×
Ad

ಮಂಗಳೂರು: ಹೆದ್ದಾರಿ ಅಗಲೀಕರಣಕ್ಕೆ ಒತ್ತಾಯಿಸಿ ಸಾಮೂಹಿಕ ಧರಣಿ

Update: 2019-02-27 21:06 IST

ಮಂಗಳೂರು, ಫೆ.27: ಸಂಸದ ನಳಿನ್‌ಕುಮಾರ್ ಕಟೀಲು ಅವರ ಬೇಜವಾಬ್ದಾರಿತನ, ಅಸಮರ್ಥ ಆಡಳಿತಕ್ಕೆ ಜಿಲ್ಲೆಯನ್ನು ಹಾದು ಹೋಗುವ ಹೆದ್ದಾರಿಗಳು ಬಲಿಯಾಗಿದ್ದು, ಹೆದ್ದಾರಿ ಅಗಲೀಕರಣ ಕಾಮಗಾರಿಗಳನ್ನು ತಕ್ಷಣದಿಂದಲೇ ಆರಂಭಿಸಬೇಕು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದರು.

ಕಾರ್ಕಳ, ಮೂಡುಬಿದಿರೆ, ಮಂಗಳೂರು ಹೆದ್ದಾರಿ ಅಗಲೀಕರಣ ಹೋರಾಟ ಸಮಿತಿಯಿಂದ ಗುರುಪರ-ಕೈಕಂಬ ಜಂಕ್ಷನ್‌ನಲ್ಲಿ ಹೆದ್ದಾರಿ ಅಗಲೀಕರಣಕ್ಕೆ ಒತ್ತಾಯಿಸಿ ನಡೆದ ಸಾಮೂಹಿಕ ಧರಣಿಯನ್ನುದ್ದೇಶಿಸಿ ಅವರು ಮಾತನಾಡಿದರು.

ದಶಕ ಸಂದರೂ ಪೂರ್ತಿಯಾಗದ ಪಂಪ್‌ವೆಲ್, ತೊಕ್ಕೊಟ್ಟು ಮೇಲ್ಸೇತುವೆ, ಸುರತ್ಕಲ್ ಅಕ್ರಮ ಟೋಲ್‌ಗೇಟ್, ಗುತ್ತಿಗೆದಾರರು ಅರ್ಧಕ್ಕೆ ಕಾಮಗಾರಿ ಸ್ಥಗಿತಗೊಳಿಸಿರುವ ಬಿ.ಸಿ.ರೋಡ್, ಗುಂಡ್ಯ ಚತುಷ್ಪಥ ರಸ್ತೆ ಕಾಮಗಾರಿ ಸಂಸದರ ಕಾರ್ಯವೈಖರಿಗೆ ಕನ್ನಡಿಯಾಗಿವೆ. ಸಂಸದರ ತೂಕವಿಲ್ಲದ ಬಣ್ಣದ ಮಾತುಗಳ ಭರವಸೆಯನ್ನೇ ನಂಬಿ ಕೂತರೆ ನಂತೂರು, ಮೂಡುಬಿದಿರೆ, ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಗೊಳ್ಳಲು ಶತಮಾನವೇ ಬೇಕಾದೀತು ಎಂದು ಸಂಸದ ನಳಿನ್ ಕುಮಾರ್ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

‘ನಂಬರ್ ಒನ್ ಸಂಸದ’ ಎಂದು ತನ್ನ ಬೆಂಬಲಿಗರಿಂದ ಜೈಕಾರ ಹಾಕಿಸಿಕೊಳ್ಳುವ ಸಂಸದರು ಜಿಲ್ಲೆಯ ಹಿತಾಸಕ್ತಿಗಳನ್ನು ದೆಹಲಿಯಲ್ಲಿ ಪ್ರತಿನಿಧಿಸುವಲ್ಲಿ ದಯನೀಯ ವೈಫಲ್ಯ ಕಂಡಿದ್ದಾರೆ. ವಿಜಯಾ ಬ್ಯಾಂಕ್ ವಿಲೀನ, ಮಂಗಳೂರು ಬಂದರು, ವಿಮಾನ ನಿಲ್ದಾಣ ಖಾಸಗೀಕರಣ ಮುಂತಾದ ಜಿಲ್ಲೆಯ ಗಂಭೀರ ವಿಷಯಗಳಲ್ಲೂ ನಳಿನ್ ಕುಮಾರ್ ಕಟೀಲು ಜನತೆಯ ಪರವಾಗಿ ನಿಲ್ಲಲಿಲ್ಲ ಎಂದು ಅವರು ಆರೋಪಿಸಿದರು.

