ಯುವ ಮತದಾರರ ಸೇರ್ಪಡೆಗೆ ಹೆಚ್ಚಿನ ಆದ್ಯತೆ: ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್
ಮಂಗಳೂರು, ಫೆ.24: ದ.ಕ.ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಜನವರಿ 1ರವರೆಗೆ ದಾಖಲಾಗಿರುವ 16,97,417 ಮತದಾರರನ್ನು ಹೊರತುಪಡಿಸಿ 21,292 ಯುವ ಮತದಾರರು ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ ಎಂದು ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ರವಿವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮುಂದಿನ ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ಈ ಬಾರಿ ಯುವ ಜನಾಂಗವು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಮತ್ತು ಮತದಾನದಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಂಟ್ವಾಳದಲ್ಲಿ ಅತೀ ಹೆಚ್ಚು ಅಂದರೆ 3,220 ಯುವ ಮತದಾರರು ಮತ್ತು ಮೂಡುಬಿದಿರೆಯಲ್ಲಿ ಅತೀ ಕಡಿಮೆ ಅಂದರೆ 1,874 ಯುವ ಮತದಾರರು ಹೆಸರು ನೋಂದಾಯಿಸಿದ್ದಾರೆ. ಉಳಿದಂತೆ ಬೆಳ್ತಂಗಡಿಯಲ್ಲಿ 2,753, ಮಂಗಳೂರು ಉತ್ತರದಲ್ಲಿ 2,476, ಮಂಗಳೂರು ದಕ್ಷಿಣದಲ್ಲಿ 2,765, ಮಂಗಳೂರಿನಲ್ಲಿ 2,272, ಪುತ್ತೂರಿನಲ್ಲಿ 3,061, ಸುಳ್ಯದಲ್ಲಿ 2,871 ಯುವ ಮತದಾರರು ಹೆಸರು ನೋಂದಾಯಿಸಿದ್ದಾರೆ ಎಂದರು.
ವಿಶೇಷ ನೋಂದಣಿ ಅಭಿಯಾನ
ಮತದಾರರ ಪಟ್ಟಿಗೆ ವಿಕಲಚೇತನರು, ಮಹಿಳೆಯರು, ದುರ್ಬಲರು ಮತ್ತು ಯುವ ಮತದಾರರ ಅನುಕೂಲಕ್ಕಾಗಿ ಹೆಸರು ನೋಂದಾಯಿಸಲು ಈಗಾಗಲೆ ಫೆ.23,24ರಂದು ವಿಶೇಷ ನೋಂದಣಿ ನಡೆಸಲಾಗಿದೆ. ಮಾರ್ಚ್ 2 ಮತ್ತು 3 ರಂದು ಬೆಳಗ್ಗೆ 10ರಿಂದ ಸಂಜೆ 5:30ರವರೆಗೆ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರ ಮಿಂಚಿನ ನೋಂದಣಿ ಅಭಿಯಾನ ನಡೆಯಲಿದೆ. ಅಂದು ಮತದಾರರು ತಮ್ಮ ಪ್ರದೇಶದ ಮತಗಟ್ಟೆಗಳಿಗೆ ತೆರಳಿ ಹೆಸರನ್ನು ಪರಿಶೀಲಿಸಬಹುದು. ಹೆಸರು ನೋಂದಾಯಿಸುವವರು 2019ರ ಜನವರಿ 1ಕ್ಕೆ 18 ವರ್ಷ ಪ್ರಾಯ ತುಂಬಿರಬೇಕು. ಆಯಾ ವಿಧಾನಸಭಾ ಕ್ಷೇತ್ರದ ಸಾಮಾನ್ಯ ನಿವಾಸಿಯಾಗಿರಬೇಕು. ಅವರಿಗೆ ಸ್ಥಳದಲ್ಲಿಯೇ ಅರ್ಜಿ ನೀಡಲಾಗುವುದು ಎಂದರು.
ಬೇಕಾದ ದಾಖಲೆಗಳು
ಶಾಲಾ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡು, ಪಾಸ್ಪೋರ್ಟ್, ಎಸೆಸೆಲ್ಸಿ /ಪಿಯುಸಿ ಅಂಕಪಟ್ಟಿಗಳು, ಪಾನ್ ಕಾರ್ಡು ಹಾಗೂ ವೈದ್ಯಕೀಯ ಪ್ರಮಾಣ ಪತ್ರ, ಪಡಿತರ ಚೀಟಿ, ಆಧಾರ್ ಕಾರ್ಡು, ಗ್ಯಾಸ್ ಸಿಲಿಂಡರ್ ಸ್ವೀಕೃತಿ ರಶೀದಿ, ವಿದ್ಯುತ್ ಬಿಲ್ ಪಾವತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಬಾಡಿಗೆ ಕರಾರು ಪತ್ರ ಹಾಗೂ ಇನ್ನಿತರ ದಾಖಲೆಗಳು ಮತ್ತು ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಅಭಿಯಾನದಲ್ಲಿ ಭಾಗವಹಿಸಬಹುದು ಎಂದು ಹೇಳಿದರು.
ಸಹಾಯಕ ಚುನಾವಣಾಧಿಕಾರಿಗಳ ನೇಮಕ: ಲೋಕಸಭಾ ಚುನಾವಣೆಗಾಗಿ 8 ಕ್ಷೇತ್ರಕ್ಕೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಅಂದರೆ ಬೆಳ್ತಂಗಡಿಗೆ ತೋಟಗಾರಿಕಾ ಇಲಾಖೆಯ ಉಪನಿರ್ದೇಸಕ ಎಚ್.ಆರ್.ನಾಯ್ಕ (ಮೊ.ಸಂ: 9448999226), ಮೂಡುಬಿದಿರೆಗೆ ವಿಶೇಷ ಭೂ ಸ್ವಾಧೀನಾಧಿಕಾರಿ ಸವಿತಾ ಎಂ.ಕೆ. (8105036666), ಮಂಗಳೂರು ಉತ್ತರಕ್ಕೆ ಮೆಸ್ಕಾಂ ಜನರಲ್ ಮ್ಯಾನೇಜರ್ ಸೋಮಪ್ಪ ಕಡಕೊಲ (9480833099), ಮಂಗಳೂರು ದಕ್ಷಿಣಕ್ಕೆ ಮನಪಾ ಉಪಾಯುಕ್ತೆ ಗಾಯತ್ರಿ ಎನ್.ನಾಯ್ಕಿ (9448259312), ಮಂಗಳೂರಿಗೆ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ರವಿಚಂದ್ರ ನಾಯ್ಕ (9916821123), ಬಂಟ್ವಾಳಕ್ಕೆ ದ.ಕ.ಜಿಪಂ ಉಪಕಾರ್ಯದರ್ಶಿ ಎಸ್.ಸಿ.ಮಹೇಶ್ (9480862001), ಪುತ್ತೂರಿಗೆ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ (9482326262), ಸುಳ್ಯಕ್ಕೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ಎಂ.ಸಿ. ಶ್ರೀನಿವಾಸಯ್ಯ (9880090214)ಅವರನ್ನು ನಿಯುಕ್ತಿಗೊಳಿಸಲಾಗಿದ್ದು, ಅಗತ್ಯವಿದ್ದಲ್ಲಿ ಸಂಪರ್ಕಿಸಬಹುದಾಗಿದೆ.
71 ಹೆಚ್ಚುವರಿ ಮತಗಟ್ಟೆ: ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಹಿಂದೆ 1790 ಮತಗಟ್ಟೆಗಳಿದ್ದರೆ, ಇದೀಗ 71 ಹೆಚ್ಚುವರಿ ಮತಗಟ್ಟೆಗಳನ್ನು ನಿರ್ಮಿಸಲಾಗುತ್ತದೆ. ಮತಗಟ್ಟೆಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲು ಸಿದ್ಧತೆ ನಡೆಸಲಾಗುತ್ತದೆ. ವಿಕಲಚೇತನ ಮತದಾರರಿಗೂ ಅನುಕೂಲವಾಗುವಂತಹ ವ್ಯವಸ್ಥೆಯನ್ನು ಮತಗಟ್ಟೆಗಳಲ್ಲಿ ಮಾಡಲಾಗುತ್ತದೆ. ಅಲ್ಲದೆ, ಪಿಂಕ್ ಮತಗಟ್ಟೆಗಳನ್ನೂ ನಿರ್ಮಿಸಲಾಗುತ್ತದೆ ಎಂದರು.
ವಿಕಲಚೇತನರು: ದ.ಕ.ಜಿಲ್ಲೆಯಲ್ಲಿ 10,911 ವಿಕಲಚೇತನ ಮತದಾರರಿದ್ದಾರೆ. ಆ ಪೈಕಿ 10,888 ಮಂದಿಯ ಹೆಸರು ಮತದಾರ ಪಟ್ಟಿಯಲ್ಲಿ ದಾಖಲಾಗಿದೆ. ಉಳಿದವರ ಹೆಸರು ಸೇರ್ಪಡೆಗೆ ಬಿಎಲ್ಒಗಳು ಮನೆ ಮನೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದ್ದಾರೆ.
ಟೋಲ್ ಫ್ರೀ ಸಂಖ್ಯೆ-1950: ಜಿಲ್ಲೆಯ ಮತದಾರರಿಗೆ ಅನುಕೂಲ ಕಲ್ಪಿಸಲು ಟೋಲ್ ಫ್ರೀ ಸಂಖ್ಯೆ -1950ನ್ನು ರಚಿಸಲಾಗಿದ್ದು, ಈಗಾಗಲೆ ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ದಿನದ 24 ಗಂಟೆಯೂ ಇದು ಕಾರ್ಯಾಚರಿಸಲಿದೆ. ಸಹಾಯವಾಣಿ ಸಂಖ್ಯೆಯು ದೇಶಕ್ಕೊಂದೇ ಆಗಿದೆ. ಆಯಾ ಜಿಲ್ಲೆಗೆ ಸಂಬಂಧಿಸಿ ಕರೆ ಮಾಡುವವರು ನೇರವಾಗಿ ಮತ್ತು ಬೇರೆ ಜಿಲ್ಲೆಗೆ ಕರೆ ಮಾಡುವವರು ಎಸ್ಟಿಡಿ ಕೋಡ್ ಸಂಖ್ಯೆ ಬಳಸಬೇಕಿದೆ.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಆರ್.ವೆಂಕಟಾಚಲಪತಿ ಉಪಸ್ಥಿತರಿದ್ದರು.