ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

Update: 2019-03-10 07:26 GMT

ಬಂಟ್ವಾಳ : ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಅತ್ಯಂತ ವೈಭವದಿಂದ ಆರಂಭ ಗೊಂಡಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಬ್ಬದ ವಾತಾವರಣ ನೆಲೆಸಿವೆ.

ಪೊಳಲಿ ಸಾವಿರ ಸೀಮೆ ಸೀರೆಗಳಿಂದ ಶೃಂಗಾರಗೊಂಡಿದ್ದು, ಎಲ್ಲೆಡೆಯಲ್ಲೂ ಪತಾಕೆಗಳೇ ಮೇಳೈಸುತ್ತಿದೆ. ದೇವಸ್ಥಾನದ ಆವರಣ ಸೇರಿದಂತೆ ಸಾವಿರ ಸೀಮೆ ವಾಪ್ತಿಯಲ್ಲಿನ ಹಲವು ದ್ವಾರಗಳಲ್ಲಿ ಜರಿಸೀರೆಗಳನ್ನೇ ಅಂದವಾಗಿ ಜೋಡಿಸಿ ಊರೂರುಗಳೇ ಅಲಂಕಾರಗೊಂಡು, ಹತ್ತೂರ ಭಕ್ತರನ್ನು ಸ್ವಾಗತಿಸುತ್ತಿದೆ.

ದಿನದಿಂದ ದಿನಕ್ಕೆ ಹೊರೆಕಾಣಿಕೆ ಮೆರವಣಿಗೆಯೋಪಾದಿಯಲ್ಲಿ ಬರುತ್ತಿದ್ದು, ಉಗ್ರಾಣಕ್ಕೆ ಸೇರಿದ ಯಾವುದೇ ವಸ್ತುಗಳೂ ಹಾಳಾಗದಂತೆ ಅದನ್ನು ಸದ್ಬಳಕೆ ಮಾಡಿ ಆಗಮಿಸಿದ ಭಕ್ತರ ಹಸಿವು, ಬಾಯಾರಿಕೆ ತಣಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡುತ್ತಿದ್ದಾರೆ.

ವಿಶಾಲವಾದ ಉಗ್ರಾಣ ವ್ಯವಸ್ಥೆ

ಹೊರೆಕಾಣಿಕೆಗೆ ಸಂಬಂಧಿಸಿ ಬಂದ ವಸ್ತುಗಳನ್ನು ಸಂಗ್ರಹಿಸಲು ವಿಶಾಲವಾದ ಉಗ್ರಾಣದಲ್ಲಿ ಅಕ್ಕಿ, ತರಕಾರಿ, ಸೀಯಾಳ ಸಹಿತ ನಾನಾ ರೀತಿಯ ಫಲವಸ್ತುಗಳನ್ನು ಶೇಖರಿಸಿಡಲಾಗುತ್ತದೆ. ಕಳೆದ ಎರಡು ದಿನಗಳಿಂದ ಅಂದಾಜು 25 ಸಾವಿರಕ್ಕೂ ಅಧಿಕ ಮಂದಿ ಕಳುಹಿಸಿದ ವಸ್ತುಗಳು ಸಂಗ್ರಹಗೊಂಡಿವೆ.

