ಜನರ ಸೇವಕನಾಗಿ ದುಡಿಯುತ್ತೇನೆ: ಪ್ರಮೋದ್ ಮಧ್ವರಾಜ್

Update: 2019-03-27 16:21 GMT

ಹೆಬ್ರಿ, ಮಾ. 27: ಕೆಲಸ ಮಾಡುವ ಪ್ರಮೋದ್ ಬೇಕಾ...ಅಥವಾ... ಕೆಲಸ ಮಾಡದ ಶೋಭಾ ಕರಂದ್ಲಾಜೆ ಬೇಕಾ ಎಂದು ನೀವೆಲ್ಲ ಯೋಚಿಸಿ, ನನ್ನನ್ನು ಗೆಲ್ಲಿಸಿ. ಮುಂದಿನ 5 ವರ್ಷಗಳ ಕಾಲ ಜನರ ಸೇವಕನಾಗಿ ದುಡಿಯುತ್ತೇನೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸಂ ಹಾಗೂ ಜೆಡಿಎಸ್‌ನ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಚಿಹ್ನೆಯಲ್ಲಿ ಸ್ಪರ್ಧಿಸಿರುವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಬುಧವಾರ ಹೆಬ್ರಿ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾವಹಿಸಿ ಅವರು ಮಾತನಾಡುತಿದ್ದರು.

ನಾನು ಸಚಿವನಾಗಿದ್ದಾಗ ಉಡುಪಿ ಕ್ಷೇತ್ರದ ಮಟ್ಟಿಗೆ ಸ್ವಾರ್ಥಿಯಾಗಿದ್ದೆ. ಮುಂದೆ ಲೋಕಸಭಾ ಕ್ಷೇತ್ರದ ಮಟ್ಟಿಗೆ ಸ್ವಾರ್ಥಿಯಾಗಿ ಜನಸೇವೆ ಮುಂದು ವರಿಸುವೆ ಎಂದು ಪ್ರಮೋದ್ ಮಧ್ವರಾಜ್ ಭರವಸೆ ನೀಡಿದರು.

ಸತ್ಯ ಹೇಳುವ, ಪ್ರಾಮಾಣಿಕ ರಾಜಕಾರಣಿ ಇದ್ದರೆ ದೇಶದಲ್ಲಿ ನಾನು ಮಾತ್ರ ಎಂದ ಮಧ್ವರಾಜ್, ಈ ತನಕ ಜನರ ಸೇವೆಯನ್ನು ಮಾಡಿದ್ದೇನೆ. ಓಟಿಗೋಸ್ಕರ ಸುಳ್ಳು ಹೇಳುವ ಅನಿವಾರ್ಯತೆ ಇಲ್ಲ. ಜನರೊಂದಿಗೆ ನಿರಂತರ ಇರುವ ಸಂಸದರು ನಿಮಗೆ ಬೇಕಾ ಅಪರೂಪಕ್ಕೆ ಬಂದು ಹೋಗುವ ಸಂಸದರು ಬೇಕಾ ಯೋಚಿಸಿ ಎಂದು ಅವರು ನುಡಿದರು.

ಉಡುಪಿ ಜಿಲ್ಲೆಯ ಮರಳು ಲೋಡಿಗೆ ಒಂದು ಲಕ್ಷದಂತೆ ಬೆಂಗಳೂರಿಗೆ ಹೋಗುತ್ತಿತ್ತು. ನಮ್ಮ ಜಿಲ್ಲೆಯ ಮರಳು ನಮ್ಮ ಜಿಲ್ಲೆಗೆ ದೊರೆಯಬೇಕು ಎಂದು ಕಾನೂನು ತಂದು ನಮ್ಮ ಜನರಿಗೆ ಮರಳು ದೊರೆಯುವಂತೆ ಮಾಡಿದೆ. ಈಗಿನ ಮರಳು ಸಮಸ್ಯೆಗೆ ಪ್ರಮೋದ್ ಮಧ್ವರಾಜ್ ಕಾರಣ ಎಂದು ಈಗ ಅಪಪ್ರಚಾರ ಮಾಡಲಾಗುತ್ತಿದೆ ಎಂವರು ಬೇಸರ ವ್ಯಕ್ತಪಡಿಸಿದರು.

