ಪಾರದರ್ಶಕ ಆಡಳಿತಕ್ಕೆ ತಂತ್ರಜ್ಞಾನದ ಸಮನ್ವಯ ಅಗತ್ಯ: ಸಂಸದೆ ಶೋಭಾ ಕರಂದ್ಲಾಜೆ

Update: 2019-02-21 15:13 GMT

ಉಡುಪಿ, ಫೆ.21: ತಾಂತ್ರಿಕವಾಗಿ ಲಭ್ಯವಿರುವ ಅವಕಾಶಗಳನ್ನು ಆಡಳಿತ ನಿರ್ವಹಣೆಗೆ ಪೂರಕವಾಗಿ ಬಳಕೆ ಮಾಡಿಕೊಂಡು ನಾಗರಿಕರಿಗೆ ಉತ್ತಮ ಸೇವೆ ನೀಡಬಹುದಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದರಾದ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಗುರುವಾರ ಕಾಡೂರು ಗ್ರಾಪಂ ವ್ಯಾಪ್ತಿಯಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆ ಅನುಷ್ಠಾನದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಗ್ರಾಮ ಸಭೆ, ಎರಡನೇ ಹಂತದ ಗ್ರಾಮ ಸಭೆ, ಮಹಿಳಾ ಒಕ್ಕೂಟದ ರಚನೆ ಹಾಗೂ ನಗದು ರಹಿತ ವರ್ಗಾವಣೆ( ಕ್ಯಾಷ್‌ಲೆಸ್) ಕುರಿತ ‘ಯುವ ಪೇ’ ತಂತ್ರಾಂಶದ ಸಾಂಕೇತಿಕ ಚಾಲನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಕಾಡೂರು -ನಡೂರಿನಂತಹ ಗ್ರಾಮೀಣ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾದ ಪರಿಕಲ್ಪನೆಯನ್ನು ಅನುಷ್ಠಾನ ಮಾಡಲು ರಾಜ್ಯದಲ್ಲಿ ಮೊದಲ ಬಾರಿಗೆ ತಂತ್ರಾಂಶದ ಮೂಲಕ ಪಂಚಾಯತ್ ತೆರಿಗೆ ವಸೂಲಾತಿಗೆ ಕ್ರಮ ಕೈಗೊಂಡಿರುವುದು ಪ್ರಶಂಸನೀಯ ಎಂದರು.

ಕಾಡೂರು ಗ್ರಾಪಂ ಸದಸ್ಯ ಸುರೇಶ್ ಶೆಟ್ಟಿ ಮಾತನಾಡಿ, ಸಂಸದರ ಆದರ್ಶ ಗ್ರಾಮ ಯೋಜನೆಯ ಮೂಲಕ ಸಮಗ್ರ ಅಭಿವೃದ್ಧಿಗೆ ಅವಕಾಶ ದೊರೆತಿದ್ದು, ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಲಾಗಿದೆ. ಸಮಯಾವಕಾಶದ ಉಳಿಕೆ, ಪಾರದರ್ಶಕತೆ ಹಾಗೂ ನಾಗರಿಕ ಸ್ನೇಹಿ ಆಡಳಿತಕ್ಕೆ ತಂತ್ರಜ್ಞಾನದ ಬಳಕೆಯ ಅಗತ್ಯವನ್ನು ಪ್ರತಿಪಾದಿಸಿದ ಅವರು, ಸಮರ್ಪಕವಾಗಿ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಕಾಡೂರು ಗ್ರಾಪಂನ್ನು ಮಾದರಿಯಾಗಿ ರೂಪಿಸುವ ಪಣ ತೊಟ್ಟಿರು ವುದಾಗಿ ತಿಳಿಸಿದರು.

ಯುವ ಪೇ ಆ್ಯಪ್ ಮೂಲಕ ಮನೆ ತೆರಿಗೆ, ನೀರಿನ ದರ, ಸ್ವಚ್ಚತಾ ಶುಲ್ಕದ ಸಂಗ್ರಹ, ಮಹಿಳಾ ಒಕ್ಕೂಟದ ಸದಸ್ಯರಿಗೆ ಸಂಜೀವಿನಿ ಯೋಜನೆಯಡಿ ಸ್ವಾವಲಂಬನೆ ಚಟುವಟಿಕೆಗಳಿಗೆ ಸಹಾಯಧನ ಸೌಲ್ಯ. ಇಲಾಖಾ ಸಮನ್ವಯದ ಮೂಲಕ ವೈಯಕ್ತಿಕ ಹಾಗೂ ಸಾಮೂಹಿಕ ಕಾಮಗಾರಿಗಳ ಅನುಷ್ಠಾನ, ಮೂಲ ಸೌಕರ್ಯ ಅಭಿವೃದ್ಧಿ ಆದ್ಯತೆ ಹಾಗೂ ಅನುದಾನ ನೀಡಿಕೆ, ಮತದಾನ ಜಾಗೃತಿಯ ಕಾರ್ಯ ಚಟುವಟಿಕೆಗಳಿಗೆ ತಂತ್ರಜ್ಞಾನದ ಪರಿಣಾಮ ಕಾರಿ ಬಳಕೆಯ ಕುರಿತ ಕಾರ್ಯಕ್ರಮ ನಡೆಯಿತು.

ಕಾಡೂರು ಗ್ರಾಪಂ ಅಧ್ಯಕ್ಷ ಆನಂದ ನಾಯ್ಕ, ಚಾರ್ಜ್ ಆಫೀಸರ್ ಅಡಿಗ, ನೊಡೇಲ್ ಅಧಿಕಾರಿ ಚಂದ್ರಶೇಖರ್ ಶೆಟ್ಟಿ, ಬ್ರಹ್ಮಾವರ ಸಿಡಿಪಿಒ ಶೋಭಾ, ವೈದ್ಯಾಧಿಕಾರಿ ಅನಿಲ್ ಕುಮಾರ್, ಆರೋಗ್ಯ ಅಧಿಕಾರಿ ರಕ್ಷಿತ್, ಪಶು ವೈದ್ಯಕೀಯ ಇಲಾಖೆಯ ಪ್ರದೀಪ್ ಕುಮಾರ್, ಸಂಜೀವಿನಿ ಯೋಜನೆಯ ಸಮನ್ವಯ ಅಧಿಕಾರಿ ಪಾಂಡುರಂಗ ಉಪಸ್ಥಿತರಿದ್ದರು.

ನಾಗರಿಕರಿಗೆ ಮತದಾನ ಜಾಗೃತಿ ಪ್ರತಿಜ್ಞೆಯನ್ನು ಬೋಧಿಸಿ, ಮಾಹಿತಿಯನ್ನು ನೀಡಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕೆ. ಕಾರ್ಯ ಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News