ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿ ಚಿಕ್ಕಪ್ಪನಿಗೆ 10 ವರ್ಷ ಕಠಿಣ ಶಿಕ್ಷೆ

Update: 2019-02-22 17:31 GMT

ಮಂಗಳೂರು, ಫೆ. 22: ಅಪ್ರಾಪ್ತ ವಯಸ್ಸಿನ ಮಗಳ ಮೇಲೆಯೇ ಅತ್ಯಾಚಾರವೆಸಗಿದ ಆರೋಪಿಗೆ (ಚಿಕ್ಕಪ್ಪ) ಮಂಗಳೂರಿನ ಎರಡನೇ ಹೆಚ್ಚುವರಿ ನ್ಯಾಯಾಲಯ ಮತ್ತು ಪೋಕ್ಸೊ ವಿಶೇಷ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.

ಮಂಗಳೂರಿನ ಗೌರಿಮಠ ಬಳಿಯ ನಿವಾಸಿ ಚಂದ್ರಕಾಂತ್(44) ಶಿಕ್ಷೆಗೊಳಗಾದ ಆರೋಪಿ.

2018ರ ಮೇ 2ರಂದು ಪ್ರಕರಣ ನಡೆದಿದ್ದು, ಕ್ಷಿಪ್ರವಾಗಿ ವಿಚಾರಣೆ ನಡೆಸಿದ ನ್ಯಾಯಾಲಯ 9 ತಿಂಗಳಿನಲ್ಲಿಯೇ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆರೋಪಿಗೆ ಐಪಿಸಿ ಸೆಕ್ಷನ್ 376 ಮತ್ತು ಪೊಕ್ಸೋ ಕಾಯ್ದೆಯ ಸೆಕ್ಷನ್ 6ರ ಅಡಿ ಶಿಕ್ಷೆ ವಿಧಿಸಲಾಗಿದೆ.

ಘಟನೆಯ ವಿವರ: ನೊಂದ ಬಾಲಕಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನವಳು. ಈಕೆ ಆರೋಪಿಯ ಹೆಂಡತಿಯ ಅಕ್ಕನ ಮಗಳು. ಶಾಲಾ ರಜಾ ದಿನವಾದ್ದರಿಂದ ಮಂಗಳೂರಿನ ಗೌರಮಠದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದಳು. ಅದೇ ದಿನ ರಾತ್ರಿ 12 ಗಂಟೆಯ ವೇಳೆಗೆ ಬಾಲಕಿಯ ಚಿಕ್ಕಪ್ಪನಾದ ಚಂದ್ರಕಾಂತ್ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರವೆಸಗಿದ್ದ.

ಈ ವಿಷಯ ಮನೆಯಲ್ಲಿದ್ದ ಚಂದ್ರಕಾಂತ್‌ನ ಪತ್ನಿ ಹಾಗೂ ಅಜ್ಜಿಯ ಗಮನಕ್ಕೂ ಬಂದಿತ್ತು. ಘಟನೆಯ ಕುರಿತಂತೆ ಆರೋಪಿಯ ಪತ್ನಿ ಮರುದಿನ ಪಾಂಡೇಶ್ವರ ದಲ್ಲಿರುವ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಮಹಿಳಾ ಠಾಣಾ ಎಸ್‌ಐ ಕಲಾವತಿ ತನಿಖೆ ಕೈಗೆತ್ತಿಕೊಂಡಿದ್ದರು. ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಅತ್ಯಾಚಾರ ಎಸಗಿರುವುದು ದೃಢಪಟ್ಟಿತ್ತು.

ಉಲ್ಟಾ ಹೊಡೆದ ಸಾಕ್ಷಿದಾರರು: ಪ್ರಕರಣಕ್ಕೆ ಸಂಬಂಧಿಸಿ ನೊಂದ ಬಾಲಕಿ, ಆಕೆಯ ತಾಯಿ, ಅಜ್ಜಿ, ಆರೋಪಿಯ ಪತ್ನಿ ಸೇರಿದಂತೆ 8 ಮಂದಿಯ ಸಾಕ್ಷ್ಯ ದಾಖಲಿಸಲಾಗಿತ್ತು. ಘಟನೆಯ ಕುರಿತು ಆರೋಪಿ ಪತಿಯ ವಿರುದ್ಧವೇ ದೂರು ದಾಖಲಿಸಿದ್ದ ಆತನ ಪತ್ನಿ ಬಳಿಕ ನ್ಯಾಯಾಲಯದಲ್ಲಿ ಸಾಕ್ಷಿ ಹೇಳುವಾಗ ಘಟನೆಯ ಬಗ್ಗೆ ಮಾಹಿತಿಯೇ ಇಲ್ಲವೆಂಬಂತೆ ಸುಳ್ಳು ಸಾಕ್ಷಿ ನುಡಿದಿದ್ದಳು.

ಅಲ್ಲದೆ, ಮನೆಯವರ ಒತ್ತಡಕ್ಕೆ ಮಣಿದಿದ್ದ ಬಾಲಕಿಯೂ ತನ್ನ ಹೇಳಿಕೆ ಬದಲಿಸಿದ್ದಳು. ಆದರೆ ವೈದ್ಯಕೀಯ ವರದಿಯಲ್ಲಿ ಅತ್ಯಾಚಾರ ಸಾಬೀತು ಗೊಂಡಿದ್ದರಿಂದ ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಅಲ್ಲದೆ, ದಂಡದ ಮೊತ್ತ 10 ಸಾವಿರ ರೂ.ದಲ್ಲಿ 9 ಸಾವಿರ ರೂ.ನ್ನು ನೊಂದ ಬಾಲಕಿಗೆ ನೀಡುವಂತೆ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ಮಂಗಳೂರಿನ ಎರಡನೇ ಹೆಚ್ಚುವರಿ ಸೆಷನ್ಸ್ ಮತ್ತು ಪೊಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್.ಪಲ್ಲವಿ ತೀರ್ಪು ನೀಡಿದ್ದಾರೆ. ವಿಶೇಷ ಸರಕಾರಿ ಅಭಿಯೋಜಕರಾಗಿ ಸಿ.ವೆಂಕಟರಮಣ ಸ್ವಾಮಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News