ಕಡಬ: ಅಪಘಾತದಲ್ಲಿ ಮೃತಪಟ್ಟ ಯುವಕನ ಅಂತ್ಯಸಂಸ್ಕಾರಕ್ಕೆ ನೆರವಾದ ಗೆಳೆಯರು

Update: 2019-03-20 17:12 GMT

ಕಡಬ, ಮಾ.20. ಕೆಎಸ್ಸಾರ್ಟಿಸಿ ಬಸ್ಸು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟ ವ್ಯಕ್ತಿಯನ್ನು ಮುಸ್ಲಿಂ ಯುವಕರು ಸೇರಿಕೊಂಡು ಸಾರ್ವಜನಿಕರ ನೆರವಿನೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಿದ ಘಟನೆ ಮಂಗಳವಾರ ಕಡಬದಲ್ಲಿ ನಡೆದಿದೆ.

ಮಾ.18ರಂದು ಸುಬ್ರಹ್ಮಣ್ಯದಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಕಡಬ ಸಮೀಪದ ನೀರಾಜೆ ಎಂಬಲ್ಲಿ ರಸ್ತೆ ಬದಿ ನಿಂತಿದ್ದ ಯುವಕನಿಗೆ ಢಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡಿದ್ದ ಕಡಬ ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ದಿ. ಶ್ರೀನಿವಾಸ ಎಂಬವರ ಪುತ್ರ ಮಣಿಕಂಠ (35) ಪುತ್ತೂರು ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿದ್ದರು. ಮೃತ ಮಣಿಕಂಠ ತನ್ನ ಅಕ್ಕನ ಮನೆಯ ಪಕ್ಕದಲ್ಲೇ ಸಣ್ಣ ಗುಡಿಸಲಿನಲ್ಲಿ ವಾಸವಾಗಿದ್ದು, ಅಪಘಾತ ನಡೆದ ಸಮಯದಲ್ಲಿ ಆತನ ಅಕ್ಕ ಕೇರಳದಲ್ಲಿದ್ದರು. ಮೃತದೇಹವನ್ನು ಆತನ ಮುಸ್ಲಿಂ ಗೆಳೆಯರೇ ಆಸ್ಪತ್ರೆಯಿಂದ ಮನೆಗೆ ತೆಗೆದುಕೊಂಡು ಹೋಗಿದ್ದರು.

ಮೃತದೇಹದ ಅಂತ್ಯಸಂಸ್ಕಾರವನ್ನು ಯುವಕರು ಸ್ಥಳೀಯರ ಸಹಕಾರದೊಂದಿಗೆ ನೆರವೇರಿಸಿದ್ದು, ಮಂಗಳವಾರ ಕಡಬದ ಸಾರ್ವಜನಿಕ ರುದ್ರ ಭೂಮಿಯಲ್ಲಿ ಹಿಂದೂ ಸಂಪ್ರದಾಯದಂತೆ ಮೃತ ಮಣಿಕಂಠನ ಅಂತ್ಯ ಸಂಸ್ಕಾರವನ್ನು ವಿಧಿವತ್ತಾಗಿ ನೆರವೇರಿಸಲಾಯಿತು.

ಈ ಸಂದರ್ಭ ಅಬ್ಬಾಸ್ ಮರ್ಧಾಳ, ಹೈದರ್ ಹಿಂದುಸ್ಥಾನ್, ರಶೀದ್ ನಿಂತಿಕಲ್ಲು, ರಿಕ್ಷಾ ಚಾಲಕ ರಫೀಕ್, ಶಬೀರ್ ಪನ್ಯ ಸೇರಿದಂತೆ ಹಲವರು ಕೈ ಜೋಡಿಸಿದ್ದರು. ಸ್ಥಳೀಯರಾದ ಸಂಜೀವ ಶೆಟ್ಟಿ ಅತ್ಯಡ್ಕ, ನಾರಾಯಣ ಶೆಟ್ಟಿ ಅತ್ಯಡ್ಕ, ಸುರೇಶ್ ನೈಲ, ರಾಜು ನೆಕ್ಕಿತ್ತಡ್ಕ ಹಾಗೂ ಮೃತ ವ್ಯಕ್ತಿಯ ಅಣ್ಣ ಮತ್ತು ಬಾವ ಸಹಕಾರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News