ಭಾರತಕ್ಕೆ ಒಂದು ಟ್ರಿಲಿಯನ್ ರಫ್ತು ಸಾಧನೆಯ ಗುರಿ: ಸುರೇಶ್ ಪ್ರಭು
ಉಡುಪಿ, ಫೆ.23: ಭಾರತ 2018ರಲ್ಲಿ ಸಾರ್ವತ್ರಿಕ ದಾಖಲೆಯ 500 ಬಿಲಿಯನ್ ಡಾಲರ್ನಷ್ಟು ಉತ್ಪನ್ನಗಳನ್ನು ರಫ್ತು ಮಾಡಿದ್ದು, 2030ರೊಳಗೆ ಒಂದು ಟ್ರಿಲಿಯನ್ ಡಾಲರ್ ಉತ್ಪನ್ನಗಳ ರಫ್ತಿನ ಗುರಿಯನ್ನು ಹಾಕಿ ಕೊಳ್ಳಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.
ಉಡುಪಿಯ ಕರಾವಳಿ ಬೈಪಾಸ್ ಬಳಿಯ ಕೆನರಾ ಸಂಕೀರ್ಣದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆ್ ಜೆಮ್ಸ್ ಆ್ಯಂಡ್ ಜ್ಯುವೆಲ್ಲರಿ (ಐಐಜಿಜೆ) ಸಂಸ್ಥೆಯನ್ನು ಶುಕ್ರವಾರ ದಿಲ್ಲಿಯಿಂದ ವೀಡಿಯೋ ಕಾನ್ಛರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ದೇಶದ ಪ್ರತಿಯೊಂದು ಜಿಲ್ಲೆ, ರಾಜ್ಯವೂ ಶೇ.3ರಿಂದ 4ರ ಪ್ರಗತಿಯೊಂದಿಗೆ ಕೃಷಿ ಉತ್ಪನ್ನ ರಫ್ತು ಮಾಡಿದರೆ ಎರಡು ಅಂಕೆಗಳ ಪ್ರಗತಿ ಸಾಧನೆಯ ಜತೆಗೆ 2022ರೊಳಗೆ ರೈತರ ಆದಾಯ ದುಪ್ಪಟ್ಟಾಗಬೇಕು ಎಂದರು. 54ಕ್ಕೂ ಅಧಿಕ ರಾಷ್ಟ್ರಗಳ ಜೊತೆ ಮಾತುಕತೆ ಮೂಲಕ ವ್ಯಾಪಾರ ವೃದ್ಧಿಗೆ ಉದ್ದೇಶಿಸಲಾಗಿದೆ ಎಂದರು.
ಫ್ಯಾಶನ್ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ. ಆಭರಣ ವಿನ್ಯಾಸ ವಿಶ್ವ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ. ವಿನ್ಯಾಸ ವೈವಿಧ್ಯದಲ್ಲಿ ಮುಂದಿನ ಭವಿಷ್ಯವಿರುವ ಹಿನ್ನೆಲೆಯಲ್ಲಿ ವಿನ್ಯಾಸಕಾರರ ಅಗತ್ಯ ಹೆಚ್ಚಿದೆ. ಅದೇ ರೀತಿ ಪಾದರಕ್ಷೆ ಉದ್ಯಮ ತಂತ್ರಜ್ಞಾನ ವೃದ್ಧಿಗೆ 2,500 ಕೋಟಿ ರೂ. ವಿನಿಯೋಗಿಸಲಾಗುವುದು ಎಂದರು.
ಜಿಜೆಇಪಿಸಿ ಈಸ್ಟರ್ನ್ ರೀಜನ್ ಚೇರ್ಮನ್ ಪ್ರಕಾಶ್ಚಂದ್ರ ಪಿಂಚ್ ಮಾತನಾಡಿ, ಪರಂಪರೆ, ಸಾಂಪ್ರದಾಯಿಕತೆಯನ್ನು ಆಧುನಿಕ ತಂತ್ರಜ್ಞಾನ, ವಿನ್ಯಾಸ ದೊಂದಿಗೆ ಸಮನ್ವಯಗೊಳಿಸಬೇಕು. ರಫ್ತು ಹೆಚ್ಚಳದ ಜತೆಗೆ ಕೌಶಲ್ಯಗಳ ಪುನಶ್ಚೇತನ, ಬಲವರ್ಧನೆಯಾಗಬೇಕು ಎಂದರು.
ಕರ್ನಾಟಕ ಜ್ಯುವೆಲ್ಲರ್ಸ್ ಫೆಡರೇಶನ್ನ ಅಧ್ಯಕ್ಷ ಜಿ. ಜಯ ಆಚಾರ್ಯ, ಉಡುಪಿ ಜ್ಯುವೆಲ್ಲರ್ಸ್ ಎಸೋಸಿಯೇಶನ್ ಅಧ್ಯಕ್ಷ ಅಲೆವೂರು ನಾಗರಾಜ ಆಚಾರ್ಯ, ಪ್ರಾಕ್ತನ ವಿದ್ಯಾರ್ಥಿ ದೀಪಕ್ ನಾಯಕ್, ವಿದ್ಯಾರ್ಥಿಗಳಾದ ೈಸಾ ಶಬ್ಬೀರ್ ಮಲ್ಪೆ, ಸಾಂಜಿತ್ ಮಾತನಾಡಿದರು. ಮಧು ಕಾರ್ಯಕ್ರಮ ನಿರೂಪಿಸಿದರು.
ಉಡುಪಿ ಕೇಂದ್ರದಲ್ಲಿ ಎರಡು ತಿಂಗಳ ನಾಲ್ಕು ಕೋರ್ಸ್ಗಳಿದ್ದು, ಇಲ್ಲಿ ವಿದ್ಯಾರ್ಥಿಗಳಿಗೆ ಸ್ವರ್ಣಾಭರಣದ ಕುರಿತಂತೆ ತರಬೇತಿ ನೀಡಲಾಗುತ್ತದೆ.