಯರ್ ಹೇಳಿಕೆ ಸತ್ಯಕ್ಕೆ ದೂರವಾದ ಹೇಳಿಕೆ. ಎಲ್ಲ ರೀತಿಯಲ್ಲೂ ಸರ್ವಧರ್ಮ ಪ್ರೇಮಿರಾದ ವಿನಯ ಕುಮಾರ್ ಸೊರಕೆ ಅವರ ತೇಜೋವಧೆ ಮಾಡಲು ತೆರೆಮರೆಯ ಮೂಲಕ ಷಡ್ಯಂತ್ರ ನಡೆಸುವ ಕೆಲವೊಂದು ಕೋಮುವಾದಿ ಶಕ್ತಿಗಳು, ಮುಸ್ಲಿಮರು ಸೊರಕೆಯ ವಿರುದ್ಧ ಎಂದು ಬಿಂಬಿಸ ಹೊರಟಿರುವುದು ಹಾಸ್ಯಾಸ್ಪದ ಎಂದು  ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷ, ಉಡುಪಿ ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷರೂ ಆದ ಗುಲಾಂ ಮುಹಮ್ಮದ್ ಹೆಜಮಾಡಿ ತಿಳಿಸಿದ್ದಾರೆ.

ಸರ್ವಧರ್ಮ ಪ್ರೇಮಿ ಶುದ್ಧಹಸ್ತ ರಾಜಕಾರಣಿ, ಹಸನ್ಮುಖಿ ಎಲ್ಲರ ನೆಚ್ಚಿನ ಸೊರಕೆಯವರ ಬಗ್ಗೆ ಅಪಪ್ರಚಾರ ಮಾಡುವವರು ಕಾಪು, ಉಡುಪಿ ಭಾಗದ ಮುಸ್ಲಿಂರಲ್ಲಿ ಬಂದು ಕೇಳಿದರೆ ಅವರ ಜನಪ್ರಿಯತೆ, ಅಲ್ಪಸಂಖ್ಯಾತರ ಬಗ್ಗೆ ಎಷ್ಟು ಕಾಳಜಿ ವಹಿಸಿದ್ದಾರೆ ಎಂದು ತಿಳಿಯುತ್ತದೆ. ಪುತ್ತೂರು ಶಾಸಕರಾಗಿ ದ್ದಾಗಲೂ, ಉಡುಪಿಯ ಸಂಸದರಾಗಿದ್ದಾಗಲೂ, ಕಾಪುವಿನ ಶಾಸಕರಾಗಿದ್ದ ವೇಳೆಯಲ್ಲೂ ಎಲ್ಲಾ ಧರ್ಮದ ಜನರಿಗೂ ಸಮಾನವಾಗಿ ನೋಡಿದ ಹೆಗ್ಗಳಿಕೆ ಅವರದು. ಅದೇ ರೀತಿ ಯಾವ ಕೋಮುವಾದಿ ಶಕ್ತಿಗಳಿಗೂ ತಲೆ ಎತ್ತದ ರೀತಿ ಅಭಿವೃದ್ಧಿ ಎಂಬ ಮಂತ್ರದಲ್ಲಿಯೇ ಜನಮನ ಸೆಳೆದ ಅಪರೂಪದ ನಾಯಕ ಸೊರಕೆಯವರು ಎಂದು ಅವರು ತಿಳಿಸಿದ್ದಾರೆ.

ಅವರು ಕಾಪುವಿನ ಶಾಸಕರಾಗಿದ್ದ ಅವಧಿಯಲ್ಲಿಯೇ ಕಾಪು ಪುರಸಭೆಯಾಗಿ, ತಾಲೂಕಾಗಿ ರೂಪಿತವಾಗಿತ್ತು. ಕಾಪು ಪುರಸಭೆಯ ಸದಸ್ಯರಲ್ಲಿ 5 ಮಂದಿ ಮುಸ್ಲಿಮರು ಎನ್ನುವುದು ಗಮನಾರ್ಹ. ಅದೇ ರೀತಿ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಎರಡು ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಅವರ ಅವಧಿಯಲ್ಲಿ ಅತೀ ಹೆಚ್ಚು ಮೊತ್ತದ ಅನುದಾನ ಅಲ್ಪಸಂಖ್ಯಾತ ವಿಭಾಗಕ್ಕೆ ಸರ್ಕಾರದ ಮೂಲಕ ಹರಿದು ಬಂದಿತ್ತು. ಮಂದಿರ, ಮಸೀದಿ, ಚರ್ಚುಗಳಿಗೆ ಅತೀ ಹೆಚ್ಚು ಅನುದಾನ ಒದಗಿಸಿದ್ದು ಇಲ್ಲಿನ ಮುಸ್ಲಿಮರು ಮತ್ತು ಎಲ್ಲಾ ಧರ್ಮೀಯರು ಮರೆಯಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಮಾಜಿ ಮೇಯರ್, ಯಾರದೋ ಆಮಿಷಕ್ಕೆ ಒಳಗಾಗಿ ಪ್ರಾಮಾಣಿಕ ರಾಜಕಾರಣಿ ಸೊರಕೆಯನ್ನು ಅಲ್ಪಸಂಖ್ಯಾತ ವಿರೋಧಿ ಎಂದು ಬಿಂಬಿಸ ಹೊರಟು, ಅವರ ಅಲ್ಪಜ್ಞಾನ ಏನೆಂದು ಜಗಜ್ಜಾಹೀರುಗೊಳಿಸಿದ್ದಾರೆ. ಒಂದು ವೇಳೆ ಲೋಕಸಭಾ ಚುನಾವಣೆಗೆ ಸೊರಕೆಯವರು ಸ್ಪರ್ಧಿಸುವುದಾದರೆ, ಸರ್ವ ಮುಸ್ಲಿಮರೂ, ಅಲ್ಪಸಂಖ್ಯಾತರೂ ಸೊರಕೆಯವರಿಗೆ ಬೆಂಬಲ ಸೂಚಿಸಲಿದ್ದಾರೆ ಎಂದು ಗುಲಾಂ ಮುಹಮ್ಮದ್ ಹೆಜಮಾಡಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News