ಯಕ್ಷಧ್ರುವ ಪಟ್ಲ ಫೌಂಡೇಶನ್; ಪುಂಜಾಲಕಟ್ಟೆ ವಲಯ ಎ.13ರಂದು ವಾರ್ಷಿಕೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

Update: 2019-03-23 13:14 GMT

ಬಂಟ್ವಾಳ, ಮಾ. 23: ಯಕ್ಷಧ್ರುವ ಪಟ್ಲ  ಫೌಂಡೇಶನ್ ಟ್ರಸ್ಟ್ ಪುಂಜಾಲಕಟ್ಟೆ ವಲಯ ಸಮಿತಿಯ ಪ್ರಥಮ ವಾರ್ಷಿಕೋತ್ಸವ ಎ.13ರಂದು ಮಧ್ಯಾಹ್ನ 2ರಿಂದ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದ್ದಾರೆ.
ಅವರು ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಯಕ್ಷಗಾನ ಕಲಾವಿದರ ಹಿತದೃಷ್ಟಿಯಿಂದ ಟ್ರಸ್ಟ್ ಸ್ಥಾಪಿಸಲಾಗಿದ್ದು, ಹಿರಿಯ ಕಲಾವಿದರಿಗೆ ಪಟ್ಲ ಪ್ರಶಸ್ತಿ, ಯಕ್ಷಗೌರವ, ಅಶಕ್ತ ಕಲಾವಿದರಿಗೆ ಗೌರವ ಧನ, ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ನೀಡುತ್ತಿದೆ ಎಂದ ಅವರು, ಅಶಕ್ತ ಕಲಾವಿದರಿಗೆ  ಮನೆಗಳನ್ನು ನಿರ್ಮಿಸಿ ಕೊಡುವ ಮಹತ್ವದ ಉದ್ದೇಶ ಹೊಂದಿದೆ. ಈ ನಿಟ್ಟಿನಲ್ಲಿ ಟ್ರಸ್ಟ್ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದರು.

ಯಕ್ಷ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಕಾರ್ಯಕ್ರಮದ ಮಾಹಿತಿ ನೀಡಿ, ಪಟ್ಲ ಫೌಂಡೇಶನ್ ಟ್ರಸ್ಟ್ ನ ಬೆಳ್ತಂಗಡಿ ಘಟಕದ ಅಧ್ಯಕ್ಷ ಭುಜಬಲಿ ಧರ್ಮಸ್ಥಳ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿರುವರು. ವಿವಿಧ ಕ್ಷೇತ್ರಗಳ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿರುವರು. ಹಿರಿಯ ಅರ್ಥಧಾರಿ ಪಿ.ಕಾಂತಪ್ಪ ಟೈಲರ್ ಅವರನ್ನು ಸಮ್ಮಾನಿಸಲಾಗುವುದು. ಮಧ್ಯಾಹ್ನ ವಾಮನ ಚರಿತ್ರೆ ತಾಳಮದ್ದಲೆ, ಸಂಜೆ ಸೀತಾ ಪರಿತ್ಯಾಗ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು. 

ಯಕ್ಷ ಕಲಾವಿದ ದಿವಾಕರ್ ದಾಸ್ ಕಾವಳಕಟ್ಟೆ, ಪಿಲಾತಬೆಟ್ಟು ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಪುಂಜಾಲಕಟ್ಟೆ ಘಟಕ ಗೌರವಾಧ್ಯಕ್ಷ ವಸಂತ ಶೆಟ್ಟಿ ಕೇದಗೆ, ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ವಾಮದಪದವು, ಸಂಚಾಲಕ ರಮೇಶ್ ಶೆಟ್ಟಿ ಮಜಲೋಡಿ,  ಪ್ರಧಾನ ಕಾರ್ಯದರ್ಶಿ ಕಮಲ್ ಶೆಟ್ಟಿ ಬೊಳ್ಳಾಜೆ, ಪ್ರಮುಖರಾದ ಜಯಂತ ಶೆಟ್ಟಿ, ತುರವೇ ಪುಂಜಾಲಕಟ್ಟೆ ಘಟಕ ಅಧ್ಯಕ್ಷ ಗಿರೀಶ್ ಮೂಲ್ಯ ಅನಿಲಡೆ, ಮಹಿಳಾ ಸಮಿತಿಯ ಪದಾಧಿಕಾರಿಗಳಾದ ಲಕ್ಷ್ಮೀ ಸಂಜೀವ ಶೆಟ್ಟಿ ಮುಗೆರೋಡಿ, ತುಳಸಿ ಹಾರಬೆ, ಶೋಭಾ ವಿಜಯನಾಥ ಶೆಟ್ಟಿ ಹಾಗೂ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.  

ಈ ಸಂದರ್ಭದಲ್ಲಿ ಯಕ್ಷ ನಾಟ್ಯ ತರಗತಿಯ ಉದ್ಘಾಟನೆ ನಡೆಯಿತು. ಶಿಕ್ಷಕ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News