ಪಾನಕದಿಂದ ಊಟೋಪಚಾರದವರೆಗೆ

ಬ್ರಹ್ಮಕಲಶದ ಪ್ರಯುಕ್ತ ಮಾ.13ರ ತನಕ ವಿವಿಧ ಭಕ್ಷ ಭೋಜನಗಳನ್ನು ಸುಮಾರು 50 ಮಂದಿ ಬಾಣಸಿಗರ ತಂಡ ಸಿದ್ಧಪಡಿಸಲಿದೆ. ಬೆಳಗ್ಗೆ 7ರಿಂದಲೇ ಉಪಾಹಾರ, ಮಧ್ಯಾಹ್ನ 12ರಿಂದ ಅನ್ನಪ್ರಸಾದ, ಸಂಜೆ 3ರಿಂದ ಉಪಹಾರ, ರಾತ್ರಿ ಊಟದ ವ್ಯವಸ್ಥೆ 11 ಗಂಟೆವರೆಗೂ ಇರುತ್ತದೆ. ಪೊಳಲಿಗೆ ಬಂದವರು ಹಸಿದ ಹೊಟ್ಟೆಯಲ್ಲಿ ಮರಳಬಾರದು ಎಂದು ಆತಿಥ್ಯದ ಹೊಣೆ ಹೊತ್ತ ಕಾರ್ಯಕರ್ತರು, ಸ್ವಯಂಸೇವಕರು ಬಂದವರೆಲ್ಲರಿಗೂ ಬಾಯಾರಿಕೆ ತಣಿಸಲು ನೀರು, ಪಾನಕದಿಂದ ಊಟೋಪಚಾರದವರೆಗೆ ಒದಗಿಸುತ್ತಿದ್ದಾರೆ. ಊಟೋಪಚಾರದ ತಯಾರಿಗಾಗಿ 43 ಒಲೆಗಳು, 15ಕ್ಕೂ ಅಧಿಕ ಗ್ಯಾಸ್ ಸ್ಟವ್‌ಗಳನ್ನು ಬಳಸಿಕೊಂಡು ಸುಮಾರು 250 ಬಾಣಸಿಗರು ರುಚಿಯಾದ ಪ್ರಸಾದ ಭೋಜನ, ಉಪಾಹಾರಗಳನ್ನು ಸಿದ್ಧಗೊಳಿಸುತ್ತಿದ್ದಾರೆ.

ವಿಶಾಲವಾದ ಪಾರ್ಕಿಂಗ್-ಗರಿಷ್ಠ ಸ್ವಚ್ಛತೆ

ಬ್ರಹ್ಮಕಲಶೋತ್ಸವದ ಪ್ರಯುಕ್ತ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ವಾಹನ ನಿಲುಗಡೆಗಾಗಿ ಸುಮಾರು 22 ಎಕರೆ ಪ್ರದೇಶಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ವಾಹನ ನಿಲುಗಡೆಗೆ ಯಾವುದೇ ಅಡಚಣೆಯಾಗದಂತೆ ಸ್ವಯಂಸೇವಕರ ತಂಡ ಕಾರ್ಯನಿರ್ವಹಿಸುತ್ತಿದೆ. ದೇವಸ್ಥಾನದಲ್ಲಿ ಸ್ವಚ್ಛತೆಗೆ ಗರಿಷ್ಟ ಆದ್ಯತೆ ನೀಡಲಾಗಿದ್ದು, ದ್ರವ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಅಳವಡಿಸಲಾಗಿದೆ. ಸುಮಾರು 50 ಸಾವಿರ ಲೀಟರ್ ಸಾಮರ್ಥ್ಯದ ದ್ರವ ತ್ಯಾಜ್ಯ ಘಟಕವನ್ನು ಸ್ಥಾಪಿಸಲಾಗಿದ್ದು, ಇಲ್ಲಿ ಕೈತೊಳೆದ ನೀರು, ಅಡುಗೆ ತಯಾರಿ ವಸತಿಗೃಹ, ಕಲ್ಯಾಣ ಮಂಟಪದ ತ್ಯಾಜ್ಯ ನೀರು, ಶೌಚಗೃಹಗಳ ತ್ಯಾಜ್ಯನೀರನ್ನು ಎಲ್ಲೂ ಹೊರಗೆ ಹರಿಯಲು ಬಿಡದೆ ಸಂಸ್ಕರಣೆ ಮಾಡಲಾಗುತ್ತದೆ.

