×
Ad

ಆಗುಂಬೆ ಘಾಟಿ ದುರಸ್ಥಿ: ವಾಹನ ಸಂಚಾರ ನಿಷೇಧ

Update: 2019-03-07 20:30 IST

ಉಡುಪಿ, ಮಾ.7:ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ-ಉಡುಪಿ ರಸ್ತೆ ವ್ಯಾಪ್ತಿಯಲ್ಲಿ ಕಳೆದ ಜುಲೈ 10 ಮತ್ತು 13ರಂದು ಸುರಿದ ಬಾರಿ ಗಾಳಿ ಮಳೆ ಯಿಂದಾಗಿ ಆಗುಂಬೆ ಘಾಟಿಯಲ್ಲಿ 33.70ನೇ ಕಿ.ಮೀ.(14ನೇ ತಿರುವು), 35.60ಕಿ.ಮೀ.(7ನೇ ತಿರುವು) ಮತ್ತು 37ನೇ ಕಿ.ಮೀ.(ಆನೆ ಬಂಡೆ)ಗಳಲ್ಲಿ ಗುಡ್ಡ ಕುಸಿತ ಉಂಟಾಗಿ ರಸ್ತೆ ಭಾಗಶ: ಕುಸಿದಿರುವುದರಿಂದ ಈ ಜಾಗಗಳಲ್ಲಿ ಶಾಶ್ವತ ದುರಸ್ಥಿ ಕೈಗೊಳ್ಳುವ ಕಾಮಗಾರಿಗೆ ಮಂಜೂರಾತಿ ದೊರೆತಿದೆ.

ಇಲ್ಲಿ ದುರಸ್ಥಿ ಕಾಮಗಾರಿಯನ್ನು ಕೈಗೊಂಡಿರುವುದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಪರ್ಯಾಯ ಮಾರ್ಗ ದಲ್ಲಿ ವಾಹನ ಸಂಚರಿಸುವಂತೆ ಅಧಿಸೂಚನೆ ಹೊರಡಿಸಲಾಗಿದೆ. ಈ ಮೊದಲು ಮಾ.1ರಿಂದ 31ರವರೆಗೆ ಸಂಚಾರವನ್ನು ನಿಷೇಧಿಸಿದ್ದರೂ, ಮಾ.1ರಿಂದ 18ರವರೆಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಘಾಟಿ ರಸ್ತೆಯನ್ನು ಬಳಸಿ ವಿದ್ಯಾರ್ಥಿಗಳು ಹೆಬ್ರಿ-ಆಗುಂಬೆ-ಶೃಂಗೇರಿ ಮಾರ್ಗಗಳಲ್ಲಿ ಪರೀಕ್ಷೆಗೆ ತೆರಳಬೇಕಿರುವುದರಿಂದ ಇದೀಗ ಘಾಟಿ ರಸ್ತೆಯ ಸಂಚಾರವನ್ನು ಮಾ.19ರಿಂದ ಮುಂದಿನ 30 ದಿನಗಳ ಕಾಲ ಸ್ಥಗಿತಗೊಳಿಸಿ ಬದಲಿ ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥೆಯನ್ನು ಮಾಡಿ ಆದೇಶಿಸಲಾಗಿದೆ.

ಆದುದರಿಂದ ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿಯ ಮೂಲಕ ವಾಹನ ಸಂಚಾರವನ್ನು ಮಾ.19ರಿಂದ 30 ದಿನಗಳ ಕಾಲ ನಿಷೇಧಿಸಲಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಲಘು ವಾಹನಗಳಾದ ಸಾಮಾನ್ಯ ಬಸ್‌ಗಳು, ಜೀಪು, ವ್ಯಾನ್, ಎಲ್‌ಸಿವಿ (ಮಿನಿವ್ಯಾನ್), ದ್ವಿಚಕ್ರ ವಾಹನಗಳು, ಉಡುಪಿ- ಕಾರ್ಕಳ- ಮಾಳಾ ಘಾಟ್-ಶೃಂಗೇರಿ-ಕೊಪ್ಪ-ತೀರ್ಥಹಳ್ಳಿ (ರಾಷ್ಟ್ರೀಯ ಹೆದ್ದಾರಿ 169) ರಸ್ತೆಯಲ್ಲಿ ಸಂಚರಿಸುವಂತೆ, ಭಾರೀ ವಾಹನಗಳಾದ ರಾಜಹಂಸ, ಐರಾವತ ಬಸ್‌ಗಳು ಮತ್ತು ಖಾಸಗಿ ಐಶಾರಾಮಿ ಬಸ್‌ಗಳು, ಬುಲೆಟ್ ಟ್ಯಾಂಕರ್ಸ್‌, ಷಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸೀಸ್‌ಗಳು ಉಡುಪಿ- ಕುಂದಾಪುರ- ಸಿದ್ದಾಪುರ- ಹೊಸಂಗಡಿ-ಮಾಸ್ತಿಕಟ್ಟೆ- ತೀರ್ಥಹಳ್ಳಿ (ರಾಜ್ಯ ಹೆದ್ದಾರಿ 52) ರಸ್ತೆಯಲ್ಲಿ ಸಂಚರಿಸುವಂತೆ ಬದಲಿ ವ್ಯವಸ್ಥೆ ಮಾಡಲಾಗಿದೆ.

ಹೀಗಾಗಿ ಕಾಮಗಾರಿ ನಡೆಯುವ ವೇಳೆ ನಿಷೇಧಿತ ಮಾರ್ಗದಲ್ಲಿ ಯಾವುದೇ ವಾಹನ ಸಂಚರಿಸದಂತೆ ಮತ್ತು ಕಾಮಗಾರಿಗೆ ಅಡಚಣೆ ಯಾಗದಂತೆ ಸೂಕ್ತ ಸ್ಥಳಗಳಲ್ಲಿ ಫಲಕಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಬದಲಿ ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥೆ ಮಾಡಿ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News