'ಹೊಸ ಕೈಗಾರಿಕಾ ನೀತಿಗೆ ಸಲಹೆ. ಸೂಚನೆಗಳನ್ನು ನೀಡಿ'
ಉಡುಪಿ, ಮಾ. 9: ರಾಜ್ಯದ 2014-19ನೇ ಸಾಲಿನ ಕೈಗಾರಿಕಾ ನೀತಿಯ ಅವಧಿ ಮುಗಿದಿದ್ದು, ಹೊಸ ಕೈಗಾರಿಕಾ ನೀತಿಯಲ್ಲಿ ಮಹಿಳೆಯರ ಪರವಾಗಿ ಜಿಲ್ಲೆಯ ಮಹಿಳಾ ಉದ್ದಿಮೆದಾರರು ಸಲಹೆ-ಸೂಚನೆಗಳನ್ನು ನೀಡುವಂತೆ ಕರ್ನಾಟಕ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಕೆ. ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಮಹಿಳಾ ಉದ್ದಿಮೆದಾರರ ಸಂಘಟನೆ ‘ಪವರ್’ ತನ್ನ ದಶಮಾನೋತ್ಸವದ ಅಂಗವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನದ ಸಂದರ್ಭ ದಲ್ಲಿ ನಗರದ ಹೊಟೇಲ್ ಕಿದಿಯೂರಿನ ಶೇಷಶಯನ ಹಾಲ್ನಲ್ಲಿ ಹಮ್ಮಿಕೊಂಡ ‘ಎಂಪವರ್’ ಶೃಂಗಸಭೆ, ಪವರ್ ಬ್ಯುಸಿನೆಸ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಹಾಗೂ ಸಂಘಟನೆಯ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ದಿಕ್ಸೂಚಿ ಭಾಷಣದಲ್ಲಿ ಮಾತನಾಡುತಿದ್ದರು.
ಹೊಸ ಕೈಗಾರಿಕಾ ನೀತಿಯಲ್ಲಿ ಮಹಿಳಾ ಪರವಾದ ಅಂಶಗಳನ್ನು ಸೇರಿಸಲು ನೀಡುವ ಸಲಹೆ-ಸೂಚನೆಗಳನ್ನು ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಪವರ್ ಮೂಲಕ ಕೈಗಾರಿಕಾ ಇಲಾಖೆಗೆ ಕಳುಹಿಸಿಕೊಡುವಂತೆ ಅವರು ಸೂಚಿಸಿದರು.
ಮಹಿಳೆಯೊಬ್ಬಳು ಉದ್ದಿಮೆಯಲ್ಲಿ ಯಶಸ್ಸು ಪಡೆಯಲು ತುಂಬಾ ಪರಿಶ್ರಮ ಪಡೆಯಬೇಕು. ಮನೆಯ ಎಲ್ಲಾ ಕೆಲಸಗಳೊಂದಿಗೆ ಗಂಡ-ಮಕ್ಕಳ ಯೋಗಕ್ಷೇಮ ವನ್ನು ನೋಡಿಕೊಂಡು ಆಕೆ ಉದ್ದಿಮೆಯಲ್ಲೂ ಕೆಲಸ ನಿರ್ವಹಿಸಬೇಕಿದೆ. ಇದೇನೂ ಸಣ್ಣ ಜವಾಬ್ದಾರಿಯಲ್ಲ. ತುಂಬಾ ತ್ಯಾಗ ಹಾಗೂ ಶ್ರಮವನ್ನು ಇದು ಬಯಸುತ್ತದೆ ಎಂದು ರತ್ನಪ್ರಭ ಆದರೆ ಇಲ್ಲೂ ಬದಲಾವಣೆಯ ಗಾಳಿ ಬೀಸುತ್ತಿದೆ. ರಾಜ್ಯದಲ್ಲಿ ಯಶಸ್ವಿ ಮಹಿಳಾ ಉದ್ದಿಮೆದಾರರ ಸಂಖ್ಯೆ ಹೆಚ್ಚುತ್ತಿದೆ. ಡಿಜಿಟಲ್ ಹಾಗೂ ಆನ್ಲೈನ್ ಮಾರಾಟದಂಥ ತಂತ್ರಜ್ಞಾನದ ಬಳಕೆಯಿಂದ ಆಕೆಯ ಕೆಲಸ ಸುಲಭವಾಗುತ್ತಿದೆ. ಮಹಿಳೆ ಇಂದು ‘ವಂಡರ್ ವುಮನ್’, ‘ಸೂಪರ್ ವುಮನ್’ ಎಂದು ಕರೆಸಿ ಕೊಳ್ಳುತಿದ್ದಾಳೆ ಎಂದರು.
