ನಾಪತ್ತೆಯಾದ ಮೀನುಗಾರರ ಕುಟುಂಬಸ್ಥರಿಂದ ರಕ್ಷಣಾ ಸಚಿವರ ಭೇಟಿ
Update: 2019-02-23 16:50 GMT
ಉಡುಪಿ, ಫೆ.23: ಸುವರ್ಣ ತ್ರಿಭುಜ ಬೋಟು ಸಹಿತ ಏಳು ಮಂದಿ ಮೀನುಗಾರರು ನಾಪತ್ತೆಯಾಗಿ ಎರಡು ತಿಂಗಳು ಕಳೆದರೂ ಈವರೆಗೆ ಯಾವುದೇ ಸುಳಿವು ಲಭ್ಯವಾಗದ ಹಿನ್ನೆಲೆಯಲ್ಲಿ ನಾಪತ್ತೆಯಾದವರ ಕುಟುಂಬ ಸ್ಥರು ಹಾಗೂ ಮೀನುಗಾರ ಮುಖಂಡರು ಫೆ.24ರಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಲಿದ್ದಾರೆ.
ಉಡುಪಿ ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ನಾಪತ್ತೆಯಾದ ಮೀನು ಗಾರರ ಕುಟುಂಬದವರು ಸೇರಿದಂತೆ ಮಲ್ಪೆ ಮೀನುಗಾರರ ಸಂಘದ ನಿಯೋಗ ಸಚಿವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಲಿದೆ. ಅಲ್ಲದೆ ನೌಕಪಡೆಯ ಹಡಗಿಗೆ ಹಾನಿಯಾಗಿರುವ ಬಗ್ಗೆ ಸಚಿವರಲ್ಲಿ ಸ್ಪಷ್ಟನೆಯನ್ನು ಕೇಳಲಿದೆ ಎಂದು ಮೂಲಗಳು ತಿಳಿಸಿವೆ.