ಉಡುಪಿ ಜಿಲ್ಲೆಯ ಮರಳು ಸಮಸ್ಯೆಗೆ ಸಂಸದೆ ಶೋಭಾ ಕರಂದ್ಲಾಜೆ ವೈಫಲ್ಯವೇ ಕಾರಣ. ಕೇಂದ್ರ ಸರಕಾರದ ಕಠಿಣ ಮರಳು ನೀತಿಯಿಂದ ನಮ್ಮ ಜಿಲ್ಲೆಗೆ ಸಮಸ್ಯೆಯಾಗಿದೆ. ಇದರ ಬಗ್ಗೆ ಸಂಸದರು ತುಟಿ ಬಿಚ್ಚುತ್ತಿಲ್ಲ ಎಂದು ಪ್ರಮೋದ್ ಟೀಕಿಸಿದರು.

ಹುಲಿ ಯೋಜನೆ ಜಾರಿ; ಶೋಭಾ ಮೌನ: ಕೇಂದ್ರ ಅರಣ್ಯ ಪರಿಸರ ಸಚಿವ ಪ್ರಕಾಶ್ ಜಾವಡೇಕರ್, ಕುದುರೆಮುಖ ಸೇರಿ ದೇಶದಲ್ಲಿ 45 ಹುಲಿ ಕಡೆಗಳಲ್ಲಿ ಯೋಜನೆ ಜಾರಿಗೊಳಿಸುವಾಗ ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ನಳಿನ್‌ ಕುಮಾರ್ ಮೌನವಾಗಿದ್ದರಿಂದ ಹುಲಿ ಯೋಜನೆ ಜಾರಿ ಯಾಗಿದೆ. ಕರ್ನಾಟಕದಲ್ಲಿ ಕಸ್ತೂರಿರಂಗನ್ ವರದಿಯ ಅನುಷ್ಠಾನ ಆಗಬಾರದು ಎಂದು ಮೂರು ಸಲ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ವರದಿ ನೀಡಿದ್ದರೂ ನರೇಂದ್ರ ಮೋದಿಯ ಕೇಂದ್ರ ನಮ್ಮ ವರದಿಗೆ ಕಿವಿಗೊಡುತ್ತಿಲ್ಲ. ಪರಿಣಾಮ ಕಸ್ತೂರಿ ರಂಗನ್ ವರದಿ ಜಾರಿಯ ತೂಗುಕತ್ತಿ ನಮ್ಮ ಮೇಲಿದೆ ಎಂದು ಕಾರ್ಕಳದ ಮಾಜಿ ಶಾಸಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗೋಪಾಲ ಭಂಡಾರಿ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಭರತ್ ಮುಂಡೋಡಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಕಾಂಗ್ರೆಸ್ ಮುಖಂಡ ನೀರೆ ಕೃಷ್ಣ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ್, ಪಕ್ಷದ ಪ್ರಮುಖರಾದ ಎಚ್.ಶೀನ ಪೂಜಾರಿ, ರಾಘವ ದೇವಾಡಿಗ, ಜೆಡಿಎಸ್ ಕಾರ್ಕಳ ಕ್ಷೇತ್ರದ ಕಾರ್ಯಧ್ಯಕ್ಷ ಹೆಬ್ರಿ ಶ್ರೀಕಾಂತ್ ಪೂಜಾರಿ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಉಡುಪಿ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮುದ್ರಾಡಿ ಸಂತೋಷ ಕುಮಾರ್ ಶೆಟ್ಟಿ ನಿರೂಪಿಸಿ, ಎಚ್. ಜನಾರ್ದನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News