ನಾನಾ ಭಾಗದ ಸ್ವಯಂಸೇವಕರ ತಂಡ

ತೆಂಗಿನಕಾಯಿ ಸುಲಿಯುವುದು, ಬಾಳೆಎಲೆಯನ್ನು ಸಜ್ಜುಗೊಳಿಸುವುದು, ಪಾಕಶಾಲೆಯಲ್ಲಿರುವ ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದರ ಸಹಿತ ಹಲವು ಕಾರ್ಯಗಳನ್ನು ನೆರವೇರಿಸಲು ಸ್ವಯಂಸೇವಕರ ತಂಡವೇ ಒಳಗೊಂಡಿದೆ. ಇದಕ್ಕಾಗಿಯೇ ಬಂದಿರುವ ನಾನಾ ಭಾಗಗಳ ಕಾರ್ಯಕರ್ತರು ಉತ್ಸಾಹದಿಂದಲೇ ತೊಡಗಿಸಿಕೊಂಡಿದ್ದಾರೆ.

ಸಾವಿರ ಸೀಮೆಗಳ ಅಲಂಕಾರ

ಪೊಳಲಿಗೆ ಹರಕೆಯ ರೂಪದಲ್ಲಿ ಬಂದಿರುವ ಪಟ್ಟೆ ಸೀರೆಗಳನ್ನು ನಗರಾಲಂಕಾರಗೊಳಿಸಲು ವಿಶೇಷ ಅನುಮತಿ ಪಡೆದುಕೊಂಡು ಸಾವಿರ ಸೀಮೆಗಳನ್ನು ಅದರಿಂದಲೇ ಅಲಂರಿಸಲಾಗಿದೆ. ಸೀರೆಯಿಂದಲೇ ನಿರ್ಮಿಸಿದ ದ್ವಾರಗಳು, ತಳಿರುತೋರಣಗಳಿಂದಾಗಿ ಬ್ರಹ್ಮಕಲಶೋತ್ಸವದ ಸೊಬಗನ್ನು ಇಮ್ಮಡಿಗೊಳಿಸಿದೆ. ಇಡೀ ಜಿಲ್ಲೆಯಾದ್ಯಂತ ಹಲವು ಪ್ರದೇಶಗಳಲ್ಲಿ ಸೀರೆಯಿಂದಲೇ ನಗರವನ್ನು ಅಲಂಕರಿಸಲಾಗಿದ್ದು, ಇದು ಪೊಳಲಿ ಬ್ರ್ಮಕಲಶೋತ್ಸವದ ವಿಶೇಷತೆಯಾಗಿದೆ.

ಜೊತೆಗೆ ಬ್ಯಾನರ್, ಬಂಟಿಂಗ್ಸ್‌ಗಳನ್ನು ಅಳವಡಿಸಲಾಗಿದ್ದು, ಬಂಟ್ವಾಳ- ಬಿ.ಸಿ.ರೋಡ್‌ನಿಂದ ಪೊಳಲಿ ದ್ವಾರ ಮೂಲಕ ದೇವಸ್ಥಾನದವರೆಗೆ ಹಾಗೂ ಗುರುಪುರದ್ವಾರದಿಂದ ಪೊಳಲಿಯವರೆಗೆ ರಸ್ತೆಯುದ್ದಕ್ಕೂ ವಿಶೇಷ ರೀತಿಯಲ್ಲಿ ಶೃಂಗರಿಸಲಾಗಿದೆ.

ಮೂಡುಬಿದಿರೆಯಿಂದ ಮಂಗಳೂರು, ಬಂಟ್ವಾಳ, ಬಿ.ಸಿ.ರೋಡ್ ಸೇರಿ ಹಲವು ಪ್ರದೇಶಗಳು ಸಂಪೂರ್ಣವಾಗಿ ಶೃಂಗಾರಗೊಂಡು ದೂರದೂರಿನಿಂದ ಬರುವ ಭಕ್ತರನ್ನು ಬರಮಾಡಿಕೊಳ್ಳುತ್ತಿದೆ.

Writer - ಅಬ್ದುಲ್ ರಹಿಮಾನ್ ತಲಪಾಡಿ

contributor

Editor - ಅಬ್ದುಲ್ ರಹಿಮಾನ್ ತಲಪಾಡಿ

contributor

Similar News