ಫಲಾಪೇಕ್ಷೆ ಇಲ್ಲದೆ ಸಮಾಜ ಸೇವೆ ಮಾಡಿ: ಜಿಲ್ಲಾಧಿಕಾರಿ ಹೆಪ್ಸಿಬಾ

Update: 2019-02-23 14:07 GMT

ಉಡುಪಿ, ಫೆ.23: ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜ ಸೇವೆ ಮಾಡಿದರೆ ಅಂತಹ ಕೆಲಸ ವೈಯಕ್ತಿಕ ಹಾಗೂ ವ್ಯಕ್ತಿತ್ವದ ಬೆಳವಣಿಗೆಗೆ ಸ್ವಯಂ ಪ್ರೇರಣೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹೇಳಿದ್ದಾರೆ.

ಶನಿವಾರ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಅಂಬಲಪಾಡಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತರಬೇತಿ ಕೇಂದ್ರ ‘ಪ್ರಗತಿ ಸೌಧ’ದಲ್ಲಿ ನಡೆದ ರಾಜ್ಯ ಮಟ್ಟದ ಯೂತ್ ರೆಡ್‌ಕ್ರಾಸ್ ಸಂಸ್ಥೆ ಬೇಸಿಕ್ ಓರಿಯೆಂಟೇಶನ್ ಮತ್ತು ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಉತ್ತಮ ಸೇವೆಯ ಮೂಲಕ ವಿಶ್ವವ್ಯಾಪ್ತಿ ಚಟುವಟಿಕೆಯಲ್ಲಿರುವ ಸಂಸ್ಥೆ ರೆಡ್‌ಕ್ರಾಸ್. ಹಿಂದಿನಿಂದಲೂ ಜಿಲ್ಲೆಯಲ್ಲಿ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ. ಕರ್ನಾಟಕದ 15 ವಿವಿಧ ವಿವಿಗಳಿಂದ ಹಲವಾರು ವಿದ್ಯಾರ್ಥಿಗಳು ಈ ಶಿಬಿರಕ್ಕೆ ಬಂದಿದ್ದು, ಇದೊಂದು ಒಳ್ಳೆಯ ಅವಕಾಶ. ಮುಂದಿನ ದಿನಗಳಲ್ಲಿ ದೇಶಕ್ಕಾಗಿ ಏನು ಸೇವೆ ಮಾಡಬಲ್ಲೆವು ಎಂಬ ಯೋಚನೆಯನ್ನು ಮಾಡುವ ಸಮಯವಿದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಉಡುಪಿಯ ಸಭಾಪತಿ ಡಾ.ಉಮೇಶ್ ಪ್ರಭು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಿಯಲು ಇದೊಂದು ಉತ್ತಮ ವೇದಿಕೆಯಾಗಿದ್ದು, 5 ದಿನಗಳ ಶಿಬಿರದಲ್ಲಿ ಯೋಗ, ಪ್ರಥಮ ಚಿಕಿತ್ಸೆ ವಿಧಾನ, ವಿಪತ್ತು ನಿರ್ವಹಣೆ ಮುಂತಾದ ವಿಷಯಗಳ ಕುರಿತು ತಿಳಿದು ಕೊಳ್ಳುವಂತೆ ಹೇಳಿದರು.

ಅಂಬಲಪಾಡಿ ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ಎನ್. ವಿಜಯ ಬಲ್ಲಾಳ್ ಮುಖ್ಯ ಅತಿಥಿಯಾಗಿ ಉಪಸ್ಥಿತ ರಿದ್ದರು. ಮಂಗಳೂರು ವಿವಿ ಯೂತ್ ರೆಡ್‌ಕ್ರಾಸ್ ವಿಂಗ್‌ನ ನೋಡಲ್ ಅಧಿಕಾರಿ ಪ್ರೊ. ವಿನಿತಾ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಸಮಯ ಪಾಲನೆ, ಶಿಸ್ತು ಪಾಲನೆಯನ್ನು ಶಿಬಿರದಲ್ಲಿ ಮಾಡಬೇಕು ಎಂದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಶಾಖೆಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತರಬೇತಿ ಕೇಂದ್ರದ ಪ್ರಾಶುಂಪಾಲ ಅಶೋಕ್ ಟಿ. ಉಪಸ್ಥಿತರಿದ್ದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಶಾಖೆಯ ಉಪ ಸಭಾಪತಿ ಡಾ. ಅಶೋಕ್‌ಕುಮಾರ್ ವೈ.ಜಿ ಸ್ವಾಗತಿಸಿದರು. ಜಿಲ್ಲಾ ಘಟಕದ ಗೌರವ ಖಂಜಾಜಿ ಟಿ.ಚಂದ್ರಶೇಖರ್ ವಂದಿಸಿದರು. ಯೂತ್ ರೆಡ್‌ಕ್ರಾಸ್‌ನ ಜಿಲ್ಲಾ ಸಂಯೋಜಕ ಕೆ.ಜಯರಾಮ ಆಚಾರ್ಯ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News