ಶಿಕ್ಷಣದ ಜೊತೆಗೆ ಸಂಸ್ಕೃತಿ ಅವಶ್ಯ: ವಸಂತ್ ಶೆಟ್ಟಿ

Update: 2019-03-20 15:06 GMT

ಮೂಡುಬಿದಿರೆ: ಜಗತ್ತಿನಲ್ಲಿ ಬದುಕಲು ಕೇವಲ ಶಿಕ್ಷಣ ಸಾಕಾಗುತ್ತದೆ, ಆದರೆ ಬಾಳಲು ಶಿಕ್ಷಣದ ಜೊತೆಗೆ ಸಂಸ್ಕೃತಿ ಅವಶ್ಯ ಎಂದು  ಆಳ್ವಾಸ್ ಕಾಲೇಜಿನ ನುಡಿಸಿರಿ ವೇದಿಕೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ವಸಂತ್ ಶೆಟ್ಟಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಬದುಕು ಎನ್ನುವುದು ಅತ್ಯಮೂಲ್ಯ. ಅದರ ಹಾದಿಯಲ್ಲಿ ಸಾಗುವಾಗ ಪ್ರಮಾದಗಳು ಸಹಜ, ಅವುಗಳನ್ನು ತಿದ್ದಿ ನಡೆಯುವುದೇ ಜೀವನ. ಜೀವನದಲ್ಲಿ ಸಾಧನೆ ಅತ್ಯಗತ್ಯ. ಪೋಷಕರ ಹಾಗೂ ಶಿಕ್ಷಕರ ಆಶಿರ್ವಾದವಿಲ್ಲದೇ ಸಾಧನೆ ಮಾಡಲು ಆಸಾಧ್ಯ.  ವಿಜ್ಞಾನಕ್ಕೆ ನಿಲುಕದ್ದು, ಪ್ರಜ್ಞಾನಕ್ಕೆ ಲಭಿಸುತ್ತದೆ. ಪ್ರಕೃತಿಯಲ್ಲಿನ ಸಕಾರಾತ್ಮಕ ಕಂಪನಗಳು ಪ್ರತಿಯೊಬ್ಬರ ಜೀವನವನ್ನು ಬದಲಾಯಿಸುತ್ತವೆ. ಪ್ರತಿಯೊಬ್ಬರ ಜೀವನದಲ್ಲಿಯೂ ಅಪ್ಪ, ಅಮ್ಮ ಹಾಗೂ ಶಿಕ್ಷಕರು ಪ್ರಮುಖ ಪಾತ್ರವಹಿಸುತ್ತಾರೆ. ಅವರ ಮಾರ್ಗದರ್ಶನದ ಮೇರೆಗೆ ನಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ ಸಾಧನೆ ಗೈಯ್ಯುವುದು ಒಳಿತು. ವಿದ್ಯಾರ್ಥಿಗಳು ಸೂಕ್ತ ರೀತಿಯಲ್ಲಿ ಬದುಕು ಕಟ್ಟಿಕೊಳ್ಳುವುದು ಅಗತ್ಯ, ಸಕಾರಾತ್ಮಕ ಚಿಂತನೆಗಳನ್ನು ನಡೆಸಿ, ತಮ್ಮ ಆಸಕ್ತಿದಾಯಕ ಕ್ಷೇತ್ರದಲ್ಲಿ ಮುನ್ನಡೆಯುವುದು ಉತ್ತಮ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಮ್ ಮೋಹನ್ ಅಳ್ವ ಮಾತನಾಡಿ, ಪ್ರತಿಯೊಬ್ಬನ ಜೀವನದಲ್ಲಿ ಪದವಿಗಳು ಮುಖ್ಯ. ಪದವಿಗಳು ದೊರೆತಾಗಲೇ ಸಮಾಜದಲ್ಲಿ ಉತ್ತಮ ನಾಗರೀಕರಾಗಲು ಹಾಗೂ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ. ಸಾಮಾನ್ಯ ಪದವಿಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಸಾಧನೆ ಮಾಡಲು ಅಸಾಧ್ಯ. ಉದ್ಯೋಗಗಳನ್ನು ಪಡೆಯಲು ಪಠ್ಯ ಶಿಕ್ಷಣದ ಜೊತೆಗೆ ಕೌಶಲ್ಯದ ಅಗತ್ಯವಿದೆ. ಯಾವುದೇ ಉದ್ಯೋಗದ ಕುರಿತು ಸ್ಪಷ್ಟ ಪರಿಕಲ್ಪನೆ ಹೊಂದಿರಬೇಕು. ಯಾವುದೇ ಸಾಧನೆ ಮಾಡಲು ಹೃದಯವಂತಿಕೆಯ ಅಗತ್ಯವಿದೆ. ನಮ್ಮಲಿರುವ ಸಾಮಥ್ರ್ಯವನ್ನು ಸರಿಯಾದ ಪಥದಲ್ಲಿ ಕೊಂಡೊಯ್ಯುವುದು ಅಗತ್ಯ. ಕ್ರೀಡಾ ಮನೋಭಾವ ಇದ್ದರೆ ಮಾತ್ರ ಜೀವನದಲ್ಲಿ ಸಫಲತೆಯನ್ನು ಕಾಣಲು ಸಾಧ್ಯ. ನಾವು ಮಾಡುವ ಸಾಧನೆಗಳು ಬದುಕನ್ನು ಪಲಪ್ರದವಾಗಿರಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಕಾರ್ಯಕ್ರಮ ಸಂಯೋಜಕ ವಾಣಿಜ್ಯ ವಿಭಾಗದ ಡೀನ್ ಪ್ರೋ ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.  ಪತ್ರಿಕೋದ್ಯಮ ವಿದ್ಯಾರ್ಥಿನಿ ಮರಿಯಮ್ಮ ಸ್ವಾಗತಿಸಿ, ಆದರ್ಶ್ ವಂದಿಸಿ, ರಚನಾ ಕಾರ್ಯಕ್ರಮವನ್ನು ನಿರೂಪಿಸಿದರು.

ಸಮಾರಂಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ 49 ವಿದ್ಯಾರ್ಥಿಗಳಿಗೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ 27 ವಿದ್ಯಾರ್ಥಿಗಳಿಗೆ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ 35 ವಿದ್ಯಾರ್ಥಿಗಳಿಗೆ,  ಹಾಗೂ ಉತ್ತಮ ಗ್ರಂಥಾಲಯ ಬಳಕೆಗಾರ್ತಿಗೆ  ಪ್ರಶಸ್ತಿ ಪತ್ರ, ಪ್ರೋತ್ಸಾಹ ಧನ ಮತ್ತು ಸ್ಮರಣಿಕೆಯನ್ನು ನೀಡಿ ಪುರಸ್ಕರಿಸಲಾಯಿತು. ಅಂತೆಯೆ 8 ಜನ ಉಪನ್ಯಾಸಕರುಗಳನ್ನು  ವಿವಿಧ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು. 

ವಾರ್ಷಿಕೋತ್ಸವದ ಪ್ರಯುಕ್ತ ಜನಪದ ನೃತ್ಯ, ಕೂರ್ಗ್ ನೃತ್ಯ, ತಯ್ಯಮ್ ನೃತ್ಯ, ದೇಶ ಭಕ್ತಿಗೀತೆ, ಬಾಂಗ್ಡಾ ನೃತ್ಯ, ಚಂಡೆ, ತುಳು ಜನಪದ ನೃತ್ಯ, ಮಿಮಿಕ್ರಿ, ಮ್ಯಾಜಿಕ್ ಶೋ, ಸಮೂಹ ಗೀತೆ ಹಾಗೂ ಯಕ್ಷಗಾನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News