ಮಾಜಿ ತಾಲೂಕು ಪಂಚಾಯತ್ ಸದಸ್ಯ ಪೃಥ್ವಿರಾಜ್ ಮಾತನಾಡಿ, ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಈ ಭಾಗದ ಊರುಗಳಿಗೆ ಸರಿಯಾದ ಹೆದ್ದಾರಿ ಇಲ್ಲದಿರುವುದು ಅಭಿವೃದ್ದಿಗೆ ದೊಡ್ಡ ತೊಡಕಾಗಿದೆ. ಮಂಗಳೂರು, ಮೂಡುಬಿದಿರೆ ಮಧ್ಯೆ ವಾಹನಗಳು ತೆವಳಿಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣಗೊಂಡಿದೆ. ಸತತ 30 ವರ್ಷ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುತ್ತಿರುವ ಬಿಜೆಪಿ ಹಾಗೂ ಈಗಿನ ಸಂಸದ ನಳಿನ್ ಕುಮಾರ್ ಕಟೀಲು ಹೆದ್ದಾರಿಯ ಇಂದಿನ ದುಸ್ಥಿತಿಗೆ ನೇರಕಾರಣ.ಹೆದ್ದಾರಿ ಅಗಲೀಕರಣದ ಕುರಿತು ತಿಂಗಳಿಗೊಮ್ಮೆ ದಿನಾಂಕ ಘೋಷಣೆ ಮಾಡಿದ್ದೇ ಸಂಸದರ ಸಾಧನೆ ಎಂದು ವ್ಯಂಗ್ಯವಾಡಿದರು.

ಸ್ಥಳೀಯ ಮುಂದಾಳು ಕಿಟ್ಟಣ್ಣ ರೈ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ರಾಜ್ಯ ರೈತ ಸಂಘದ ಮುಖಂಡರಾದ ರೋನಿ ಮೆಂಡೋನ್ಸಾ, ಆಲ್ವಿನ್ ಮೆನೇಜಸ್ ಧರಣಿಯನ್ನುದ್ದೇಶಿಸಿ ಮಾತನಾಡಿದರು.

ಕಾರ್ಮಿಕ ನಾಯಕರಾದ ಯು.ಬಿ. ಲೋಕಯ್ಯ, ಗಂಗಯ್ಯ ಅಮೀನ್, ಸಾಮಾಜಿಕ ಕಾರ್ಯಕರ್ತರಾದ ಬಾವಾ ಪದರಂಗಿ, ಜಬ್ಬಾರ್ ಮಲ್ಲೂರು, ಡಿವೈಎಫ್‌ಐ ಮುಖಂಡರಾದ ಮನೋಜ್ ವಾಮಂಜೂರು, ರಿಯಾಜ್ ಮಾಂತೂರು, ತಸ್ರೀಫ್ ಮೂಡುಬಿದಿರೆ, ದಿನೇಶ್ ವಾಮಂಜೂರು, ಸಿಐಟಿಯು ಮುಖಂಡರಾದ ರಾಧ, ಗಿರಿಜಾ, ವಸಂತಿ ಕುಪ್ಪೆಪದವು, ಲಕ್ಷ್ಮೀ, ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ವಾಸುದೇವ ಉಚ್ಚಿಲ, ನೋಣಯ್ಯ ಗೌಡ ಮತ್ತಿತರರು ಉಪಸ್ಥಿತರಿದ್ದರು. ಹೋರಾಟ ಸಮಿತಿಯ ಸಂಚಾಲಕ ಯಾದವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಚಾಲಕ ಸದಾಶಿವ ದಾಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News