ಎಂಆರ್‌ಪಿಎಲ್ ವಾಹನಗಳ ಅಕ್ರಮ ಸಂಚಾರ ತಡೆಗೆ ಆಗ್ರಹ

Update: 2019-03-06 12:29 GMT

ಮಂಗಳೂರು, ಮಾ.6: ಹೊನ್ನಕಟ್ಟೆ, ಕುಳಾಯಿ, ಕಾನ ಒಳರಸ್ತೆಯಲ್ಲಿ ಎಂಆರ್‌ಪಿಎಲ್, ಎಚ್‌ಪಿಸಿಎಲ್, ಬಿಎಎಸ್‌ಎಫ್ ಕೈಗಾರಿಕೆಗಳಿಗೆ ಸೇರಿದ ಕೋಕ್, ಸಲ್ಫರ್ ಸಹಿತ ಅಪಾಯಕಾರಿ ಉತ್ಪನ್ನಗಳನ್ನು ಸಾಗಿಸುವ ಬೃಹತ್ ಟ್ರಕ್‌ಗಳು, ಎಲ್‌ಪಿಜಿ ಸಾಗಿಸುವ ಬುಲೆಟ್ ಟ್ಯಾಂಕರ್‌ಗಳ ನಿಯಮಬಾಹಿರ ಸಂಚಾರ ತಡೆಗೆ ಆಗ್ರಹಿಸಿ ಪಣಂಬೂರು ಉಪ ವಿಭಾಗದ ಎಸಿಪಿಗೆ ಬುಧವಾರ ಕುಳಾಯಿ ನಾಗರಿಕರ ನಿಯೋಗ ಮನವಿ ಸಲ್ಲಿಸಿತು.

ಸುರತ್ಕಲ್ ಠಾಣಾ ವ್ಯಾಪ್ತಿಯ ಕುಳಾಯಿ ಗ್ರಾಮದ ಹೊನ್ನಕಟ್ಟೆ ಜಂಕ್ಷನ್ ಬಳಿಯಿಂದ ಕುಳಾಯಿ ಗುಡ್ಡೆಯ ಮೂಲಕ ಕಾನವನ್ನು ಸಂಪರ್ಕಿಸುವ ಎರಡು ಕಿ.ಮೀ. ಉದ್ದದ ಒಳ ರಸ್ತೆಯಿದೆ. ಈ ರಸ್ತೆಯ ಇಕ್ಕೆಲಗಳಲ್ಲಿ ಕುಳಾಯಿ, ಹೊಸಬೆಟ್ಟು ಗ್ರಾಮಗಳ ಸಾವಿರಾರು ಮನೆಗಳು ಹರಡಿಕೊಂಡಿದ್ದು, ದೊಡ್ಡ ಜನವಸತಿಯಿದೆ. ಈ ಭಾಗದ ಜನರ ಸಂಚಾರದ ಅನುಕೂಲಕ್ಕಾಗಿ ಮಂಗಳೂರು ಮಹಾನಗರ ಪಾಲಿಕೆಯು ಈ ರಸ್ತೆಯನ್ನು ದಶಕದ ಹಿಂದೆ ಅಗಲಗೊಳಿಸಿ ಕಾಂಕ್ರಿಟೀಕರಣಗೊಳಿಸಿದೆ ಎಂದು ಮನವಿಯಲ್ಲಿ ತಿಳಿಸಿದೆ.

ಈ ರಸ್ತೆಯ ಪಕ್ಕದಲ್ಲೇ ಶಾಲೆ, ಮಸೀದಿ, ಚರ್ಚ್, ಭಜನಾ ಮಂದಿರಗಳಿವೆ. ಸ್ಥಳೀಯ ಗ್ರಾಮಸ್ಥರು ಮಾತ್ರವಲ್ಲದೆ, ಎಂಆರ್‌ಪಿಎಲ್, ಎಚ್‌ಪಿಸಿಎಲ್, ಕಾಟಿಪಳ್ಳ, ಬಾಳ ಮುಂತಾದೆಡೆಗೆ ತೆರಳುವ ಸಾರ್ವಜನಿಕರು ಪ್ರಯಾಣಕ್ಕೆ ಇದೇ ರಸ್ತೆಯನ್ನು ಬಳಸುತ್ತಿದ್ದಾರೆ. ಆದರೆ ಕಳೆದ ಒಂದೆರಡು ವರ್ಷಗಳಿಂದ ಎಂಆರ್‌ಪಿಎಲ್, ಎಚ್‌ಪಿಸಿಎಲ್, ಬಿಎಎಸ್‌ಎಫ್ ಮುಂತಾದ ಘನ ಕೈಗಾರಿಕೆಗಳಿಗೆ ಸೇರಿದ ಹತ್ತು ಮತ್ತು ಅದಕ್ಕಿಂತ ಹೆಚ್ವು ಚಕ್ರದ ಬೃಹತ್ ಟ್ರಕ್‌ಗಳು, ಅಪಾಯಕಾರಿ ಎಲ್‌ಪಿಜಿ ಬುಲೆಟ್ ಟ್ಯಾಂಕರ್‌ಗಳು ಹೆದ್ದಾರಿಯನ್ನು ಸಂಪರ್ಕಿಸಲು ಈ ಒಳ ರಸ್ತೆಯನ್ನು ಬಳಸುತ್ತಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ರಸ್ತೆಯಲ್ಲಿ ಸಾಮಾನ್ಯ ಸಂಚಾರ ಹಾಗೂ ಸ್ಥಳೀಯ ಗ್ರಾಮಸ್ಥರ ನೆಮ್ಮದಿಗೆ ಕಂಟಕ ತಂದಿದೆ. ವಾಹನಗಳು ಕೈಗಾರಿಕಾ ಘಟಕದಿಂದ ನೇರವಾಗಿ ಸುರತ್ಕಲ್ ಮೂಲಕ ಹೆದ್ದಾರಿಯನ್ನು ಸಂಪರ್ಕಿಸಬೇಕು ಅಥವಾ ತಮ್ಮ ಕಾರಿಡಾರ್ ರಸ್ತೆಯನ್ನು ಬಳಸಬೇಕು. ಆದರೆ ಕಳೆದ ಎರಡು ವರ್ಷಗಳಿಂದ ಈ ವಾಹನಗಳು ಒಂದೆರಡು ಕಿ.ಮೀ. ಪ್ರಯಾಣದ ಅಂತರವನ್ನು ಉಳಿಸಲು ನಿಯಮಗಳಿಗೆ ವಿರುದ್ಧವಾಗಿ ಕುಳಾಯಿ ಒಳ ರಸ್ತೆಯನ್ನು ಬಳಸುತ್ತಿವೆ ಎಂದು ಮನವಿಯಲ್ಲಿ ದೂರಲಾಗಿದೆ.