ಇದೀಗ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಮಹಿಳಾ ಉದ್ದಿಮೆದಾರರ ಸಂಘ ‘ಉಬುಂಟು’ವನ್ನು ಅಧಿಕೃತವಾಗಿ ಪ್ರಾರಂಭಿಸಲಾಗಿದೆ. ಈ ಸಂಘಟನೆಯ ಮೂಲಕ ರಾಜ್ಯದ ಮಹಿಳಾ ಉದ್ದಿಮೆದಾರರೆಲ್ಲರ ಒಗ್ಗಟ್ಟಿನ ಧ್ವನಿಯನ್ನು ಸರಕಾರದವರೆಗೆ ತಲುಪಿಸಲು ಪ್ರಯತ್ನಿಸಲಾಗುವುದು. ಉಡುಪಿಯ ಪವರ್ ಸಹ ಇದರ ಸದಸ್ಯರಾಗಬೇಕೆಂಬುದು ತಮ್ಮ ಬಯಕೆ ಎಂದರು.
ಭಾರತದ ಬಹಳಷ್ಟು ಉತ್ಪನ್ನಗಳಿಗೆ ಇಂದು ವಿದೇಶಗಳಲ್ಲೂ ಒಳ್ಳೆಯ ಬೇಡಿಕೆ ಇದೆ. ಉಬುಂಟು ಮೂಲಕ ಭಾರತದ ಕರಕುಶಲ ವಸ್ತುಗಳು ಹಾಗೂ ಇತರ ಉತ್ಪನ್ನಗಳಿಗೆ ವಿದೇಶಿ ಗ್ರಾಹಕರನ್ನು ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಕಾರ್ಕಳ ಮೂಲದ ರತ್ನಪ್ರಭಾ ನುಡಿದರು.
ಮಹಿಳೆಯರು ಬೇರೆಯವರಲ್ಲಿ ರೋಲ್ಮಾಡೆಲ್ಗಳನ್ನು ಹುಡುಕದೇ ತಾವೇ ಸ್ವತಹ ಒಬ್ಬ ರೋಲ್ಮಾಡೆಲ್ ಆಗಲು ಪ್ರಯತ್ನಿಸಬೇಕು. ಮೊದಲು ತಮ್ಮ ಮಕ್ಕಳಿಗೆ ರೋಲ್ಮಾಡೆಲ್ ಆಗಿ ಅವರನ್ನು ಸತ್ಪ್ರಜೆಯಾಗಿ ಬೆಳೆಸಿ. ಇದರಿಂದ ಸಮಾಜದಲ್ಲೂ ಬದಲಾವಣೆಯನ್ನು ಕಾಣಲು ಸಾಧ್ಯವಾಗುತ್ತದೆ ಎಂದರು.
ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪತಿ, ಸಿಂಡಿಕೇಟ್ ಬ್ಯಾಂಕಿನ ಪ್ರಾದೇಶಿಕ ಕಚೇರಿ ಜಿಎಂ ಭಾಸ್ಕರ ಹಂದೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ರಮಾನಂದ ನಾಯಕ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪವರ್ನ ಅಧ್ಯಕ್ಷೆ ಡಾ.ಗಾಯತ್ರಿ ಅತಿಥಿಗಳನ್ನು ಸ್ವಾಗತಿಸಿದರೆ, ಸಂಘಟನಾ ಕಾರ್ಯದರ್ಶಿ ಪ್ರಿಯಾ ಕಾಮತ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾಜಿ ಅಧ್ಯಕ್ಷೆ ರೇಣು ಜಯರಾಮ್ ಅತಿಥಿಗಳನ್ನು ಪರಿಚಯಿಸಿದರು. ಪವರ್ನ ಪದಾಧಿಕಾರಿಗಳಾದ ಪೂನಂ ಶೆಟ್ಟಿ, ದೀನಾ ಪ್ರಭಾಕರ್, ತಾರಾ ತಿಮ್ಮಯ್ಯ ಮುಂತಾದವರು ಉಪಸ್ಥಿತರಿದ್ದರು.