ಸರ್ವಜ್ಞ ಎಂದರೆ ಎಲ್ಲವನ್ನು ಬಲ್ಲವರು: ಶೀಲಾ ಕೆ ಶೆಟ್ಟಿ

Update: 2019-02-20 15:37 GMT

ಉಡುಪಿ, ಫೆ.20: ಸರ್ವಜ್ಞ ಎಂದರೆ ಎಲ್ಲವನ್ನು ಬಲ್ಲವರು ಎಂಬ ಅರ್ಥ ವಿದೆ. ಎಲ್ಲ ಬಲ್ಲವರ ಸಾಲಿನಲ್ಲಿ ನಿಲ್ಲುವಂತಹ ಕವಿ ಸರ್ವಜ್ಞ. ಒಬ್ಬ ಮಾನವ ಏನನ್ನು ತಿಳಿದುಕೊಳ್ಳಬೇಕು, ಯಾವುದು ಉತ್ತಮ, ಯಾವುದು ಮಧ್ಯಮ ಯಾವುದು ಅಧಮ ಎಂಬುದನ್ನು ತಿಳಿಸಿ ಹೇಳುವ ಸಾಮರ್ಥ್ಯ ಇದ್ದವರು ಸರ್ವಜ್ಞ ಎಂದು ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಹೇಳಿದ್ದಾರೆ.

ಬುಧವಾರ ಜಿಲ್ಲಾಡಳಿತ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಉಡುಪಿ ಜಿಲ್ಲಾ ಘಟಕ, ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘ ಉಡುಪಿ ಜಿಲ್ಲಾ ಘಟಕ ಇವುಗಳ ಸಹಯೋಗದೊಂದಿಗೆ ಪೂರ್ಣಪ್ರಜ್ಞ ಕಾಲೇಜಿನ ವಿಭುದೇಶತೀರ್ಥ ಸಭಾಂಗಣ ದಲ್ಲಿ ನಡೆದ ಸಂತಕವಿ ಸರ್ವಜ್ಞ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಮಾತನಾಡಿ, ಮಹಾತ್ಮರ ಇಂಥ ಜಯಂತಿ ಆಚರಣೆಯಿಂದ ಯಾವ ಮಹಾತ್ಮರು ನಮ್ಮ ಸಮಾಜಕ್ಕೆ ಏನೇನೂ ಕೊಡುಗೆಗಳನ್ನು ನೀಡಿದ್ದಾರೆ, ಯಾವೆಲ್ಲ ಅರ್ಥಪೂರ್ಣ ಬದುಕನ್ನು ಕೊಟ್ಟು ಹೋಗಿದ್ದಾರೆ ಎಂಬ ವಿಚಾರವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಸಂತ ಕವಿ ಸರ್ವಜ್ಞನ ಕುರಿತು ವಿಶೇಷ ಉಪನ್ಯಾಸ ನೀಡಿದ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ. ದುಗ್ಗಪ್ಪ ಕಜೆಕಾರ್ ಮಾತನಾಡಿ, ಅನೇಕತೆಯಲ್ಲಿ ಏಕತೆಯನ್ನು ಕಂಡಂತಹ ದೇಶ ನಮ್ಮದು. ಕವಿ ಸರ್ವಜ್ಞ ಇಂದಿಗೂ ಪ್ರಸ್ತುತ ತ್ರಿಪದಿಯ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ. ಸರ್ವಜ್ಞನ 2000ಕ್ಕೂ ಅಧಿಕ ತ್ರಿಪದಿಗಳು ಲ್ಯವಿದೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸರ್ವಜ್ಞ ತ್ರಿಪದಿಗಳಲ್ಲಿ ಹೇಳದಿರುವ ವಿಷಯವೇ ಇಲ್ಲ. ಸರ್ವಜ್ಞ ಇಡೀ ಸಮಾಜಕ್ಕೆ ಬೇಕಾದಂತಹ ವ್ಯಕ್ತಿ ಎಂದರು.

ಬೆಂಗಳೂರು ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘದ ಉಪಾಧ್ಯಕ್ಷ ರಾಮ ಕುಲಾಲ ಪಕ್ಕಾಲು, ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರಬಾರ ಪ್ರಾಂಶುಪಾಲ ಡಾ.ಎ.ಪಿ.ಭಟ್, ಎಸ್ಪಿಕಚೇರಿಯ ನಿರೀಕ್ಷಕ ಸೀತಾರಾಮ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಚಂದ್ರಶೇಖರ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News