ಯುವ ಕಾಂಗ್ರೆಸ್ ಅಧ್ಯಕ್ಷರ ಕುರಿತ ಅವಹೇಳನಕಾರಿ ಸಂದೇಶ, ಬೆದರಿಕೆ: ಯಶ್ಪಾಲ್ ಸುವರ್ಣ ವಿರುದ್ಧ ಎಸ್ಪಿಗೆ ದೂರು

Update: 2019-03-04 11:24 GMT

ಉಡುಪಿ, ಮಾ.4: ಮೀನು ಮಾರಾಟ ಫೆಡರೇಶನ್‌ನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ಸಿಓಡಿ ತನಿಖೆಯನ್ನು ಚುರುಕುಗೊಳಿಸಬೇಕೆಂದು ಒತ್ತಾಯಿಸಿ ಸುದ್ದಿಗೋಷ್ಠಿ ನಡೆಸಿದ್ದ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂದೇಶಗಳನ್ನು ರವಾನಿಸಿ ಬೆದರಿಕೆಯೊಡ್ಡಿರುವ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಸೋಮವಾರ ಜಿಲ್ಲಾ ಪೋಲಿಸ್ ಅಧೀಕ್ಷಕಿ ನಿಶಾ ಜೇಮ್ಸ್ ಅವರಿಗೆ ದೂರು ನೀಡಿದೆ.

ಕಲ್ಮಾಡಿ ಫ್ರೆಂಡ್ಸ್ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಅವಹೇಳನಕಾರಿ ಸಂದೇಶಗಳನ್ನು ರವಾನಿಸಿರುವ ಯಶಪಾಲ್ ಸುವರ್ಣ, ತೀರಾ ನೀಚ ಮಟ್ಟದ ಪ್ರತಿ ಕ್ರಿಯೆ ತೋರಿ, ವಿಶ್ವಾಸ್ ಅಮೀನ್‌ನ ಕುಟುಂಬಕ್ಕೆ ಬೆದರಿಕೆ ಒಡ್ಡಿದ್ದಾರೆ. ಯಶ್‌ಪಾಲ್ ಕಳುಹಿಸಿದ ಸಂದೇಶದಲ್ಲಿ ‘ಹಣ ಬೇಕಿದ್ದರೆ ನಿನ್ನ ತಾಯಿ ತಂಗಿಯನ್ನು ಮಾರಿಬಿಡು’ ಎಂದು ಕೀಳು ಮಟ್ಟದ ಮಾತುಗಳನ್ನು ಆಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪತ್ರಿಕಾಗೋಷ್ಠಿ ನಡೆಸಿದ ಸಮಯದಿಂದ ಯಶಪಾಲ್ ಸುವರ್ಣ ಹಾಗೂ ಅವರ ಸಂಗಡಿಗರಿಂದ ಹಲವು ರೀತಿಯಲ್ಲಿ ಬೆದರಿಕೆ ಬರುತ್ತಿದ್ದು ಕೂಡಲೇ ಈ ಕುರಿತು ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಕಾಂಗ್ರೆಸ್ ದೂರಿನಲ್ಲಿ ಎಸ್ಪಿಯವರನ್ನು ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಒಬಿಸಿ ಘಟಕದ ಅಧ್ಯಕ್ಷ ಯತೀಶ್ ಕರ್ಕೇರ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ಉಡುಪಿ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಬೈಂದೂರು ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ್ ಪೂಜಾರಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮೇಶ್ ಶೆಟ್ಟಿ ಕುಂದಾಪುರ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಕಾರ್ಯದರ್ಶಿ ಕಾರ್ತಿಕ್ ಅಮೀನ್, ಕಾಪು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News