ಕರ್ತಾರ್ಪುರ ಕಾರಿಡಾರ್ ಯೋಜನೆ: ಮಾರ್ಚ್ 14ರಂದು ಪಾಕಿಸ್ತಾನದೊಂದಿಗೆ ಸಭೆ ನಡೆಸಲು ಭಾರತ ಸಿದ್ಧ
ಹೊಸದಿಲ್ಲಿ, ಫೆ. 28: ಪ್ರಸ್ತುತ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿಯಿದೆ. ಆದರೆ, ಕರ್ತಾರ್ಪುರ ಕಾರಿಡರ್ನ ಸಾಧ್ಯತೆ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲು ಪಾಕಿಸ್ತಾನದ ಜೊತೆ ಮಾರ್ಚ್ 14ರಂದು ಸಭೆ ನಡೆಸಲು ಭಾರತ ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.
ಬಹುನಿರೀಕ್ಷಿತ ಕಾರಿಡಾರ್ನ ಸಾಧ್ಯತೆಗಳ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳಲು ಸಭೆಗೆ ಮಾರ್ಚ್ 14 ದಿನಾಂಕ ನಿಗದಿಪಡಿಸಲಾಗಿದೆ. ಆದರೆ, ಪುಲ್ವಾಮ ಭಯೋತ್ಪಾದಕ ದಾಳಿ ಹಾಗೂ ಕಳೆದ ಕೆಲವು ದಿನಗಳಿಂದ ಇರುವ ಉದ್ವಿಗ್ನತೆ ಈ ಸಭೆ ನಡೆಯುವ ಸಾಧ್ಯತೆಯ ಬಗ್ಗೆ ಗಂಭೀರ ಸಂಶಯಗಳನ್ನು ಹುಟ್ಟು ಹಾಕಿತ್ತು.
ಸಾಕಷ್ಟು ಸಂಖ್ಯೆಯ ಭಾರತೀಯರಿಗೆ ತೊಂದರೆ ಉಂಟಾಗುತ್ತಿರುವುದರಿಂದ ಕರ್ತಾರ್ಪುರ ಕಾರಿಡಾರ್ ವಿಷಯದ ಕುರಿತು ಚರ್ಚೆ ನಡೆಸಲು ಭಾರತ ಈಗಲೂ ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಮಾತುಕತೆ ಪ್ರಸ್ತಾಪವನ್ನು ಪಾಕಿಸ್ತಾನ ಸರಕಾರ ಮುಂದಿಟ್ಟಿತ್ತು. ಅದನ್ನು ಭಾರತ ಒಪ್ಪಿಕೊಂಡಿತ್ತು ಎಂದು ಅವರು ಹೇಳಿದ್ದಾರೆ.
ಈ ಪ್ರಸ್ತಾಪಿತ ಕರ್ತಾರ್ಪುರ ಕಾರಿಡರ್ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕರ್ತಾರ್ಪುರದಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್ಗೆ ಸಿಖ್ಖ್ ಯಾತ್ರಿಗಳು ಸುಲಭವಾಗಿ ತೆರಳಲು ಅನುಕೂಲ ಕಲ್ಪಿಸಲಿದೆ.
ಗುರುದ್ವಾರ ಕರ್ತಾರ್ಪುರ ಸಾಹಿಬ್ಗೆ ಭಾರತದ ಕಡೆಯಿಂದ ಸಿಖ್ಖ್ ಯಾತ್ರಿಗಳು ತೆರಳಲು ಅನುಕೂಲವಾಗುವಂತೆ ಸೌಲಭ್ಯ ಕಲ್ಪಿಸಲು ಭಾರತ ಹಾಗೂ ಪಾಕಿಸ್ತಾನ ಒಪ್ಪಿಕೊಂಡಿತ್ತು. ಕಳೆದ ವರ್ಷ ನವೆಂಬರ್ನಲ್ಲಿ ಉಭಯ ರಾಷ್ಟ್ರಗಳು ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದವು.