ದ.ಕ ಜಿಲ್ಲಾ ರೆಡ್ಕ್ರಾಸ್ ಚೇರ್ಮನ್ ಆಗಿ ಸಿಎ ಶಾಂತಾರಾಮ ಶೆಟ್ಟಿ ಮರು ಆಯ್ಕೆ
ಮಂಗಳೂರು , ಮಾ. 6: ರೆಡ್ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕಕ್ಕೆ ನಡೆದ ಚುನಾವಣೆಯಲ್ಲಿ ಅತ್ಯಧಿಕ ಮತಗಳೊಂದಿಗೆ (ಶೇ.82) ಆಡಳಿತ ಸಮಿತಿಗೆ ಆಯ್ಕೆಯಾಗಿದ್ದ ಸಿಎ ಶಾಂತಾರಾಮ ಶೆಟ್ಟಿ 2019-2022ನೇ ಸಾಲಿನ ಚೇರ್ಮನ್ ಆಗಿ ಸರ್ವಾನುಮತದಿಂದ ಮರು ಆಯ್ಕೆಯಾಗಿದ್ದಾರೆ.
ರೆಡ್ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಚೇರಿಯಲ್ಲಿ ಮಂಗಳವಾರ ನೂತನ ಆಡಳಿತ ಮಂಡಳಿ ಸಭೆಯಲ್ಲಿ 10ಮಂದಿ ಸದಸ್ಯರು ಸಿಎ ಶಾಂತಾರಾಮ ಶೆಟ್ಟಿ ಅವರನ್ನು ಚೇರ್ಮನ್ ಆಗಿ ಅವಿರೋಧವಾಗಿ ಆಯ್ಕೆಗೊಂಡರು. ಇದೇ ಸಂದರ್ಭದಲ್ಲಿ ವಿವಿಧ ಸಮಿತಿಗಳ ಅಧ್ಯಕ್ಷರನ್ನು ಈ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ವೈಸ್ಚೇರ್ಮನ್ ಆಗಿ ಉದ್ಯಮಿ ಬಿ. ನಿತ್ಯಾನಂದ ಶೆಟ್ಟಿ, ಖಜಾಂಚಿಯಾಗಿ ಉದ್ಯಮಿ ಆರ್ಚ್ಬಾಲ್ಡ್ ಮಿನೆಜಸ್, ಪ್ರಕೃತಿ ವಿಕೋಪ ನಿರ್ವಹಣೆ ಸಮಿತಿ ಅಧ್ಯಕ್ಷರು ಹಾಗೂ ರಾಜ್ಯ ರೆಡ್ಕ್ರಾಸ್ ಘಟಕದ ಜಿಲ್ಲೆಯ ಪ್ರತಿನಿಧಿಯಾಗಿ ಪಣಂಬೂರು ಬೀಚ್ ಅಭಿವೃದ್ದಿ ಸಮಿತಿಯ ಸಿಇಒ ಯತೀಶ್ ಬೈಕಂಪಾಡಿ ಆಯ್ಕೆಯಾಗಿದ್ದಾರೆ. ಆರೋಗ್ಯ ಮತ್ತು ಪ್ರಥಮ ಚಿಕಿತ್ಸಾ ಸಮಿತಿ ಅಧ್ಯಕ್ಷರಾಗಿ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಸತೀಶ್ ಭಂಡಾರಿ, ರೆಡ್ಕ್ರಾಸ್ ಬ್ಲಡ್ ಬ್ಯಾಂಕ್ ಸಮಿತಿ ಅಧ್ಯಕ್ಷರಾಗಿ ಡಾ. ಯು. ವಿ. ಶೆಣೈ, ಯುವ ರೆಡ್ಕ್ರಾಸ್ ಮತ್ತು ಜೂನಿಯರ್ ರೆಡ್ಕ್ರಾಸ್ನ ಸಮಿತಿ ಅಧ್ಯಕ್ಷರಾಗಿ ಉಪನ್ಯಾಸಕ ಸಚೇತ್ ಸುವರ್ಣ, ವಿಕಲಚೇತನ ಸಮಿತಿ ಅಧ್ಯಕ್ಷರಾಗಿ ಬ್ಯಾಂಕ್ ನಿವೃತ್ತ ಉದ್ಯೋಗಿ ರವೀಂದ್ರನಾಥ, ಸಾರ್ವಜನಿಕ ಸಂಪರ್ಕ ಮತ್ತು ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪತ್ರಕರ್ತ ಬಿ. ರವೀಂದ್ರ ಶೆಟ್ಟಿ ಹಾಗೂ ರೆಡ್ಕ್ರಾಸ್ ಕಟ್ಟಡ ಸಮಿತಿ ಅಧ್ಯಕ್ಷರಾಗಿ ಉದ್ಯಮಿ ಯೂಜಿನ್ ರೆಂಟ್ ಆಯ್ಕೆಯಾದರು.
ಎಲ್ಲಾ ಸಮಿತಿಗಳ ಅಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆದಿದ್ದು, ಈ ಸಮಿತಿಗಳ ಅಧಿಕಾರಾವಧಿ 2019ರಿಂದ 2022ರ ಮಾರ್ಚ್ ತಿಂಗಳ ವರೆಗೆ ಇರುತ್ತದೆ. ಮೊದಲ ಸಭೆಯಲ್ಲಿ ರೆಡ್ಕ್ರಾಸ್ ಜಿಲ್ಲಾ ಘಟಕ ಇಡೀ ರಾಜ್ಯಕ್ಕೆ ಮಾದರಿ ರೀತಿಯಲ್ಲಿ ಕೆಲಸ ಮಾಡುವ ಕುರಿತು ಚರ್ಚೆ ನಡೆಯಿತು. ಸಂಸ್ಥೆಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಅಭಿಪ್ರಾಯ ಮೂಡಿಬಂತು. ಸಭೆಯ ಅಧ್ಯಕ್ಷತೆಯನ್ನು ಸಿಎ ಶಾಂತಾರಾಮ ಶೆಟ್ಟಿ ವಹಿಸಿದ್ದರು. ಇದೇ ಸಂದರ್ಭ ರೆಡ್ಕ್ರಾಸ್ ಗೌರವ ಕಾರ್ಯದರ್ಶಿ ಎಸ್. ಎ. ಪ್ರಭಾಕರ ಶರ್ಮಾ ಅವರು ಆಡಳಿತ ಮಂಡಳಿ ನೂತನ ಸದಸ್ಯರಿಗೆ ರೆಡ್ಕ್ರಾಸ್ ಸಂಸ್ಥೆಯ ಪ್ರಮಾಣ ವಚನ ಬೋಧಿಸಿದರು.