×
Ad

ಎಂಡೋಸಲ್ಫಾನ್ ತೀವ್ರತೆ ಬಗ್ಗೆ ತಜ್ಞರಿಂದ ಪರಿಶೀಲನೆ: ಸಚಿವೆ ಜಯಮಾಲಾ

Update: 2019-03-02 21:46 IST

ಉಡುಪಿ, ಮಾ.2: ಎಂಡೋಸಲ್ಫಾನ್ ಸಿಂಪಡಣೆ ಆಗಿ 39 ವರ್ಷ ಕಳೆದಿದೆ. ಆದರೂ ತಪ್ಪಿತಸ್ಥರ ವಿರುದ್ದ ಈವರೆಗೆ ಕ್ರಮಕೈಗೊಂಡಿಲ್ಲ. ಹುಟ್ಟುವ ಮಕ್ಕಳೂ ಸೇರಿದಂತೆ ಅನೇಕ ಮಂದಿ ಇನ್ನೂ ಇದರಿಂದ ನರಳುತ್ತಿದ್ದಾರೆ. ಮಣ್ಣಿನಲ್ಲಿ ಮತ್ತು ನೀರಿನಲ್ಲಿ ಬೆರೆತಿರುವ ಎಂಡೋ ಸಲ್ಪಾನ್ ತೀವ್ರತೆ ಇನ್ನೂ ಎಷ್ಟು ವರ್ಷ ಇರಬಹುದು ಎಂಬ ಬಗ್ಗೆ ಅತ್ಯಂತ ವೈಜ್ಞಾನಿಕ ರೀತಿಯಲ್ಲಿ, ನುರಿತ ತಜ್ಞರಿಂದ ಪರಿಶೀಲನೆ ನಡೆಸಿ, ಸಂತ್ರಸ್ಥರ ಸಮಸ್ಯೆಗಳನ್ನು ತಳಮಟ್ಟದಿಂದ ಬಗೆಹರಿಸಲಾ ಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಹೇಳಿದ್ದಾರೆ.

ಶನಿವಾರ, ಮಣಿಪಾಲದ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಎಂಡೋ ಸಲ್ಫಾನ್ ಸಾಮಾನ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ದರು. ಈ ಮಾತಿನ ವೇಳೆ ಸಚಿವೆ ಕರಾವಳಿ ಭಾಗದಲ್ಲಿ ಎಂಡೋ ದುರಂತಕ್ಕೆ ಕಾರಣರಾದವರ ಬಗ್ಗೆ ತಮ್ಮ ತೀವ್ರ ಅಸಮಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಎಂಡೋಸಲ್ಪಾನ್ ಪೀಡಿತರನ್ನು ಸರಿಯಾಗಿ ಗುರುತಿಸುವ ಕಾರ್ಯ ಆಗಿಲ್ಲ ಎಂಬ ದೂರು ಇದ್ದು, ಎಂಡೋ ಸಿಂಪಡಣೆ ಸಮಯದಲ್ಲಿ ಬೀಸುವ ಗಾಳಿ ಮತ್ತು ಹರಿಯುವ ನೀರಿನಿಂದ ಇದು ಸಮೀಪದ ಗ್ರಾಮಗಳಿಗೆ ಸಹ ಹರಡಿರುವ ಸಾಧ್ಯತೆಗಳಿವೆ. ಈ ಬಗ್ಗೆ ಎಂಡೋ ಪೀಡಿತ ಮತ್ತು ಪಕ್ಕದ ಗ್ರಾಮಗಳ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಂದ ಮನೆ ಮನೆ ಸಮೀಕ್ಷೆ ನಡೆಸಿ, ಅರ್ಹರನ್ನು ಗುರುತಿಸಿ ಸೌಲಭ್ಯ ವಿತರಿಸಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಎಂಡೋ ಪೀಡಿತವಾಗಿರುವ ಉಡುಪಿ, ಮಂಗಳೂರು, ಉತ್ತರ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯಲ್ಲಿರುವ ಎಲ್ಲಾ ಸಂತ್ರಸ್ಥರಿಗೆ ಒದಗಿಸಬೇಕಾದ ಸೌಲ್ಯ ಗಳ ಕುರಿತಂತೆ 4 ಜಿಲ್ಲೆಗಳ ಸಂಯುಕ್ತ ಸಭೆ ನಡೆಸುವುದಾಗಿ ತಿಳಿಸಿದ ಜಯಮಾಲಾ, ಜಿಲ್ಲೆಯ ಎಂಡೋ ಪೀಡಿತರನ್ನು ತಾನೇ ಖುದ್ದಾಗಿ ತೆರಳಿ ವೀಕ್ಷಿಸಿ ಅವರಲ್ಲಿ ಕೆಲಸ ಮಾಡುವ ಸಾಮರ್ಥ್ಯ ಇರುವವರಿಗೆ ಸೂಕ್ತ ಕೌಶಲ್ಯ ತರಬೇತಿ ನೀಡಲು ಪ್ರತ್ಯೇಕ ಘಟಕ ಆರಂಭಿಸುವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿ ಎಂಡೋ ಪೀಡಿತರ ಶಾಶ್ವತ ಪುರ್ನವಸತಿಗಾಗಿ ನಾಡಾ ಗ್ರಾಮದ ಸೇನಾಪುರದಲ್ಲಿ 5 ಎಕ್ರೆ ಜಾಗ ಗುರುತಿಸಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದಾಗ, ಶಾಶ್ವತ ಪುರ್ನವಸತಿಗೆ ಕನಿಷ್ಠ 10 ಎಕ್ರೆ ಜಾಗ ಮೀಸಲಿಡುವಂತೆ ಹಾಗೂ ದುಬೈಯಲ್ಲಿ ವಿಕಲಚೇತನರಿಗೆ ಚಕಿತ್ಸೆ ನೀಡುವ ವಿಶೇಷ ಆಸ್ಪತ್ರೆ ಮಾದರಿ ಯಲ್ಲಿ, ಎಲ್ಲಾ ಅತ್ಯಾಧುನಿಕ ಸೌಲ್ಯಗಳುಳ್ಳ ಚಿಕಿತ್ಸಾ ಕೇಂದ್ರ ತೆರೆಯುವಂತೆ ತಿಳಿಸಿದರು.

