ಕಟ್ಟಡದ ಬೀಗ ತೆಗೆಯುವುದಕ್ಕೆ ಆಕ್ಷೇಪ: ವ್ಯಕ್ತಿಗೆ ಹಲ್ಲೆ, ಕೊಲೆ ಬೆದರಿಕೆಯ ಆರೋಪ

Update: 2019-03-21 17:45 GMT

ಕಡಬ, ಮಾ.21. ನ್ಯಾಯಾಲಯದಲ್ಲಿ ದಾವೆ ಇರುವ ಕಟ್ಟಡವೊಂದರ ಬೀಗ ತೆಗೆಯುವುದನ್ನು ಆಕ್ಷೇಪಿಸಿದುದಕ್ಕೆ ಹಲ್ಲೆ ನಡೆಸಿ ಜಾತಿ ನಿಂದನೆಗೈದು ಕೊಲೆ ಬೆದರಿಕೆ ಒಡ್ಡಿದ್ದಾರೆನ್ನಲಾದ ಘಟನೆ ಕಡಬದ ಕಳಾರದಲ್ಲಿ ಗುರುವಾರ ನಡೆದಿದೆ.

ಕಳಾರ ಕಸಬಾ ನಿವಾಸಿ ಬೀತ್ರು ಎಂಬವರು ಈ ಬಗ್ಗೆ ಕಡಬ ಠಾಣೆಗೆ ದೂರು ನೀಡಿದ್ದು, ನಮ್ಮ ಸ್ವಾದೀನದ ಜಾಗದಲ್ಲಿರುವ ಕಟ್ಟಡವೊಂದರ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ದಾವೆಯಿದ್ದು, ಗುರುವಾರ ಸ್ಥಳೀಯ ನಿವಾಸಿ ಸೈಯದ್ ಹುಸೈನ್ ಹಾಗೂ ಆತನ ಪುತ್ರ ಇಕ್ಬಾಲ್ ಎಂಬವರು ಕಟ್ಟಡಕ್ಕೆ ಹಾಕಿದ್ದ ಬೀಗವನ್ನು ತೆರೆಯುತ್ತಿದ್ದಾಗ ನನ್ನ ಭಾವನ ಮಗಳು ರತ್ನಾವತಿ ಆಕ್ಷೇಪಿಸಿದ್ದು, ಈ ವೇಳೆ ಇಕ್ಬಾಲ್ ರತ್ನಾವತಿಯನ್ನು ದೂಡಿ, ಜಾತಿ ನಿಂದನೆಗೈದು ಕೊಲೆ ಬೆದರಿಕೆ ಒಡ್ಡಿದ್ದಾನೆ. ತಡೆಯಲು ಹೋದ ನನ್ನ ಕುತ್ತಿಗೆ ಹಿಡಿದು ದೂಡಿ ಹಾಕಿದ್ದು, ಗಾಯಗೊಂಡಿರುವ ನಾವು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಆರೋಪಿಗಳ ವಿರುದ್ಧ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

ಪ್ರತಿದೂರು ದಾಖಲು: ಈ ಬಗ್ಗೆ ಸಯ್ಯದ್ ಹುಸೈನ್ ಕಡಬ ಠಾಣೆಗೆ ಪ್ರತಿದೂರು ನೀಡಿದ್ದು, ಈ ಹಿಂದೆ ನನ್ನ ವಶದಲ್ಲಿದ್ದ ಕಟ್ಟಡವನ್ನು ಬೀತ್ರು ಎಂಬವರು ತಮ್ಮದೆಂದು ಹೆಳುತ್ತಾ ಬಂದಿದ್ದು, ಈ ವಿಚಾರ ಮಾನ್ಯ ನ್ಯಾಯಾಲಯದಲ್ಲಿ ದಾವೆಯಲ್ಲಿದೆ. ನಾನು ಗುರುವಾರ ಕಟ್ಟಡದ ಬೀಗ ತೆರೆಯುತ್ತಿದ್ದಾಗ ನನ್ನ ಮೇಲೆ ಪಿಜಿನ, ರಾಘವ, ಶೀನಪ್ಪ, ಮಾಣಿಗ, ರತ್ನಾವತಿ, ಬೀತ್ರು, ಕುಂಞ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ. ಗಾಯಗೊಂಡ ಸಯ್ಯದ್ ಹುಸೈನ್ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News