ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬುವವರ ವಿರುದ್ಧ ದೂರು

Update: 2019-03-20 14:52 GMT

ಮಂಗಳೂರು, ಮಾ.20: ಲೋಕಸಭಾ ಚುನಾವಣೆಯ ಸಂದರ್ಭ ದ್ವೇಷ ಸಾಧಿಸಲು ಅಥವಾ ರಾಜಕೀಯ ಲಾಭಗಳನ್ನು ಪಡೆಯುವ ಉದ್ದೇಶಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ನನ್ನ ಹೆಸರಿನಲ್ಲಿ ಸುಳ್ಳು ಸುದ್ದಿಗಳನ್ನು ಪಸರಿಸುತ್ತಿದ್ದಾರೆ ಎಂದು ಆರೋಪಿಸಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ.

ತನ್ನನ್ನು ಎಲ್ಲಾ ರಾಜಕೀಯ ಪಕ್ಷದ ಅಭ್ಯರ್ಥಿಗಳೂ ಸಂಪರ್ಕಿಸಿದ್ದಾರೆ. ಆದರೆ ಚುನಾವಣೆಯಲ್ಲಿ ತಾನು ತಟಸ್ಥ ಧೋರಣೆಯನ್ನು ಅನುಸರಿಸುವುದಾಗಿ ಸ್ಪಷ್ಟಪಡಿಸಿದ್ದೇನೆ. ಸಂಘವು ಯಾವುದೇ ವ್ಯಕ್ತಿ, ಪಕ್ಷ ಅಥವಾ ಜಾತಿಯನ್ನು ಬೆಂಬಲಿಸಿ ಇಂದಿನವರೆಗೆ ಯಾವುದೇ ಹೇಳಿಕೆಯನ್ನು ಕೊಟ್ಟಿಲ್ಲ. ಲೋಕಸಭಾ ಚುನಾವಣೆಯ ಸಂದರ್ಭ ರಾಜಕೀಯ ಲಾಭ ಪಡೆಯಲೋ ಅಥವಾ ಇತರ ಯಾವುದೋ ದುರುದ್ದೇಶದಿಂದ ನನ್ನ ಹೆಸರನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಪಸರಿಸುತ್ತಿದ್ದಾರೆ. ನಾನು 110 ವರ್ಷಗಳ ಇತಿಹಾಸರುವ ಜಗತ್ತಿನ ಎಲ್ಲಾ ಬಂಟರ ಸಂಘಗಳಿಗೆ ಮಾತೃ ಸಂಘವಾಗಿರುವ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷನಾಗಿರುತ್ತೇನೆ. ಬಂಟ ಸಮಾಜ ಬಾಂಧವರು ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಇದ್ದಾರೆ. ಸಂಘವು ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಮತ್ತು ರಾಜಕೀಯ ವ್ಯಕ್ತಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು, ರಾಜಕೀಯವಾಗಿ ತಟಸ್ಥವಾಗಿರುವುದು ಸಂಘದ ನಿರ್ಧಿಷ್ಟವಾದ ಧೋರಣೆಯಾಗಿದೆ. ಸಂಘವು ಯಾವುದೇ ವ್ಯಕ್ತಿಯನ್ನು ಪಕ್ಷವನ್ನು ಅಥವಾ ಜಾತಿಯನ್ನು ಬೆಂಬಲಿಸಿ ಈವರೆಗೆ ಯಾವುದೇ ಹೇಳಿಕೆ ಕೊಟ್ಟಿರುವುದಿಲ್ಲ. ಸಾಮಾಜಿಕ ಜಾಲತಾಣದ ಸಂದೇಶದಲ್ಲಿರುವಂತೆ ವಿಶ್ವ ಬಂಟರ ಹಾಗೂ ನಾಡವರ ಸಂಘ ಎಂಬುದು ಅಸ್ತಿತ್ವದಲ್ಲಿಯೇ ಇಲ್ಲ. ನಾನು 8 ತಿಂಗಳ ಮೊದಲೇ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುತ್ತೇನೆ. ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ದುಷ್ಕರ್ಮಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಮಾಡುತ್ತಿದ್ದು, ಈ ಸಂದೇಶಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮಾಲಾಡಿ ಅಜಿತ್ ಕುಮಾರ್ ರೈ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News