ಎರ್ಲಪಾಡಿ ಕಲ್ಲುಕೋರೆಗೆ ದಾಳಿ: ಇಬ್ಬರ ಬಂಧನ; ಅಕ್ರಮ ಸ್ಪೋಟಕಗಳು, ಲಾರಿ, ಹಿಟಾಚಿಗಳು ವಶ

Update: 2019-03-21 17:19 GMT

ಕಾರ್ಕಳ, ಮಾ. 21: ಎರ್ಲಪಾಡಿ ಗ್ರಾಮದ ಕಲ್ಲು ಕೋರೆಗೆ ಮಾ. 20ರಂದು ಸಂಜೆ ವೇಳೆ ದಾಳಿ ನಡೆಸಿದ ಕಾರ್ಕಳ ಎಎಸ್ಪಿ ಕೃಷ್ಣಕಾಂತ್ ನೇತೃತ್ವದ ಪೊಲೀಸ್ ತಂಡ ಇಬ್ಬರನ್ನು ಬಂಧಿಸಿ, ಅಕ್ರಮವಾಗಿ ದಾಸ್ತಾನು ಇರಿಸಿದ್ದ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಂಡಿದೆ.

ಬಂಧಿತರನ್ನು ಕೇರಳ ಮಲಪುರಂ ಜಿಲ್ಲೆಯ ಬೈಜು (36) ಹಾಗೂ ಪುತ್ತೂರು ಉಪ್ಪಿನಂಗಡಿಯ ನವಾಝ್ (25) ಎಂದು ಗುರುತಿಸಲಾಗಿದೆ. ರಾಮಕೃಷ್ಣ ಶೆಟ್ಟಿ ಎಂಬವರಿಗೆ ಸೇರಿದ ಶ್ರೀ ಮಹಾಗಣಪತಿ ಸ್ಟೋನ್ ಕ್ರಷರ್ ಕಲ್ಲು ಕೋರೆಗೆ ದಾಳಿ ನಡೆಸಿದ ಪೊಲೀಸರು, ಅಕ್ರಮ ಸ್ಪೋಟಕ ವಸ್ತುಗಳಾದ 106 ಜಿಲೆಟಿನ್ ಕಡ್ಡಿಗಳು, 37 ಎಕ್ಸ್‌ಪೋಸಿವ್ ಡಿಟೋನೇಟರ್ ಮತ್ತು ಸ್ಥಳದಲ್ಲಿದ್ದ ಎಂಟು ಲಾರಿಗಳನ್ನು, ಎರಡು ಕಂಪ್ರೇಶರ್, ಎರಡು ಹಿಟಾಚಿ, ಐದು ಗ್ಯಾಸ್ ಸಿಲಿಂಡರ್, ಆರು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಉಳಿದ ಆರೋಪಿಗಳಾದ ಮಾಲಕ ರಾಮಕೃಷ್ಣ ಶೆಟ್ಟಿ, ಸುರೇಶ್, ಪಕ್ರೇಶ್, ಜುನೈದ್ ಸಾಲ್ಮರ, ಹಪೀಜ್ ಕೇರಳ ಎಂಬವರು ತಲೆ ಮರೆಸಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News