ಉಡುಪಿ: ರೇಡಿಯೋದಲ್ಲೂ ಮಾದರ್ನಿಸಲಿದೆ ಮತದಾನ ಸಂದೇಶ

Update: 2019-03-21 15:38 GMT

ಉಡುಪಿ, ಮಾ.21: ಗ್ರಾಮೀಣ ಪ್ರದೇಶದಲ್ಲಿ ಈಗಲೂ ಅತೀ ಹೆಚ್ಚು ಕೇಳುಗರನ್ನು ಹೊಂದಿರುವ ರೇಡಿಯೋ, ಯಾವುದೇ ಮೊಬೈಲ್ ನೆಟ್‌ವರ್ಕ್ ಮತ್ತು ಕೇಬಲ್‌ವಾಹಿನಿಗಳು ತಲುಪದ ಹಾಗೂ ರಸ್ತೆ ಸಂಪರ್ಕ ಇಲ್ಲದ ಕಾಡು ಮತ್ತು ಗುಡ್ಡಗಾಡು ಪ್ರೇಶದಲ್ಲಿ ಸಹ ಪ್ರಸಾರವಾಗುತ್ತಿದೆ.

ಆಧುನಿಕ ತಂತ್ರಜ್ಞಾನದ ನಡುವೆಯೂ ಈಗಲೂ ರೇಡಿಯೋ ಕೇಳುಗರಾಗಿ ಉಳಿದಿರುವವರಿಗಾಗಿ ಉಡುಪಿ ಜಿಲ್ಲಾ ಸ್ವೀಪ್ ಸಮಿತಿ, ವಿನೂತನ ರೀತಿಯ ಜಿಂಗಲ್ಸ್‌ಗಳ ಮೂಲಕ ಮತದಾನ ಜಾಗೃತಿ ಮೂಡಿಸಲು 4 ರೀತಿಯ ಜಿಂಗಲ್ಸ್ ಗಳನ್ನು ಸಿದ್ಧಪಡಿಸಿದೆ.

ಮೊದಲ ಜಿಂಗಲ್ಸ್‌ನ್ನು ತುಳು ಭಾಷೆಯ ಯುವ ಜನರನ್ನು ಉದ್ದೇಶ ವಾಗಿಟ್ಟುಕೊಂಡು ಸಿದ್ದಪಡಿಸಿದ್ದು, ಇದರಲ್ಲಿ ಮತದಾನದ ದಿನ ಇರುವ ರಜೆಯಲ್ಲಿ ಪ್ರವಾಸಕ್ಕೆ ಹೊರಡುವ ಯುವ ಜನತೆಗೆ ಮತದಾನ ಜಾಗೃತಿಯ ಸಂದೇಶ ನೀಡಲಾಗಿದೆ.

ಎರಡನೇ ಜಿಂಗಲ್ಸ್‌ನ್ನು ಕುಂದಾಪ್ರ ಕನ್ನಡ ಭಾಷೆಯಲ್ಲಿ ಸಿದ್ದಪಡಿಸಲಾಗಿದೆ. ಈ ಜಿಂಗಲ್ಸ್‌ನಲ್ಲಿ ಯುವ ಮತದಾರರೊಬ್ಬರೂ ಪ್ರಥಮ ಬಾರಿ ತಾವು ಮತದಾನ ಮಾಡುವುದರ ಜೊತೆಗೆ ಮತದಾನ ಮಾಡದೆ ಮನೆಯಲ್ಲಿ ಕುಳಿತ ಕನಿಷ್ಠ 2 ಜನರನ್ನಾದರೂ ಮತಕೇಂದ್ರಕ್ಕೆ ಕರೆದೊಯ್ದು ಮತದಾನ ಮಾಡಿಸಿ, ತನ್ನ ಮೊದಲ ಮತದಾನವನ್ನು ಸ್ಮರಣೀಯವನ್ನಾಗಿ ಮಾಡಿಕೊಳ್ಳುತ್ತೇನೆ, ಅ ಮೂಲಕ ದೇಶಕ್ಕೆ ಕೊಡುಗೆ ನೀಡುತ್ತೇನೆ ಎಂಬ ಸಂದೇಶ ಇದೆ.

3ನೇ ಜಿಂಗಲ್ಸ್‌ನಲ್ಲಿ ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ ವಾಗಿದ್ದು, ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ ಎಂಬ ಸಂದೇಶ ಇದೆ. 4ನೇ ಜಿಂಗಲ್ಸ್‌ನಲ್ಲಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ನೀಡಿರುವ ಮತದಾನ ಕುರಿತ ಈ ಸಂದೇಶ ಯಾವುದೇ ಸಮಾರಂಭಗಳಿದ್ದರೂ ಮತದಾನ ಮೊದಲು ಎನ್ನುವ ಸಂದೇಶವನ್ನು ನೀಡಲಿದೆ. ಎ.18ರಂದು ನಡೆಯುವ ನಮ್ಮ ಮದುವೆಗೆ ನೀವು ತಪ್ಪದೇ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವುದೇ ನಮಗೆ ನೀಡುವ ದೊಡ್ಡ ಉಡುಗೊರೆಯಾಗಿದೆ ಎಂಬ ಕರೆ ಇದೆ.

ಎಲ್ಲಾ ಜಿಂಗಲ್ಸ್‌ಗಳಲ್ಲಿ ಎ.18ರಂದು ಉಡುಪಿ, ಕುಂದಾಪುರ, ಕಾಪು, ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತ್ತು ಎ.23ರಂದು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸಿ ಎಂಬ ಸಂದೇಶ ಇದೆ. ಈ ಮೂಲಕ ಉಡುಪಿ ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ನಡೆಯುವ ಚುನಾವಣೆಯಲ್ಲಿ ಎಲ್ಲಾ ಮತದಾರನ್ನೂ ತಲುಪಲು ಸ್ವೀಪ್ ಸಮಿತಿ ಜಿಂಗಲ್ಸ್ ತಯಾರಿಸಿದೆ.

ಈಗಾಗಲೇ ಸಾಮಾಜಿಕ ಜಾಲ ತಾಣದಲ್ಲಿ ಈ ಜಿಂಗಲ್ಸ್ ಹರಿದಾಡುತ್ತಿದ್ದು, ಆಕಾಶವಾಣಿಯಲ್ಲಿ ಪ್ರತಿದಿನ ನಿಗದಿತ ಸಮಯದಲ್ಲಿ ಕೇಳುಗರನ್ನು ತಲುಪಲಿದೆ.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹಾಗೂ ಜಿಪಂ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಸಿಂಧೂ ಬಿ.ರೂಪೇಶ್ ಅವರ ನಿರ್ದೇಶನದಂತೆ, ಆಕಾಶವಾಣಿ ಮಾತ್ರವಲ್ಲದೇ ಯುವಜನತೆಯನ್ನು ತಲುಪುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಾದ ವಾಟ್ಯಾಪ್, ಯೂಟ್ಯೂಬ್, ಫೇಸ್ ಬುಕ್, ಟ್ವಿಟರ್‌ನಲ್ಲಿ ಸಹ ಉಡುಪಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎನ್ನುತ್ತಾರೆ ಉಡುಪಿ ಜಿಲ್ಲಾ ಸ್ವೀಪ್ ಸಮಿತಿ ಕಾರ್ಯಕ್ರಮ ಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಜಿಪಂ ಸಾಯಕ ನಿರ್ದೇಶಕ ಜೇಮ್ಸ್ ಡಿಸಿಲ್ವಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News