×
Ad

ಯಾಂತ್ರಿಕ ಬದುಕಿನಿಂದ ಕೃಷಿ ಜೀವನ ನೆಮ್ಮದಿ: ಗೋವಿಂದ ಪ್ರಕಾಶ್

Update: 2019-02-24 17:32 IST

ಪುತ್ತೂರು, ಫೆ. 24: ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಿಂದ ಯುವಕರು ಉದ್ಯೋಗವನ್ನರಸಿ ನಗರ ಪ್ರದೇಶಗಳತ್ತ ಮುಖ ಮಾಡುತ್ತಿದ್ದಾರೆ. ಕೃಷಿಯಲ್ಲಿನ ಆಸಕ್ತಿ ಯುವ ಜನತೆಯಲ್ಲಿ ಮರೆಯಾಗುತ್ತದೆ. ಯಾಂತ್ರಿಕ ಬದುಕು ಕೇವಲ ಆರ್ಥಿಕತೆಯನ್ನು ಸದೃಡಗೊಳಿಸಬಹುದೇ ಹೊರತು ಮಾನಸಿಕವಾಗಿ ಯಾವುದೇ ನೆಮ್ಮದಿಯನ್ನು ಕಲ್ಪಿಸಿ ಕೊಡುವುದಿಲ್ಲ. ಕೃಷಿ ಬದುಕಿನಿಂದ ನೆಮ್ಮದಿಯ ಜೀವನ ಸಾಧ್ಯ ಎಂದು ಕೃಷಿಕ ಗೋವಿಂದ ಪ್ರಕಾಶ್ ಚಾಲತಡ್ಕ ಹೇಳಿದರು.

ಅವರು ವಿವೇಕಾನಂದ ಕಾಲೇಜಿನ ಆವರಣದಲ್ಲಿ ಆಯೋಜನೆಗೊಂಡ ಕೃಷಿ ಯಂತ್ರ ಮೇಳ-2019 ಕನಸಿನ ಮನೆ ಮತ್ತು ಹೈನುಗಾರಿಕೆ ಕಾರ್ಯಕ್ರಮದಲ್ಲಿ "ಕೃಷಿಗೆ ಮರಳಿದವರು ಏನಂತಾರೆ?" ಎಂಬ ವಿಚಾರಗೋಷ್ಠಿಯಲ್ಲಿ ಶನಿವಾರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಪ್ರಸ್ತುತ ದಕ್ಷಿಣಕನ್ನಡ ಹಾಗು ಕಾಸರಗೋಡು ಜಿಲ್ಲೆಗಳಲ್ಲಿ ಆಹಾರ ಬೆಳೆಗಳು ಕಣ್ಮರೆಯಾಗುತ್ತಿದ್ದು ಆ ಜಾಗದಲ್ಲಿ ವಾಣಿಜ್ಯ ಬೆಳೆಗಳು ತಲೆ ಎತ್ತುತ್ತಿವೆ ಇದೇ ಕಾರಣಕ್ಕಾಗಿ ಭತ್ತದ ಹಾಗು ಇತರ ಆಹಾರ ಬೆಳೆಗಳಿಗೆ ಪ್ರಾಮುಖ್ಯತೆ ನೀಡುವುದು ಅವಶ್ಯವಾಗಿದೆ. ಕಾರ್ಮಿಕರ  ಮತ್ತು  ನೀರಿನ ಸೌಲಭ್ಯ ಉತ್ತಮ ರೀತಿಯಲ್ಲಿ ದೊರೆತರೆ ಕೃಷಿಯು ಅಭಿವೃದ್ದಿಯತ್ತ ಸಾಗಬಹುದು ಎಂದರು.

