×
Ad

ಲಾರಿ ಢಿಕ್ಕಿ ಹೊಡೆಸಿ ಓರ್ವನ ಸಾವು ಪ್ರಕರಣ: ಆರೋಪಿಗೆ ಎರಡು ವರ್ಷ ಜೈಲು ಶಿಕ್ಷೆ

Update: 2019-03-01 22:21 IST

ಮಂಗಳೂರು, ಮಾ.1: ‘ಅಪಘಾತ ಸಂಭವಿಸಿ ಮಾನವ ಹತ್ಯೆ ಆಗಬಹುದು’ ಎಂದು ಅರಿವಿದ್ದರೂ ಮದ್ಯ ಸೇವಿಸಿ ನಿರ್ಲಕ್ಷದಿಂದ ಲಾರಿ ಚಲಾಯಿಸಿ ಅಪಘಾತ ಎಸಗಿ ಓರ್ವರ ಸಾವಿಗೆ ಕಾರಣವಾದ ಅಪರಾಧಿಗೆ ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮಧ್ಯಪ್ರದೇಶದ ಮುಕೇಶ್ ಯಾದವ್(33) ಶಿಕ್ಷೆಗೊಳಗಾದವರು.

ಈತ ಮದ್ಯ ಸೇವನೆ ಮಾಡಿ ನಿರ್ಲಕ್ಷದಿಂದ ಲಾರಿ ಚಲಾಯಿಸಿ ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿಕಪ್‌ನಲ್ಲಿದ್ದ ರಾಮಚಂದ್ರ ಠಾಕೂರು (41) ಎಂಬವರು ಮೃತಪಟ್ಟಿದ್ದರು.

ಪ್ರಕರಣದ ಹಿನ್ನೆಲೆ: 2015ರ ಜೂನ್ 19ರಂದು ಸಂಜೆ 5 ಗಂಟೆಗೆ ಮುಕೇಶ್ ಯಾದವ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರು ಕಡೆಯಿಂದ ಲಾರಿ ಚಲಾಯಿಸಿಕೊಂಡು ಬಂದಿದ್ದಾನೆ. ಬೈಕಂಪಾಡಿ ಜೋಕಟ್ಟೆ ಕ್ರಾಸ್ ಬಳಿ ಸಂಚಾರ ಪೊಲೀಸರ ಸೂಚನೆ ಮೇರೆಗೆ ನಿಲ್ಲಿಸಿದ್ದ ಕಾರಿನ ಹಿಂಬದಿಗೆ ಲಾರಿ ಢಿಕ್ಕಿ ಹೊಡೆದಿದೆ. ಲಾರಿ ನಿಲ್ಲಿಸುವಂತೆ ಪೊಲೀಸರ ಸೂಚನೆಯನ್ನು ಧಿಕ್ಕರಿಸಿ ಮುಂದಕ್ಕೆ ಚಲಾಯಿಸಿಕೊಂಡು ಹೋಗಿ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಮುಂಗಾರು ವೃತ್ತದಲ್ಲಿ ಎದುರಿನಿಂದ ಬಂದ ಪಿಕಪ್‌ಗೆ ಢಿಕ್ಕಿ ಹೊಡೆದಿದ್ದಾನೆ.

ಈ ಸಂದರ್ಭ ಪಿಕಪ್ ಪಲ್ಟಿಯಾಗಿದೆ. ಅದರಡಿಗೆ ಸಿಲುಕಿದ ರಾಮಚಂದ್ರ ಠಾಕೂರು ಗಂಭೀರ ಗಾಯಗೊಂಡು ಮರುದಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಪೊಲೀಸರು ಹಾಗೂ ಸಾರ್ವಜನಿಕರು ಆರೋಪಿ ಲಾರಿ ಚಾಲಕ ಮುಕೇಶ್ ಯಾದವ್‌ನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ಕರೆ ತಂದಿದ್ದರು. ವೈದ್ಯರು ಪರೀಕ್ಷಿಸಿದಾಗ ಆತ ಮದ್ಯ ಸೇವಿಸಿರುವುದು ದೃಢಪಟ್ಟಿತು. ಈ ಬಗ್ಗೆ ಸುರತ್ಕಲ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಇನ್‌ಸ್ಪೆಕ್ಟರ್ ಮಂಜುನಾಥ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಐಪಿಸಿ ಸೆಕ್ಷನ್ 279 ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷದ ಚಾಲನೆಗೆ 3 ತಿಂಗಳು ಜೈಲು, ಐಪಿಸಿ ಸೆಕ್ಷನ್ 304 ಅಪಘಾತವಾಗಿ ಮಾನವ ಹತ್ಯೆ ಆಗಬಹು ದೆಂದು ಅರಿವಿದ್ದರೂ ಲಾರಿ ಚಲಾಯಿಸಿ ಓರ್ವನ ಸಾವಿಗೆ ಕಾರಣವಾಗಿರುವುದಕ್ಕೆ 2 ವರ್ಷ ಜೈಲು ಶಿಕ್ಷೆ, ಮೋಟಾರು ವಾಹನ ಕಾಯ್ದೆ 134ಎಬಿ ಅಡಿಯಲ್ಲಿ 1 ತಿಂಗಳು ಶಿಕ್ಷೆ ವಿಧಿಸಿ ನ್ಯಾಯಾಧೀಶ ಮಲ್ಲನಗೌಡ ತೀರ್ಪು ನೀಡಿದ್ದಾರೆ.

ಮೃತಪಟ್ಟ ರಾಮಚಂದ್ರ ಠಾಕೂರು ಅವರನ್ನು ಅವಲಂಬಿತ ಕುಟುಂಬಕ್ಕೆ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆಯಲು ಅರ್ಹರು ಎಂದು ಶಿಫಾರಸು ಮಾಡಿದ್ದಾರೆ. ಪ್ರಕರಣದಲ್ಲಿ ಒಟ್ಟು 20 ಸಾಕ್ಷಿ ವಿಚಾರಣೆ ನಡೆಸಲಾಗಿತ್ತು. ಸರಕಾರದ ಪರವಾಗಿ ಹರಿಶ್ಚಂದ್ರ ಉದ್ಯಾವರ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News