ಪರಿಸರ ಸ್ನೇಹಿ ಸ್ಯಾನಿಟರಿ ನ್ಯಾಪ್ಕಿನ್ಗಳ ಬಳಕೆ ಕುರಿತು ಮಾಹಿತಿ
ಉಡುಪಿ, ಫೆ.27: ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಲೈಂಗಿಕ ಕಿರುಕುಳ ನಿವಾರಣಾ ಸಮಿತಿ, ಯುವ ರೆಡ್ಕ್ರಾಸ್ ಘಟಕಗಳ ಜಂಟಿ ಆಶ್ರಯದಲ್ಲಿ ಪರಿಸರ ಸ್ನೇಹಿ ಮತ್ತು ಪುನರ್ ಬಳಕೆ ಯೋಗ್ಯ ಸ್ಯಾನಿಟರಿ ನ್ಯಾಪ್ಕಿನ್ಗಳ ಉಪಯೋಗದ ಕುರಿತ ಮಾಹಿತಿ ಕಾರ್ಯಾಗಾರವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಕೇರಳ ಶ್ರೀಮಾತಾ ಅಮೃತಾನಂದಮಯಿ ಮಠದ ಸಹನಿರ್ದೇಶಕಿ ಅಂಜು ಬೆಸ್ಟಿ ಮಾತನಾಡಿ, ಇಂದು ಮಹಿಳೆಯರು ಪ್ಲಾಸ್ಟಿಕ್ಯುಕ್ತ ಪುನರ್ ಬಳಕೆ ಮಾಡಲಾಗದ ಸ್ಯಾನಿಟರಿ ಪ್ಯಾಡ್ಗಳನ್ನು ಉಪಯೋಗಿಸಿ ಪರಿಸರಕ್ಕೆ ಹಾನಿ ಮಾಡುತ್ತಿದ್ದಾರೆ. ಈಗ ಪುನರ್ ಬಳಕೆ ಮಾಡಬಹುದಾದ ಕಾಟನ್ ಪ್ಯಾಡ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅವುಗಳು ಹೆಚ್ಚು ಬಯೋ ಡಿಗ್ರೇಡೇಬಲ್ ಮತ್ತು ಮಿತವ್ಯಯಕಾರಿಯಾಗಿದೆ. ಇದರಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲ ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಎಸ್. ವಹಿಸಿ ದ್ದರು. ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಕುಂದಾಪುರ ಘಟಕದ ಸದಸ್ಯರಾದ ಸರಸ್ವತಿ ಜಿ.ಪುತ್ರನ್, ಮಾಲತಿ ಬಂಗೇರ, ಕಲ್ಪನಾ ಭಾಸ್ಕರ್ ಉಪಸ್ಥಿತರಿದ್ದರು.
ಕಾಲೇಜಿನ ಲೈಂಗಿಕ ಕಿರುಕುಳ ನಿವಾರಣಾ ಸಮಿತಿಯ ಸಂಚಾಲಕ ಜಯ ಮಂಗಳ ಸ್ವಾಗತಿಸಿದರು. ಯುವ ರೆಡ್ಕ್ರಾಸ್ ಘಟಕದ ಸಂಚಾಲಕ ಶೋಭಾ ಆರ್. ವಂದಿಸಿದರು. ವಿದ್ಯಾರ್ಥಿನಿ ಮುಖ್ಯ ಪ್ರತಿನಿಧಿ ಸಮೀನಾ ಕಾರ್ಯಕ್ರಮ ನಿರೂಪಿಸಿದರು.