ಕಳ್ಳಭಟ್ಟಿ ಸಾರಾಯಿ ಸೇವಿಸಿ 15 ಕಾರ್ಮಿಕರ ಸಾವು
Update: 2019-02-22 16:23 GMT
ಗುವಾಹಟಿ, ಫೆ.22: ಅಸ್ಸಾಂನಲ್ಲಿ ನಡೆದ ಕಳ್ಳಭಟ್ಟಿ ಸಾರಾಯಿ ದುರಂತದಲ್ಲಿ ಕನಿಷ್ಟ 15 ಮಂದಿ ಚಹಾತೋಟದ ಕಾರ್ಮಿಕರು ಸಾವಿಗೀಡಾಗಿದ್ದಾರೆ. ಸತ್ತವರನ್ನು ನಾಲ್ವರು ಮಹಿಳೆಯರು. ಅಸ್ವಸ್ಥಗೊಂಡಿರುವ 18 ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ ನಾಲ್ಕು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅಸ್ಸಾಂನ ಗೋಲಘಾಟ್ ಎಂಬಲ್ಲಿರುವ ಚಹಾತೋಟದ ಇನ್ನಷ್ಟು ಕಾರ್ಮಿಕರು ಆಸ್ಪತ್ರೆಗೆ ದಾಖಲಾಗುತ್ತಿದ್ದು ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 100 ಜನ ಕಳ್ಳಭಟ್ಟಿ ಸಾರಾಯಿ ಸೇವಿಸಿ ಅಸ್ವಸ್ಥರಾಗಿರುವ ಮಾಹಿತಿಯಿದೆ ಎಂದು ಸ್ಥಳೀಯ ಶಾಸಕ ಮೃಣಾಲ್ ಶುಕ್ಲ ತಿಳಿಸಿದ್ದಾರೆ. ಸ್ಥಳೀಯ ಕಳ್ಳಭಟ್ಟಿ ಸಾರಾಯಿ ಸೇವನೆಯಿಂದ ಈ ದುರಂತ ಸಂಭವಿಸಿದೆ ಎಂದು ಗೋಲಘಾಟ್ನ ಸರಕಾರಿ ಆಸ್ಪತ್ರೆಯ ವೈದ್ಯ ದಿಲೀಪ್ ರಾಜ್ವಂಶಿ ತಿಳಿಸಿದ್ದಾರೆ.