ದ.ಕ. ಜಿಲ್ಲೆಯಲ್ಲಿ 20 ಸಾವಿರ ಮಂದಿಗೆ ಉಜ್ವಲ ಯೋಜನೆ ಗ್ಯಾಸ್ ವಿತರಿಸಲಾಗಿದೆ: ಸಂಸದ ನಳಿನ್
ಬಂಟ್ವಾಳ, ಫೆ. 27: ದಕ್ಷಿಣ ಕನ್ನಡ ಜಿಲ್ಲೆ ಹೊಗೆ ಮುಕ್ತ ಜಿಲ್ಲೆಯಾಗಿ ಪರಿವರ್ತನೆಗೊಂಡಿದೆ. ಜಿಲ್ಲೆಯಲ್ಲಿ 20 ಸಾವಿರ ಜನರಿಗೆ ಉಜ್ವಲ ಯೋಜನೆ ಗ್ಯಾಸ್ ವಿತರಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಅವರು ಬುಧವಾರ ಮಾಣಿ ಗ್ರಾಮ ಪಂಚಾಯತ್ನಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಗ್ಯಾಸ್ ವಿತರಣೆ-ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ ಹಾಗೂ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದಿನ ಅವಧಿಯಲ್ಲಿ 52 ಸಾವಿರ ಜನರಿಗೆ ಗ್ಯಾಸ್ ವಿತರಿಸಲಾಗಿದೆ. ಬಡತನ ನಿರ್ಮೂಲನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶಿಷ್ಟ ಯೋಜನೆ ಗಳನ್ನು ಹಮ್ಮಿಕೊಂಡಿದ್ದಾರೆ. ನಮ್ಮ ಸೈನಿಕರು ಉಗ್ರಗಾಮಿಗಳಿಗೆ ತಕ್ಕ ಉತ್ತರ ನೀಡುವ ಮೂಲಕ ಹುತಾತ್ಮರ ಆತ್ಮಕ್ಕೆ ಶಾಂತಿ ಅರ್ಪಿಸಿದ್ದಾರೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಮಾತನಾಡಿ, ಪ್ರಧಾನಿಯವರು ಯೋಧರಿಗೆ ಸ್ಫೂರ್ತಿ ನೀಡುವ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ಭಾರತ ಸ್ವಾಭಿಮಾನದ ದೇಶ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದರು.
ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರಿಗೆ ಉಜ್ವಲ ಯೋಜನೆ ಗ್ಯಾಸ್ ವಿತರಿಸಲಾಯಿತು. 10 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೂರಿಕುಮೇರು-ಕಾರ್ಯಾಡ್ಕ ಕಾಂಕ್ರೀಟ್ ರಸ್ತೆಗೆ ಶಿಲಾನ್ಯಾಸ ನೆರವೇರಿಸಲಾಯಿತು. 94ಸಿ ಹಕ್ಕು ಪತ್ರ ಹಾಗೂ ವಿವಿಧ ಸಹಾಯಧನ ಚೆಕ್ಗಳನ್ನು ವಿತರಿಸಲಾಯಿತು.
ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ಎ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸಂಪಾವತಿ, ಅಭಿವೃದ್ಧಿ ಅಧಿಕಾರಿ ನಾರಾಯಣ, ಗ್ರಾಮ ಪಂಚಾಯತ್ ಸದಸ್ಯರಾದ ಇಬ್ರಾಹಿಂ ಮಾಣಿ, ರಮಣಿ, ಸುನಂದ,ತೋಟ ನಾರಾಯಣ ಶೆಟ್ಟಿ, ಗಣೇಶ್ ರೈ, ಪೆರಾಜೆ ಗ್ರಾಮ ಪಂಚಾಯತ್ ಸದಸ್ಯ ಉಮೇಶ್, ಹರಿಕೃಷ್ಣ ಬಂಟ್ವಾಳ, ಬಂಟ್ವಾಳ ಕ್ಷೇತ್ರದ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಕಾರ್ಯದರ್ಶಿ ಮೋನಪ್ಪ ದೇವಸ್ಯ, ಮಾಣಿ ಬಿಜೆಪಿ ಅಧ್ಯಕ್ಷ ಪುಷ್ಪರಾಜ್, ಕಾರ್ಯದರ್ಶಿ ಹರೀಶ್ ಕುಲಾಲು, ನಾರಾಯಣ, ಜಗದೀಶ, ವಿಟ್ಲ ಕಂದಾಯ ನಿರೀಕ್ಷಕ ದಿವಾಕರ, ಗ್ರಾಮ ಕರಣಿಕೆ ಸುರಕ್ಷಾ, ಇಂಡೇನ್ ಗ್ಯಾಸ್ನ ರಮೇಶ್ ರಾವ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನರಸಿಂಹ ಶೆಟ್ಟಿ ಮಾಣಿ ಸ್ವಾಗತಿಸಿ, ನಿರೂಪಿಸಿದರು.