ವಿದೇಶಗಳ ವೈದ್ಯರ ನೆರವು ಪಡೆದು ಸೂಕ್ತ ಚಿಕಿತ್ಸಾ ವಿಧಾನಗಳನ್ನು ಅಳವಡಿಸಿ . ಈ ಕೇಂದ್ರದ ನಿರ್ಮಾಣಕ್ಕೆ ಅನುದಾನದ ಸಮಸ್ಯೆ ಇಲ್ಲ, ಶೀಘ್ರದಲ್ಲಿ ಸಮಗ್ರ ಯೋಜನಾ ವರದಿಯೊಂದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಹಾಗೂ ಎಂಡೋ ಪೀಡಿತರಿಗೆ ನೀಡುವ ಸಾಧನ ಸಲಕರಣೆಗಳನ್ನು ವಿಕಲಚೇತನ ಇಲಾಖೆಯಿಂದ ನೀಡುವಂತೆ ಅವರು ಹೇಳಿದರು.

ಎಂಡೋ ಪೀಡಿತರಿಗೆ ನೀಡುವ ಪಿಂಚಣಿಯನ್ನು ಆರ್‌ಟಿಜಿಎಸ್ ಮೂಲಕ ನೀಡಲು ಕ್ರಮಕೈಗೊಳ್ಳಿ. ಕನಿಷ್ಠ ಪ್ರತಿ 3 ತಿಂಗಳಿಗೊಮ್ಮೆ ಸಮಿತಿಯ ಸಭೆ ಕರೆದು, ಸೌಲ್ಯಗಳನ್ನು ವಿತರಿಸಿ ಎಂದು ಹೇಳಿದರು. ಜಿಲ್ಲೆಯಲ್ಲಿ ಹೊಸದಾಗಿ ಗುರುತಿಸಿ ರುವ 15 ಮಂದಿ ಎಂಡೋ ಪೀಡಿತರಿಗೆ ಕೂಡಲೇ ಎಲ್ಲಾ ಸೌಲ್ಯ ಒದಗಿಸುವ ಕುರಿತಂತೆ ಸಚಿವರು ಅನುಮೋದನೆ ನೀಡಿದರು.

ಸಭೆಯಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಪಂ ಸದಸ್ಯರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News