×
Ad

ಚುನಾವಣಾ ಆಯೋಗದ ಸುತ್ತೋಲೆಯಂತೆ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಿ: ಎಸ್‍ಪಿ ಲಕ್ಷ್ಮೀ ಪ್ರಸಾದ್

Update: 2019-03-12 18:48 IST

ಪುತ್ತೂರು: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ನಿರ್ವಹಿಸಬೇಕಾಗಿರುವ ಹೊಣೆಗಾರಿಕೆಯ ಬಗ್ಗೆ ಈಗಾಗಲೇ ಚುನಾವಣಾ ಆಯೋಗವು 3 ಸುತ್ತೋಲೆಗಳನ್ನು ಕಳುಹಿಸಿದ್ದು, ಇದನ್ನು ಎಲ್ಲಾ ಇನ್ಸ್‍ಪೆಕ್ಟರ್‍ಗಳು ಸಮಗ್ರವಾಗಿ ಅರಿತುಕೊಂಡು ಅದನ್ನು ತಮ್ಮ ಕೈಕೆಳಗಿನ ಅಧಿಕಾರಿ ಗಳಿಗೆ ವಿವರಿಸುವ ಕೆಲಸ ಮಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀ ಪ್ರಸಾದ್ ಸೂಚಿಸಿದರು.

ಅವರು ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಪುತ್ತೂರು ತಾಪಂ. ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಚುನಾವಣಾ ಆಯೋಗದ ಸೂಚನೆಯಂತೆ ಪೊಲೀಸ್ ಇಲಾಖೆ ತನ್ನ ಕರ್ತವ್ಯವನ್ನು ನಿರ್ವಹಿಸಲು ಸನ್ನದ್ಧವಾಗಿದ್ದು, ಯಾವುದೇ ಅಕ್ರಮ ಇನ್ನಿತರ ಕಾನೂನು ಬಾಹಿರ ಚಟುವಟಿಕೆ ಕಂಡು ಬಂದಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ನಿರ್ದಾಕ್ಷಿಣ್ಯವಾಗಿ ಕೈಗೊಳ್ಳಲಾಗುವುದು. ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಪೊಲೀಸರ ಜವಾಬ್ದಾರಿಯಾಗಿದೆ. ಮತದಾರರಿಗೆ ಹಣ, ಹೆಂಡ ಇನ್ನಿತರ ವಸ್ತುಗಳನ್ನು ಹಂಚದಂತೆ, ಜಾತಿ,ಧರ್ಮ, ಭಾಷೆಗಳನ್ನು ಮುಂದಿಟ್ಟು ಮತದಾರರ ದ್ರುವೀಕರಣ ನಡೆಸದಂತೆ ಎಚ್ಚರ ವಹಿಸಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಕೆಲಸ ಹಾಗೂ ಹೊರರಾಜ್ಯಗಳಿಂದ ಗಡಿಯ ಮೂಲಕ ಅಕ್ರಮ ಸಾಗಾಟ, ಅಕ್ರಮ ನುಸುಳುವಿಕೆ ಇತ್ಯಾದಿ ನಡೆಯದಂತೆ ನೋಡಿಕೊಳ್ಳಬೇಕಾದ, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವ ಹೊಣೆ ಪೊಲೀಸರ ಮೇಲಿದೆ ಎಂದರು. 

ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿಯವರು ಫ್ಲೈಯಿಂಗ್ ಸ್ಕ್ವಾಡ್, ವೀಡಿಯೋ ಸರ್ವೆಲೆನ್ಸ್ ತಂಡ, ಸ್ಟಾಟಿಕ್ ಸರ್ವೆಲೆನ್ಸ್ ತಂಡ (ಎಸ್‍ಎಸ್‍ಟಿ)ಗಳನ್ನು ರಚಿಸಿದ್ದಾರೆ. ಉಪ ವಿಭಾಗಾಧಿಕಾರಿವರು ಸಹಾಯಕ ಚುನಾವಣಾ ಅಧಿಕಾರಿಯಾಗಿ ಇವೆಲ್ಲವನ್ನೂ ಪರಿಶೀಲಿಸುತ್ತಿರುತ್ತಾರೆ. ಈ ತಂಡಗಳಲ್ಲಿ ಪೊಲೀಸ್ ಅಧಿಕಾರಿಗಳೂ ಇರುತ್ತಾರೆ, ಕಂದಾಯ ಇಲಾಖೆ  ನೇಮಿಸಿದ ಅಧಿಕಾರಿಗಳೂ ಇರುತ್ತಾರೆ. ಪೊಲೀಸ್ ಅಧಿಕಾರಿಗಳ ಜವಾಬ್ದಾರಿ ಏನೆಂಬುದನ್ನು ತಿಳಿದುಕೊಂಡು ಅದರಂತೆ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಎಸ್‍ಎಸ್‍ಟಿ ಮತ್ತು ಫ್ಲೈಯಿಂಗ್ ಸ್ಕ್ವಾಡ್‍ಗಳಲ್ಲಿ ತಲಾ ಮೂವರು ದಿನದ ಮೂರು ಪಾಳಿಗಳಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ ಅವರು ಈ ಎರಡು ತಂಡಗಳ ಕಾರ್ಯಚಟುವಟಿಕೆ ತಕ್ಷಣದಿಂದ ಜಾರಿಗೆ ಬರುವಂತೆ ಆರಂಭಿಸಲು ಸೂಚಿಸಿದರು. ತಂಡಗಳಿಗೆ ವಾಹನ ವ್ಯವಸ್ಥೆ ಮಾಡುವಂತೆ ಅವರು ಎ.ಸಿ.ಯವರಿಗೆ ತಿಳಿಸಿದರು.

ಯಾವುದೇ ಭಾಗದಲ್ಲಿ ಗಲಾಟೆ ಸಂಭವಿಸಿದರೆ ಅದನ್ನು ನಿಯಂತ್ರಿಸುವ ಕೆಲಸವನ್ನು ಪೊಲೀಸ್ ಅಧಿಕಾರಿಗಳೇ ಮಾಡುತ್ತಾರೆ. ಇತರ ಇಲಾಖೆಯ ಅಧಿಕಾರಿಗಳು ಮಾಡುವಂತಿಲ್ಲ. ಅದೇರೀತಿ ಹಣ ಮತ್ತಿತರ ಮೌಲ್ಯಯುತ ವಸ್ತುಗಳ ದಾಸ್ತಾನು, ವಿತರಣೆ ಪ್ರಕರಣ ನಡೆದಾಗ ಅಲ್ಲಿಗೆ ಫ್ಲೈಯಿಂಗ್ ಸ್ಕ್ವಾಡ್ ಭೇಟಿ ನೀಡಿದರೂ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾತ್ರ ಒಳ ಪ್ರವೇಶಿಸಿ ವಶಪಡಿಸಿಕೊಳ್ಳುತ್ತಾರೆ. ಎಲ್ಲ ಇಲಾಖೆಗಳು ಪರಸ್ಪರ ಸಮನ್ವ ಯದಿಂದ ಕೆಲಸ ಮಾಡುತ್ತವೆ ಎಂದು ತಿಳಿಸಿದರು. 

ಚುನಾವಣೆ ಘೋಷಣೆಯಾಗಿರುವ ಕಾರಣ ಪ್ರತಿಯೊಬ್ಬ ನಾಗರಿಕರೂ ತಮ್ಮಲ್ಲಿ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ನಗದು ಸಾಗಿಸುವ ಸಂದರ್ಭದಲ್ಲಿ ಈ ಹಣದ ಬಗ್ಗೆ ಸೂಕ್ತ ದಾಖಲೆ ಇಟ್ಟುಕೊಳ್ಳಬೇಕು. ದಾಖಲೆ ಇಲ್ಲದಿದ್ದರೆ ವಶಪಡಿಸಿಕೊಳ್ಳಲಾಗುತ್ತದೆ. ಅದೇ ರೀತಿ  ಚುನಾವಣಾ ಸಾಮಗ್ರಿಗಳನ್ನು ದಾಖಲೆ ಇಲ್ಲದೆ ಕೊಂಡೊಯ್ಯುವಂತಿಲ್ಲ ಎಂದು ಎಚ್ಚರಿಸಿದರು. 

ಪುತ್ತೂರು ಸಹಾಯಕ ಆಯುಕ್ತರಾದ ಎಚ್.ಕೆ. ಕೃಷ್ಣಮೂರ್ತಿ ಮಾತನಾಡಿ ಚುನಾವಣೆಯ ಸಂದರ್ಭದಲ್ಲಿ ಪ್ರಚೋದನೆ, ಪ್ರಲೋಭನೆ ಇನ್ನಿತರ ಘಟನೆಗಳು ನಡೆದಲ್ಲಿ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ  ಫ್ಲೈಯಿಂಗ್ ಸ್ಕ್ವಾಡ್‍ನವರು ಸ್ಥಳಕ್ಕೆ ತೆರಳಿದಾಗ ಅಲ್ಲಿ ಎಫ್‍ಐಆರ್ ಮಾಡುವ ಸಂದರ್ಭ ಕಂಡು ಬಂದಲ್ಲಿ ಗೊಂದಲವಾಗದಂತೆ ಪೊಲೀಸ್ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಬೇಕು. ವಿಳಂಬ ಮಾಡದೆ ಎಫ್‍ಐಆರ್ ದಾಖಲು ಮಾಡುವ ಕೆಲಸವಾಗಬೇಕು. ಈ ಬಾರಿ ಸಿ ವಿಜಿಲ್ ಆ್ಯಪ್ ಇರುವ ಕಾರಣ ನಾಗರಿಕರೇ ಎಚ್ಚೆತ್ತುಕೊಂಡು ದೂರು ನೀಡುತ್ತಾರೆ. ಆಗ ಸಾಕಷ್ಟು ಜಾಗರೂಕತೆಯಿಂದ ಕಾಯೋನ್ಮುಖರಾಗಬೇಕು. ಸ್ವಲ್ಪ ನಿರ್ಲಕ್ಷ್ಯವಾದರೂ ಪರಿಸ್ಥಿತಿ ಬಿಗಡಾಯಿಸಬಹುದು ಎಂದು ಎಚ್ಚರಿಸಿದರು. ಪುತ್ತೂರು ಸುತ್ತಮುತ್ತ ಗಾಳಿಮುಖ, ಆರ್ಲಪದವು ಮತ್ತು ಸಾರಡ್ಕದಲ್ಲಿ ಚೆಕ್‍ಪೋಸ್ಟ್‍ಗಳಿವೆ. ಸಂದರ್ಭ ನೋಡಿಕೊಂಡು ಚೆಕ್‍ಪೋಸ್ಟ್ ಸಂಖ್ಯೆ ಹೆಚ್ಚಿಸುವ, ಸ್ಥಳಾಂತರಿಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮ್ಟೆ ಮಾತನಾಡಿದರು. ಬಂಟ್ವಾಳ ಎಎಸ್‍ಪಿ ಸೈದುಲ್ಲಾ ಅದಾವತ್, ಡಿಸಿಆರ್‍ಬಿಯ ಡಿವೈಎಸ್‍ಪಿ ನಟರಾಜ್, ಉಪ್ಪಿನಂಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಪ್ರದೀಪ್ ಗುಂಟಿ, ಪ್ರೊಬೆಷನರಿ ಡಿವೈಎಸ್‍ಪಿ ಶಿವಾನಂದ ಮದರಗಂಡಿ, ಪುತ್ತೂರು ಸಹಾಯಕ ಆಯುಕ್ತರಾದ ಕೃಷ್ಣಮೂರ್ತಿ ಎಚ್.ಕೆ., ತಹಸೀಲ್ದಾರ್ ಡಾ.ಪ್ರದೀಪ್ ಕುಮಾರ್ ವೇದಿಕೆಯಲ್ಲಿದ್ದರು.

ಸಭೆಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು, ಇನ್‍ಸ್ಪೆಕ್ಟರ್ ಗಳು, ಪಿಎಸ್‍ಐಗಳು, ಎಎಸ್‍ಐ, ಹೆಡ್‍ಕಾನ್‍ಸ್ಟೇಬಲ್‍ಗಳು ಸೇರಿದಂತೆ ಚುನಾವಣಾ ಕರ್ತವ್ಯಕ್ಕೆಂದು ನೇಮಿಸಲಾದ ಇತರ ತಂಡಗಳ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News