ಕೋಕ್ ಸಲ್ಫರ್ ಸಾಗಾಟದ ಟ್ರಕ್‌ಗಳು ಓವರ್ ಲೋಡ್ ತುಂಬಿಕೊಂಡು ರಸ್ತೆಗಳಲ್ಲಿ ಮಾರಕ ಕೆಮಿಕಲ್ ಪುಡಿಯನ್ನು ಚೆಲ್ಲುತ್ತಾ ಅಪಾಯಕಾರಿಯಾಗಿ ಸಾಗುತ್ತವೆ. ಇದು ಪರಿಸರವನ್ನು ಹಾಳುಗೆಡವಿ ಜನರ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತಿವೆ. ಇದು ಕೆಲವೊಮ್ಮೆ ಅಪಘಾತಗಳಿಗೂ ಕಾರಣವಾಗುತ್ತಿದೆ. ಅದೇರೀತಿ ಅಡುಗೆ ಅನಿಲ ಸಾಗಾಟದ ಎಲ್‌ಪಿಜಿ ಬುಲೆಟ್ ಟ್ಯಾಂಕರ್‌ಗಳು ಈ ರಸ್ತೆಯಲ್ಲಿ ಸಾಗುವುದು ಅತ್ಯಂತ ಅಪಾಯಕಾರಿಯಾಗಿದ್ದು, ಅಪಘಾತಕ್ಕೀಡಾದರೆ ಆಗುವ ಅನಾಹುತಗಳು ಊಹಾತೀತ ಎಂದು ಮನವಿಯಲ್ಲಿ ಅವಲತ್ತುಕೊಳ್ಳಲಾಗಿದೆ.

ಈ ಕುರಿತು ಹಲವು ಬಾರಿ ಕಂಪೆನಿಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಬದಲಾವಣೆಯಾಗಿಲ್ಲ. ಈ ಬಗ್ಗೆ ಪರಿಶೀಲಿಸಿ ನಗರ ಪಾಲಿಕೆ ಸಾರ್ವಜನಿಕರ ಓಡಾಟಕ್ಕೆ ನಿರ್ಮಿಸಿರುವ ಈ ಒಳರಸ್ತೆಯಲ್ಲಿ ನಿಯಮ ಬಾಹಿರವಾಗಿ ಸಾಗುವ ಬೃಹತ್ ವಾಹನಗಳ ಓಡಾಟವನ್ನು ತಡೆದು ಮುಂದಾಗುವ ಅಪಾಯವನ್ನು ತಡೆಯಬೇಕು ಎಂದು ಮನವಿ ಮಾಡಿದರು.

ಒಳರಸ್ತೆಗಳಲ್ಲಿ ಇಂತಹ ವಾಹನಗಳ ಓಡಾಟವನ್ನು ನಿಷೇಧಿಸುವಂತೆ ಒತ್ತಾಯಿಸಿ ಕುಳಾಯಿ ಗ್ರಾಮಸ್ಥರ ಪರವಾಗಿ ನಾಗರಿಕರ ನಿಯೋಗವು ಪಣಂಬೂರು ಉಪವಿಭಾಗದ ಎಸಿಪಿ ಶ್ರೀನಿವಾಸ ಗೌಡ ಅವರಿಗೆ ಮನವಿ ಸಲ್ಲಿಸಿತು.

ಮನವಿ ಸಲ್ಲಿಸುವ ನಿಯೋಗದಲ್ಲಿ ಸುರತ್ಕಲ್ ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಕುಳಾಯಿ ನಾಗರಿಕ ಸಮಿತಿಯ ಭರತ್ ಶೆಟ್ಟಿ ಕುಳಾಯಿ, ಗಂಗಾಧರ ಬಂಜನ್, ಶರೀಫ್ ಕುಳಾಯಿ, ಜಯರಾಮ ಆಚಾರ್ಯ, ಸತೀಶ್ ಅಮೀನ್, ಸತೀಶ್ ಅಮೀನ್, ರಾಮಚಂದ್ರ ಹೊನ್ನಕಟ್ಟೆ, ರಫೀಕ್ ಕುಳಾಯಿ, ಅಬೂಬಕರ್ ಹೊನ್ನಕಟ್ಟೆ, ಶ್ರೀನಾಥ್ ಕುಲಾಲ್, ಮನ್ಸೂರ್ ಕುಳಾಯಿ, ಹನೀಫ್ ಕುಳಾಯಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News