ಕೃಷಿಯಲ್ಲಿ ತೊಡಗಿರುವ ವಿದ್ಯಾವಂತರು ಬುದ್ಧಿಯನ್ನು ಉಪಯೋಗಿಸಬೇಕು. ಮನಸ್ಸಿನ ಭಾವನೆಗಳನ್ನು ತಡೆಹಿಡಿದು ಕೃಷಿಯಲ್ಲಿ ಮುಂದುವರಿದರೆ ಯಶಸ್ಸು ಸಾಧ್ಯ ಎಂದರು.
ಸಂಪನ್ಮೂಲ ವ್ಯಕ್ತಿ ಕೃಷಿಕ ವಸಂತ್ ಕಜೆ ಮಂಚಿ ಅವರು ಮಾತನಾಡಿ, ದಕ್ಷಿಣಕನ್ನಡ ಜಿಲ್ಲೆಯಲ್ಲಿ  ಒಳ್ಳೆಯ ಕೃಷಿ ಸ್ನೇಹಿ ವಾತಾವರಣವಿದೆ ಅದರೊಂದಿಗೆ ಉತ್ತಮ ಮಾರುಕಟ್ಟೆಯೂ ಲಭ್ಯವಿರುವುದು ಸಂತಸದ ವಿಚಾರ ಎಂದರು. ಉತ್ತಮ ಉತ್ಪನ್ನಗಳನ್ನು ಬೆಳೆದರೆ ಅಧಿಕ ಮೌಲ್ಯಕ್ಕೆ ಬೆಳೆಯನ್ನು ಮಾರಾಟಮಾಡಬಹುದು ಎಂದರಲ್ಲದೆ, ಕೃಷಿಯೇ ಒಂದು ಉದ್ಯಮ. ಉದ್ಯೋಗವನ್ನರಿಸಿ ಪಟ್ಟಣದತ್ತ ಮುಖ ಮಾಡುವ ಬದಲು ಕೃಷಿಯಲ್ಲಿ ಉದ್ಯೋಗವನ್ನು ಮಾಡಿ ಸ್ವಾವಲಂಬಿಯಾಗಿ ಬದುಕನ್ನು ಸಾಗಿಸಬಹುದು ಎಂದರು.

ಖಾಲಿ ಜಾಗವನ್ನು ಕೃಷಿಗೆ ಬಳಸಿಕೊಂಡರೆ ಹಲವು ವಿಧಾನದಲ್ಲಿ ಕೃಷಿಯನ್ನು ಮಾಡಬಹುದು. ಉದ್ಯೋಗದಲ್ಲಿದ್ದ ದಂಪತಿಗಳು ಕೃಷಿಗೆ ಮರಳಿದರೆ ಮನೆಯಲ್ಲಿನ ಹೊಂದಾಣಿ ಕಷ್ಟ ಎಂಬ ಮಾತಿಗೆ ಉತ್ತರಿಸಿ ಹಳ್ಳಿಯಲ್ಲಿ ಅದರಲ್ಲೂ ಕೃಷಿಯಲ್ಲಿ ಪರಸ್ಪರ ಅವಲಂಬನೆಯಿಂದ ಒಂದೊಂದು ಕೆಲಸವನ್ನು ಮಾಡುವ ಮೂಲಕ ಒಗ್ಗಟ್ಟಿನ ಹಾಗೂ ಸಮಬಾಳ್ವೆಯ ಜೀವನವನ್ನು ನಡೆಸುತ್ತಿದ್ದಾರೆ ಎಂದರು.

ಸಂಪನ್ಮೂಲ ವ್ಯಕ್ತಿ ಲಕ್ಷ್ಮಣ ಗೌಡ ಮಾತನಾಡಿ, ಉದ್ಯೋಗಕ್ಕೆ ತಕ್ಕಂತೆ ಸ್ವರ್ಗದ ವ್ಯಾಖ್ಯಾನ ಬದಲಾಗುತ್ತಿರುತ್ತವೆ. ಆದರೆ ರೈತನ ಕೆಲಸಗಳಿಗೆ ಸ್ವರ್ಗದ ವ್ಯಾಖ್ಯಾನ ಇಲ್ಲದಿರುವುದು ದುರಂತ. ವಂಶಪಾರಂಪರ್ಯವಾಗಿ ಬಂದಂತಹ ಕೃಷಿ ಭೂಮಿಯನ್ನು ಮಾರಿ ಪಟ್ಟಣದ ಕಡೆ ಮುಖಮಾಡುತ್ತಿದ್ದಾರೆ. ಇಂತಹವರಿಂದ ಕೃಷಿಯಲ್ಲಿ ಏನೂ ಇಲ್ಲ ಎಂಬ ಮಾತು ಬರುತ್ತದೆ. ಆದರೆ ನಮ್ಮ ಬದುಕಿಗೆ ಬೇಕಾದಂತಹದ್ದು ಕೃಷಿಯಲ್ಲಿದೆ. ಒಳ್ಳೆಯ ಆರೋಗ್ಯ, ಉಡುಗೆ, ನಮ್ಮ ಆಶ್ರಯಕ್ಕೆ ಮೂಲ ಕಾರಣ ಕೃಷಿ. 
ಸುಂದರವಾದ ಕೌಟುಂಬಿಕವಾದ ಜೀವನ ಕೃಷಿಯಿಂದ ಸಾಧ್ಯ. ಹೆಚ್ಚಿನ ಪಾಲಕರು ಮಕ್ಕಳನ್ನು ಕೃಷಿಯಿಂದ ವಿಮುಖರನ್ನಾಗಿ ಮಾಡುತ್ತಿದ್ದಾರೆ. ಕೃಷಿ ಎಂಬುವುದು ಇಂದು ವಾಣಿಜ್ಯೀಕರಣವಾಗುತ್ತಿದೆ. ಆದರೆ ಹಣ ಮಾರ್ಗವಾಗಿ ಕೃಷಿ ಬಳಕೆಯಾಗಬಾರದು. ಕೃಷಿಕರು ಮಣ್ಣನ್ನು ಪ್ರೀತಿಸಬೇಕು. ಭೂಮಿಗೆ ವಿಷ ಹಾಕಬಾರದು ಎಂದರು.

ಎ.ಪಿ. ಸುಹಾಸ್ ಅವರು ಮಾತನಾಡಿ, ಜಿಲ್ಲೆಯ ಕೇಂದ್ರ ಪ್ರದೇಶವಾದ ಮಂಗಳೂರಿನಲ್ಲಿಯೂ ಕೃಷಿಯ ಮಹತ್ವ ತಿಳಿಯದಿರುವುದು ಖೇದಕರ. ಆದರೆ ಯಾಂತ್ರಿಕ ಜೀವನವನ್ನು ರೋಸಿದವರು ಮರಳಿ ಹಿಂದಿರುಗಿ ಕೃಷಿಗೆ ತಾನು ಮರಳಿ ಇದನ್ನೇ ಆಧಾರವನ್ನಾಗಿ ದೇಸಿ ಹಸುಗಳನ್ನು ಸಾಕಾಣೆ ಮಾಡುವ ಮೂಲಕ ಮಂಗಳೂರು ಮಾರುಕಟ್ಟೆಗೆ ಇದರ ಉತ್ಪನ್ನಗಳನ್ನು ಮಾರಾಟ ಮಾಡುವ ಹೊಸ ಅನುಭವವನ್ನು ಮಾಡುತ್ತಿದ್ದೇನೆ ಎಂದು ತಮ್ಮ ಜೀವನಾನುಭವನ್ನು ಹಂಚಿಕೊಂಡರು. ಇದರ ಜತೆಗೆ ನ್ಯಾಚುರಲ್ ಐಸ್‍ಕ್ರೀಂ ತಯಾರಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿರುವುದು ಗಮನಾರ್ಹ ಸಾಧನೆಯೂ ಹೌದು.

ಕೃಷಿಕರ ಕಷ್ಟವನ್ನು ಅರಿತು ಅವರ ಕಣ್ಣೀರು ಒರೆಸುವ ಕೈಯಾಗಬೇಕೆಂಬ ಆಸೆ ಇದೆ ಎಂದರು. ನಗರ ಪ್ರದೇಶದಲ್ಲಿ ಉದ್ಯೋಗಿಯಾಗಿದ್ದು ಬಳಿಕ ತಮ್ಮ ಪತಿಯ ಆಸಕ್ತಿಯಾದ ಕೃಷಿಗೆ ಕೈ ಜೋಡಿಸಿ ತಾವೂ ಕೃಷಿಯಲ್ಲಿ ತೊಡಗಿಸಿಕೊಂಡು ಪ್ರತಿ ಕೆಲಸವನ್ನು ಮಾಡುತ್ತಿರುವ ದಿವ್ಯ ಶ್ರೀ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ವಿವೇಕಾನಂದ ಪದವಿ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಎಂ.ಟಿ. ಜಯರಾಮ್ ಭಟ್, ಆಡಳಿತ ಮಂಡಳಿಯ ಕೋಶಾಧಿಕಾರಿ ಸೇಡಿಯಾಪು ಜನಾರ್ದನ ಭಟ್ ಉಪಸ್ಥಿತರಿದ್ದರು. ಕೃಷಿ ಅರ್ಥಶಾಸ್ತ್ರಜ್ಞ ವಿಶ್ವೇಶ್ವರ ಭಟ್ ಬಂಗಾರಡ್ಕ ಗೋಷ್ಠಿ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News